ರೈತ ದ್ರೋಹಿ ಡಿ.ಕೆ.ಶಿವಕುಮಾರ್‌ ನೈಸ್ ಪರ: ಯಶವಂತ್‌ ಆರೋಪ

KannadaprabhaNewsNetwork | Published : Oct 18, 2024 12:11 AM

ಸಾರಾಂಶ

ಸುಪ್ರೀಂ ಕೋರ್ಟ್ ಹಾಗೂ ಸದನ ಸಮಿತಿಯಿಂದ ಛೀಮಾರಿಗೆ ಒಳಗಾಗಿರುವ ನೈಸ್ ಕಂಪನಿ ಪರ ವಕಾಲತ್ತು ವಹಿಸುತ್ತಿರುವ ರೈತ ದ್ರೋಹಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟಿಸುವಂತೆ ಟಿ.ಯಶವಂತ್‌ ಸಂತ್ರಸ್ತ ರೈತರು ಹಾಗೂ ಸಂಘಟನೆಯ ಜಿಲ್ಲಾ - ತಾಲೂಕು ಘಟಕಗಳಿಗೆ ರಾಮನಗರದ ಸುದ್ದಿಗೋಷ್ಠಿಯಲ್ಲಿ ಕರೆ ನೀಡಿದರು

ಡಿಕೆಶಿ ಪ್ರತಿಕೃತಿ ದಹಿಸಿ ಪ್ರತಿಭಟಿಸಲು ಸಂತ್ರಸ್ತ ರೈತರು, ಜಿಲ್ಲಾ, ತಾಲೂಕು ಘಟಕಗಳಿಗೆ ಕರೆ

ಕನ್ನಡಪ್ರಭ ವಾರ್ತೆ ರಾಮನಗರ

ಹತ್ತು ಹಲವು ಅಕ್ರಮಗಳಿಗಾಗಿ ಸುಪ್ರೀಂ ಕೋರ್ಟ್ ಹಾಗೂ ಸದನ ಸಮಿತಿಯಿಂದ ಛೀಮಾರಿಗೆ ಒಳಗಾಗಿರುವ ನೈಸ್ ಕಂಪನಿ ಪರ ವಕಾಲತ್ತು ವಹಿಸುತ್ತಿರುವ ರೈತ ದ್ರೋಹಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್‌ ಸಂತ್ರಸ್ತ ರೈತರು ಹಾಗೂ ಸಂಘಟನೆಯ ಜಿಲ್ಲಾ - ತಾಲೂಕು ಘಟಕಗಳಿಗೆ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೈಸ್ ಪರ ಮಾತನಾಡುತ್ತಿರುವುದು ರೈತ ದ್ರೋಹ ಹಾಗೂ ಅಕ್ರಮ ಕೂಟದ ಬಹಿರಂಗ ಪ್ರದರ್ಶನ ಎಂದು ಟೀಕಿಸಿದ ಅವರು, ಮೂಲ ಒಪ್ಪಂದ ಚೌಕಟ್ಟು ಉಲ್ಲಂಘನೆ, ಒಪ್ಪಂದ ವ್ಯಾಪ್ತಿ ಮೀರಿ ಭೂ ಕಬಳಿಕೆ, ಬಿಎಂಐಸಿ ಕ್ರಿಯಾ ಒಪ್ಪಂದದ ಉಲ್ಲಂಘನೆ, ಹೆಚ್ಚುವರಿ ಭೂಮಿ ಕಬಳಿಕೆ, ರಸ್ತೆ ನಿರ್ಮಾಣದ ಹೆಸರಿನಲ್ಲಿ ಪಡೆದ ಭೂಮಿಗಳ ರಿಯಲ್ ಎಸ್ಟೇಟ್ ಮಾರಾಟ, ಕಾನೂನು ಬಾಹಿರ ಕ್ರಮ, ದೌರ್ಜನ್ಯ ದಬ್ಬಾಳಿಕೆ ಭ್ರಷ್ಟಾಚಾರದ ಮೂಲಕ ರೈತರ ಭೂ ಸ್ವಾಧೀನ ಮುಂತಾದ ಕೃತ್ಯಗಳು ನಡೆದಿವೆ ಎಂದರು.

ಬೆಂಗಳೂರು - ಮೈಸೂರು ಮಧ್ಯೆ ಹತ್ತು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ನೈಸ್ ಯೋಜನೆ ಅಪ್ರಸ್ತುತವಾಗಿದೆ. ಯೋಜನೆ ಕಾರ್ಯಗತ ಆಗದೇ ಇದ್ದರೂ ಮೂವತ್ತು ವರ್ಷಗಳ ಹಿಂದಿನ ಕೆಐಎಡಿಬಿ ಭೂ ಸ್ವಾಧೀನವನ್ನು ಉಳಿಸಿಕೊಂಡು ಬರುತ್ತಿರುವುದು ಅನ್ಯಾಯದ ಪರಮಾವಧಿ. ನೈಸ್ ಕಂಪನಿಯ ಭೂ ಸ್ವಾಧೀನದಿಂದ ಈ ಯೋಜನೆ ವ್ಯಾಪ್ತಿಯ ರೈತರು ಅಪಾರ ಯಾತನೆ ಮತ್ತು ಸಂಕಟ ಅನುಭವಿಸುತ್ತಿದ್ದಾರೆ. ಅನ್ಯಾಯದ ಭೂ ಕಬಳಿಕೆ ವಿರುದ್ಧ ರಕ್ಷಣೆಗಾಗಿ ಕೋರ್ಟ್ ಕಚೇರಿಗಳಿಗೆ ಅಲೆದು ಲಕ್ಷಾಂತರ ರು.ಹಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.

ರೈತರ ನೆರವಿಗೆ ನ್ಯಾಯವಾಗಿ ನಿಲ್ಲಬೇಕಾದ ಸರ್ಕಾರದ ಉಪ ಮುಖ್ಯಮಂತ್ರಿಗಳು ಕಪ್ಪು ಪಟ್ಟಿಯಲ್ಲಿ ಇರಬೇಕಾದ ಹಗರಣ -ಭ್ರಷ್ಟಾಚಾರದ ಕುಖ್ಯಾತಿಗೆ ಒಳಗಾದ ನೈಸ್ ಕಂಪನಿ ಪರವಾಗಿ ವಕಾಲತ್ತು ವಹಿಸುವುದು ಬೇಜವಾಬ್ದಾರಿ ಮತ್ತು ಅವರ ಹುದ್ದೆಗೆ ಯೋಗ್ಯವಲ್ಲದ್ದು. ಮಾತ್ರವಲ್ಲ, ಸರ್ಕಾರದ ಕಾರ್ಪೊರೇಟ್ ಲೂಟಿ ಪರ ನೀತಿಗಳಿಗಿಂತ ತಾನು ಮತ್ತಷ್ಟು ಮುಂದೆ ಇದ್ದೇನೆ ಎಂದು ತನ್ನನ್ನು ಬಿಂಬಿಸಿಕೊಳ್ಳುವ ಹೇಳಿಕೆ ಕೂಡ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಮಾತನ್ನು ಕೂಡಲೇ ವಾಪಸ್ಸು ಪಡೆದು ರೈತ ಸಮುದಾಯದ ಕ್ಷಮೆ ಕೋರುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಗಳು ಸೂಚಿಸಬೇಕು. ಟಿ.ಬಿ.ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ಶಿಫಾರಸುಗಳನ್ನು ಜಾರಿ ಮಾಡಬೇಕು, ಬಿಎಂಐಸಿ ಯೋಜನೆ ರದ್ದುಪಡಿಸಿ ನೈಸ್ ಕಂಪನಿ ಹಗರಣ, ಭ್ರಷ್ಟಾಚಾರ, ಅಕ್ರಮಗಳನ್ನು ಶಿಕ್ಷೆಗೆ ಒಳಪಡಿಸಬೇಕು, ಹೆಚ್ಚುವರಿ ಭೂಮಿಯನ್ನು ನೈಸ್ ಕಂಪನಿಯಿಂದ ವಾಪಸ್‌ ಪಡೆಯುವ ಸುಪ್ರೀಂ ಕೋರ್ಟ್ ತೀರ್ಪು ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಶವಂತ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಎನ್.ವೆಂಕಟಾಚಲಯ್ಯ, ಕಾರ್‍ಯದರ್ಶಿ ಚಂದ್ರಶೇಖರ, ಕುಂಟೀರಪ್ಪ, ಸಿಐಟಿಯುನ ಜಿಲ್ಲಾಧ್ಯಕ್ಷ ರಾಘವೇಂದ್ರ, ಚಂದ್ರು ಇತರರಿದ್ದರು.

Share this article