ರೈತ ಸಂಘದಿಂದ ತೋಟಗಾರಿಕೆ ಇಲಾಖೆ ಕಚೇರಿಗ ಬೀಗ

KannadaprabhaNewsNetwork |  
Published : Aug 14, 2026, 01:45 AM IST
ಹಾನಗಲ್ಲಿನಲ್ಲಿ ರೈತ ಸಂಘ ತೋಟಗಾರಿಕೆ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿತು....... | Kannada Prabha

ಸಾರಾಂಶ

ಹಾನಗಲ್ಲಿನಲ್ಲಿ ರೈತ ಸಂಘ ತೋಟಗಾರಿಕೆ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿತು.

ಹಾನಗಲ್ಲ: ಮಾರನಬೀಡ, ಮಾಸನಕಟ್ಟಿ, ಬೈಚವಳ್ಳಿ, ಕೊಪ್ಪರಸಿಕೊಪ್ಪ ಗ್ರಾಮ ಪಂಚಾಯಿತಿಗಳಿಗೆ ಶುಂಠಿ ಬೆಳೆವಿಮೆ ತಡೆಹಿಡಿದಿರುವುದು, ಹಾನಗಲ್ಲ ತಾಲೂಕಿಗೆ ಈವರೆಗೂ ಮಾವು, ಅಡಕೆ ಬೆಳೆವಿಮೆ ಘೋಷಣೆಯಾಗದಿರುವುದನ್ನು ಖಂಡಿಸಿ ರೈತಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಗುರುವಾರ ಇಲ್ಲಿನ ತೋಟಗಾರಿಕೆ ಇಲಾಖೆಗೆ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿದರು.

ಈ ವೇಳೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ,

ಅಧಿಕಾರಿಗಳ ದಾರಿ ತಪ್ಪಿಸುವ ಹೇಳಿಕೆಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಬೆಳೆವಿಮೆ ಸಕಾಲಿಕವಾಗಿ ಲಭ್ಯವಾಗದೇ ರೈತ ಸಂಘ ಪದೇ ಪದೇ ಪ್ರತಿಭಟನೆ, ಸರ್ಕಾರಿ ಕಚೇರಿಗಳಿಗೆ ಬೀಗ ಹಾಕುವ ಅನಿವಾರ್ಯತೆಯನ್ನು ತಂದೊಡ್ಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬೆಳೆವಿಮೆಗೆ ಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರದ ವಂತಿಗೆ ವಿಳಂಬವೇ ಕಾರಣ ಎಂದು ತಿಳಿದಿದೆ. ಅಲ್ಲದೆ ಸಕಾಲಿಕವಾಗಿ ಬೆಳೆವಿಮೆ ಬಿಡುಗಡೆಗೊಳಿಸುವಲ್ಲಿ ತಾಲೂಕಿನ ಶಾಸಕರು, ಈ ಕ್ಷೇತ್ರದ ಸಂಸದರು ಬಿಡಿಕಾಳಿನಷ್ಟು ಕಾಳಜಿವಹಿಸದಿರುವುದು ಖೇದದ ಸಂಗತಿ. ಬೆಳೆವಿಮೆ ವಿಷಯದಲ್ಲಿ ಅವರ ಹೇಳಿಕೆಗಳು ಹಾಸ್ಯಾಸ್ಪದವಾಗಿ ಕಾಣುತ್ತಿವೆ. ೯ ತಿಂಗಳು ತಡವಾಗಿದ್ದರೂ ಕೂಡ ಇನ್ನೂ ಕಾಯಿರಿ ಎಂದು ಸೂಚಿಸುವ ಜನಪ್ರತಿನಿಧಿಗಳಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಬೆಳೆ ವಿಮೆ ಕಂತು ತುಂಬುವ ದಿನಾಂಕ ನಿಗದಿಗೊಳಿಸುವಂತೆ ಬೆಳೆವಿಮೆ ಪರಿಹಾರ ನೀಡುವ ದಿನಾಂಕವನ್ನೂ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡ ಮಲ್ಲೇಶಪ್ಪ ಪರಪ್ಪನವರ ಮಾತನಾಡಿ, ರೈತರನ್ನು ಸುಲಿಗೆ ಮಾಡುತ್ತಿರುವ ಸರ್ಕಾರಗಳ ದ್ವಂದ್ವ ನೀತಿ ರೈತರಿಗೆ ಅರ್ಥವಾಗುತ್ತಿಲ್ಲ. ರೈತರ ಒಗ್ಗಟ್ಟು ಮಾತ್ರ ನಮ್ಮ ಬೇಡಿಕೆಗೆ ಸರಿಯಾದ ದಾರಿ ತೋರಿಸಬಲ್ಲದು. ನಾವು ಯಾರಿಗೂ ಅಂಜುವ ಅಗತ್ಯವಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆಯೇ ಹೊರತು ಯಾರ ಮೇಲು ನಾವು ಹೊರೆಯಾಗಿಲ್ಲ. ರೈತರು ಹೊರೆ ಹೊತ್ತು ಅನ್ನ ಹಾಕುತ್ತಾರೆಯೇ ಹೊರತು, ಯಾರಿಗೂ ಹೊರೆಯಾಗುವುದಿಲ್ಲ. ಸರ್ಕಾರಗಳ ನಿರ್ಲಕ್ಷ್ಯ ರೈತರನ್ನು ಇನ್ನೂ ಹತಾಶಗೊಳಿಸುವ ಉದ್ದೇಶಕ್ಕಾಗಿಯೇ ಇದೆ ಎಂದು ಎಚ್ಚರಿಸಿದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ವೀರಭದ್ರಸ್ವಾಮಿ ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿ, ಎರಡು ದಿನಗಳಲ್ಲಿ ೫ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಕಿ ಇರುವ ಶುಂಠಿ ಬೆಳೆವಿಮೆ ಬಿಡುಗಡೆಯಾಗಲಿದೆ. ಈ ವ್ಯಾಪ್ತಿಯಲ್ಲಿ ೭೪ ರೈತರು ಶುಂಠಿ ಬೆಳೆ ಹಾಕದೇ ಶುಂಠಿ ಬೆಳೆಗೆ ವಿಮೆ ಮೊತ್ತ ತುಂಬಿರುವುದು ಕಂಡು ಬಂದಿದೆ. ಅದರ ವಿಚಾರಣೆಯನ್ನು ತಡೆ ಹಿಡಿದು ಉಳಿದೆಲ್ಲ ರೈತರಿಗೆ ಶುಂಠಿ ಬೆಳೆವಿಮೆ ಎರಡು ದಿನಗಳಲ್ಲಿ ರೈತರ ಖಾತೆಗೆ ಜಮಾ ಆಗಲಿದೆ ಎಂದು ಭರವಸೆ ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಖಚಿತ ಮಾಹಿತಿ ನೀಡಿದರು.

ನಂತರ ಎರಡು ದಿನಗಳ ಕಾಲ ಕಾಯುವ ನಿರ್ಧಾರದೊಂದಿಗೆ ರೈತ ಸಂಘದ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಪ್ರಧಾನ ಕಾರ್ಯದರ್ಶಿ ರುದ್ರಪ್ಪ ಹಣ್ಣಿ ಮಾತನಾಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಶೋಕ ಸಂಶಿ, ರಾಜು ದಾನಪ್ಪನವರ, ಶಂಭು ಮಣಕಟ್ಟಿ, ರವಿ ನೆರಕಿಮನಿ, ಷಣ್ಮುಖ ಅಂದಲಗಿ, ಸೋಮಣ್ಣ ಜಡೆಗೊಂಡರ, ರಾಜೇಂದ್ರ ಘಾಳಪೂಜಿ, ನಾಗರಾಜ ಹಿತ್ಲವರ, ಪ್ರಮೋದ ಪಾಟೀಲ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುಟುಕುಗಳಿದೆ ಅದ್ಭುತ ಸಂದೇಶ ಶಕ್ತಿ: ಡಾ. ಅನ್ನದಾನೀಶ್ವರ ಶ್ರೀ
ಎಸ್.ಎಸ್. ಪಾಟೀಲ ಶರಣ ಪಥದ ಹಿರಿಯ ಜೀವಿ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ