ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ರೈತ ಜಾಗೃತಿ ಸಮಾವೇಶ

KannadaprabhaNewsNetwork |  
Published : Nov 04, 2025, 12:45 AM IST
ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ರೈತ ಜಾಗೃತಿ ಸಮಾವೇಶ | Kannada Prabha

ಸಾರಾಂಶ

ಸಿ ಅಂಡ್‌ ಡಿ ಭೂಮಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸೋಮವಾರ ಪಟ್ಟಣದ ಜೇಸಿ ವೇದಿಕೆಯಲ್ಲಿ ರೈತ ಜಾಗೃತಿ ಸಮಾವೇಶ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ರೈತ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾಫಿ ಬೆಳೆಗಾರರ ಸಂಘದ ಆಶ್ರಯದಲ್ಲಿ ಸೋಮವಾರ ಪಟ್ಟಣದ ಜೇಸಿ ವೇದಿಕೆಯಲ್ಲಿ ರೈತ ಜಾಗೃತಿ ಸಮಾವೇಶ ನಡೆಯಿತು.ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ರೈತರು, ಸರ್ಕಾರಗಳು ಪರವಾಗಿ ವರ್ತಿಸಬೇಕು. ರೈತರ ಆಸ್ತಿ ಸಮಸ್ಯೆಗಳನ್ನು ಕೂಡಲೆ ಬಗೆಹರಿಸುವಂತೆ ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಪ್ರತಿನಿಧಿ ಮಂಜುಕಿರಣ್ ಮಾತನಾಡಿ, 2019 ರಲ್ಲಿ ದೆಹಲಿಯಲ್ಲಿ ರೈತರ ಮರಣಶಾಸನ ಎಂದು ಕರೆಸಿಕೊಂಡಿದ್ದ ಮೂರು ಕಾಯಿದೆಗಳನ್ನು ವಿರೋಧಿಸಿ ವರ್ಷಗಳ ಕಾಲ ರೈತರು ಹೋರಾಟ ಮಾಡಿದರು. ಅಂದಿನ ಕೇಂದ್ರ ಸರ್ಕಾರ ಅನೇಕ ರೀತಿಯಲ್ಲಿ ರೈತರಿಗೆ ಹಿಂಸೆ ನೀಡಿತು. 700 ಮಂದಿ ರೈತ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದರು. ರೈತರ ಹೋರಾಟಗಾರರನ್ನು ಭಯೋತ್ಪಾದಕರು, ಉಗ್ರಗಾಮಿಗಳ ರೀತಿ ಪರಿಗಣಿಸಿ, ರೈತರೆ ಅಲ್ಲ ಎಂದು ದೂಷಿಸಲಾಯಿತು ಎಂದು ಹೇಳಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಸಿ ಮತ್ತು ಡಿ ಭೂಮಿ ಸಮಸ್ಯೆ ಕಠಿಣವಾಗಿದೆ. ಮಲೆನಾಡು ಭಾಗದ ಶಾಸಕರು ರಾಜಕೀಯ ರಹಿತವಾಗಿ ಒಂದಾಗಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿ ಬಲಿಷ್ಠ ಕಾನೂನು ತಜ್ಞರ ತಂಡವನ್ನು ಮಾಡಿಕೊಂಡು ಕಾನೂನು ಹೋರಾಟಕ್ಕೆ ಮುಂದಾಗಬೇಕು. ರೈತರ ಪರವಾಗಿ ಕೆಲಸ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ರೈತಪರ ಪಾಲಿಸಿಯನ್ನು ರೂಪಿಸುವ ಅಗತ್ಯತೆ ಇದೆ ಎಂದು ಹೇಳಿದರು. ರೈತರ ಭೂಮಿ ರೈತರ ತಾಯಿ:

ರಾಜ್ಯ ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ರೈತರ ಭೂಮಿ ರೈತರ ತಾಯಿ ಇದ್ದಹಾಗೆ, ಅದನ್ನು ಪ್ರಾಣ ಕೊಟ್ಟಾದರೂ ಉಳಿಸಿಕೊಳ್ಳಬೇಕು ಎಂದು ಹೇಳಿದರು. 140 ಕೋಟಿ ಜನರಿಗೆ ಅನ್ನಕೊಡುವ ರೈತರ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ, ಸರ್ಕಾರ ಹಾಗು ಅದರ ಅಂಗ ಸಂಸ್ಥೆಗಳೇ ನಾಶವಾಗುತ್ತವೆ ಎಂದು ಅಕ್ರೋಶದ ಮಾತುಗಳನ್ನಾಡಿದರು. ರೈತ ದ್ರೋಹಿಗಳನ್ನು ರೈತರು ಯಾವತ್ತೂ ಕ್ಷಮಿಸಬಾರದು. ರೈತರು ತಮ್ಮ ಹಕ್ಕನ್ನು ಪ್ರತಿಪಾದಿಸದಿದ್ದರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ. ಸಿ ಆ್ಯಂಡ್ ಡಿ ಹೆಸರಿನಲ್ಲಿ ರೈತರು ಹಲವು ದಶಕಗಳಿಂದ ಕೃಷಿಭೂಮಿಯನ್ನು ಅರಣ್ಯ ಇಲಾಖೆ ಕಸಿದುಕೊಳ್ಳಲು ಪ್ರಯತ್ನಿಸಿದರು ಉಗ್ರಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು.ಕಳೆದ ಒಂದೂವರೆ ವರ್ಷಗಳಿಂದ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಅನೇಕ ಹೋರಾಟಗಳನ್ನು ಮಾಡಲಾಗಿದೆ. ಸಮಸ್ಯೆಗಳ ಬಗ್ಗೆ ಶಾಸಕರು, ಸಂಸದರು, ಮುಖ್ಯಮಂತ್ರಿಗಳು, ಅರಣ್ಯ ಹಾಗೂ ಕಂದಾಯ ಇಲಾಖಾ ಸಚಿವರನ್ನೂ ಭೇಟಿ ಮಾಡಿ ಗಮನ ಸೆಳೆಯಲಾಗಿದೆ. ಆದರೆ ಅರಣ್ಯ ಇಲಾಖೆಯವರು ರೈತರ ಗಮನಕ್ಕೆ ತರದೆ ಸರ್ವೆ ಮಾಡುತ್ತ ರೈತರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ದೂರಿದರು. ಡಿಸೆಂಬರ್ ತಿಂಗಳಿನಿಂದ ನಿರಂತರ ಹೋರಾಟ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು.ಸರ್ಕಾರದ ವಿರುದ್ಧ ಧಿಕ್ಕಾರ:

ಅಕ್ರಮ ಒತ್ತುವರಿ ಹೆಸರಿನಲ್ಲಿ ಮುಕ್ಕೋಡ್ಲು ಗ್ರಾಮದ ನಾಣಿಯಪ್ಪ ಅವರ ಕಾಫಿ ತೋಟವನ್ನು ನಾಶಗೊಳಿಸಿದ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ, ವೇದಿಕೆಯಲ್ಲಿ ನಾಣಿಯಪ್ಪ ಕುಟುಂಬಸ್ಥರು ತಮ್ಮ ಆಸ್ತಿ ದಾಖಲೆಯನ್ನು ಸುಟ್ಟು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ವೇದಿಕೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ರೈತ ಮುಖಂಡರಾದ ಕೆ.ಎಂ.ಲೋಕೇಶ್, ಬಿ.ಜೆ.ದೀಪಕ್, ಕೂತಿ ದಿವಾಕರ್ ಮತ್ತಿತರ ರೈತ ಮುಖಂಡರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ