ರೈತರೇ ಎರೆಹುಳು ಸಾಕಾಣಿಕೆ ಮಾಡಿ ಅರ್ಥಿಕವಾಗಿ ಸದೃಢರಾಗಿ: ಸಿ.ಎಲ್.ನಾಗರಾಜು

KannadaprabhaNewsNetwork | Published : Feb 6, 2025 12:16 AM

ಕನಿಷ್ಠ ಒಂದು ಎಕರೆ ಹಿಪ್ಪು ನೇರಳೆ ತೋಟದಲ್ಲಿ 250-300 ಮೊಟ್ಟೆಗಳ ಸಾಕಾಣಿಕೆ ಮಾಡಬಹುದು. ರೈತರು ವಾರ್ಷಿಕ 5 ರಿಂದ 6 ಲಕ್ಷ ರು. ಆದಾಯ ಪಡೆಯುವಂತೆ, ಜೊತೆಗೆ ಎರೆಹುಳು ಸಾಕಾಣಿಕೆ ಮಾಡಿ ಎರೆಹುಳು ಗೊಬ್ಬರ ಮಾರಾಟ ಮಾಡಿಯು ರೈತರು ಆದಾಯ ಪಡೆಯಬಹುದು.

ಕನ್ನಡಪ್ರಭ ವಾರ್ತೆ ಹಲಗೂರು

ತಮ್ಮ ಜಮೀನುಗಳಲ್ಲಿ ಎರೆಹುಳು ಸಾಕಾಣಿಕೆ ಮಾಡುವ ಮೂಲಕ ಗೊಬ್ಬರವನ್ನು ತಯಾರಿಸಿ ಮಾರಾಟ ಮಾಡುವುದರಿಂದ ರೈತರು ಆರ್ಥಿಕವಾಗಿ ಜೀವನ ಸದೃಢವಾಗಲು ಸಹಕಾರಿಯಾಗಿದೆ ಎಂದು ಕೋಲಾರ ಸಾವಯವ ಕೃಷಿ ತಜ್ಞ, ಚಿಟ್ಟನಹಳ್ಳಿ ಸಿ.ಎಲ್. ನಾಗರಾಜು ತಿಳಿಸಿದರು.

ಗುಂಡಾಪುರ ಗ್ರಾಮದಲ್ಲಿ ಹಲಗೂರು ತಾಂತ್ರಿಕ ಸೇವಾ ಕೇಂದ್ರ ಮತ್ತು ತಾಪಂನಿಂದ ನಡೆದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ರೈತರು ತಮ್ಮ ಭೂಮಿಗೆ ರಾಸಾಯಿನಿಕ ಗೊಬ್ಬರ ಬಳಸದೆ ಸಾವಯವ ಕೃಷಿ ಮಾಡಬೇಕು ಎಂದರು.

ರೇಷ್ಮೆ ತ್ಯಾಜ್ಯವನ್ನು ರಸ್ತೆಗಳಲ್ಲಿ ಬಿಸಾಡದೆ ಹಿಪ್ಪುನೇರಳೆ ತೋಟಗಳಲ್ಲಿ ಟ್ರಂಚಿಂಗ್ ಮಲ್ಚಿಂಗ್ ಮಾಡುವ ಮೂಲಕ ಭೂಮಿಗೆ ಸೇರಿಸಿದ ನಂತರ ಜೀವಾಮೃತ ಬಳಸಿ ಹಿಪ್ಪು ನೇರಳೆ ಸೊಪ್ಪಿನ ಇಳುವರಿ ಹೆಚ್ಚಿಸಬೇಕು ಎಂದರು.

ಕನಿಷ್ಠ ಒಂದು ಎಕರೆ ಹಿಪ್ಪು ನೇರಳೆ ತೋಟದಲ್ಲಿ 250-300 ಮೊಟ್ಟೆಗಳ ಸಾಕಾಣಿಕೆ ಮಾಡಬಹುದು. ರೈತರು ವಾರ್ಷಿಕ 5 ರಿಂದ 6 ಲಕ್ಷ ರು. ಆದಾಯ ಪಡೆಯುವಂತೆ, ಜೊತೆಗೆ ಎರೆಹುಳು ಸಾಕಾಣಿಕೆ ಮಾಡಿ ಎರೆಹುಳು ಗೊಬ್ಬರ ಮಾರಾಟ ಮಾಡಿಯು ರೈತರು ಆದಾಯ ಪಡೆಯಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ರೇಷ್ಮೆ ಉಪ ನಿರ್ದೇಶಕ ಬಿ.ಪುಟ್ಟಸ್ವಾಮಿ ಮಾತನಾಡಿ, ಇಲಾಖೆಯಲ್ಲಿ ಸಿಗುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಹೊಸದಾಗಿ ಹಿಪ್ಪು ನೇರಳೆ ನಾಟಿ ಮಾಡಿ ಉತ್ತಮ ರೀತಿಯಲ್ಲಿ ರೇಷ್ಮೆ ಬೆಳೆಯನ್ನು ಬೆಳೆದು ರೈತರು ಆರ್ಥಿಕವಾಗಿ ಬಲಪಡಬೇಕು ಎಂದರು.

ಇಲಾಖೆಯಲ್ಲಿ ಈಗಾಗಲೇ ಸೋಂಕು ನಿವಾರಕಗಳನ್ನು ಖರೀದಿ ಮಾಡಿದ್ದು, ದ್ವಿತಳಿ ಬೆಳೆಗಾರರು ಉಚಿತವಾಗಿ ಹತ್ತಿರದ ತಾಂತ್ರಿಕ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಮಂಜುನಾಥ್, ರೇಣುಕಾ, ಹಲಗೂರು ತಾಂತ್ರಿಕ ಸೇವಾ ಕೇಂದ್ರ ವಿಸ್ತರಣಾಧಿಕಾರಿ ಜಿ.ವಿ. ಶ್ರೀನಿವಾಸಗೌಡ ಮತ್ತು ಇಲಾಖೆಯ ಕಿರಣ್ ಘಾಟಗೆ, ಎಸ್.ವಿ.ನರಸಿಂಹಮೂರ್ತಿ, ಎಚ್.ಜೆ.ಆಶಾ, ಪೂಜಾ, ಟಿ.ಆರ್. ಜಯರಾಜು, ಪುರುಷೋತ್ತಮ್, ಎಂ.ಸಿ.ನವೀನ್ ಕುಮಾರ್, ಕುಮಾರ್ ಇನ್ನಿತರರು ಇದ್ದರು.