ರಾಮನಗರ: ಬಿಡದಿ ಟೌನ್ಶಿಪ್ ಯೋಜನೆ ಭೂ ಸ್ವಾಧೀನಕ್ಕೆ ತ್ವರಿತಗತಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ
ಭೂ ಮಾಲೀಕರಾದ ಹೊಸೂರು ರಾಜಣ್ಣ ಮತ್ತು ಎಚ್.ಎಸ್.ಸಿದ್ದರಾಜು ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಮತ್ತು ಜಿಬಿಡಿಎ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಭೂ ಸ್ವಾಧೀನ ಪ್ರಕ್ರಿಯೆಗೆ ಅಂತಿಮ ಅಧಿಸೂಚನೆ ಹೊರಡಿಸಿ ಪರಿಹಾರ ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.
ನಾವು 19 ವರ್ಷಗಳ ಹಿಂದೆ ಕೃಷಿ ಭೂಮಿಯಲ್ಲಿ ಅಡಿಕೆ, ತರಕಾರಿ, ರೇಷ್ಮೆ ಇನ್ನೂ ಅನೇಕ ಬೆಳೆಗಳನ್ನು ಬೆಳೆಯುವುದರ ಮೂಲಕ ನಮ್ಮ ಜೀವನ ನಿರ್ವಹಿಸುತ್ತಿದ್ದೆವು. ಆದರೆ, 2006ರಲ್ಲಿ ಕರ್ನಾಟಕ ಸರ್ಕಾರ ಬಿಡದಿ ಟೌನ್ಶಿಪ್ ಯೋಜನೆಯ ಆದೇಶ ಪ್ರಕಟಿಸಿತು. ಅಂದು ನಮ್ಮಲ್ಲಿ ಹೊಸದೊಂದು ಅಸೆ ಚಿಗುರೊಡೆದು ನಾವೆಲ್ಲರೂ ಟೌನ್ಶಿಪ್ ಯೋಜನೆಯ ಕಡೆಗೆ ಮುಖ ಮಾಡಿ ವ್ಯವಸಾಯವನ್ನು ನಿಲ್ಲಿಸಿದೆವು ಎಂದು ತಿಳಿಸಿದರು.ನಗರೀಕರಣದ ಪ್ರಭಾವದಿಂದಾಗಿ ಶುದ್ಧವಾಗಿದ್ದ ವೃಷಭಾವತಿ ನದಿಯ ನೀರು ಕಲುಷಿತವಾದ ಪರಿಣಾಮ ನದಿ ನೀರು ವ್ಯವಸಾಯಕ್ಕೆ ಬಳಸುವುದೂ ದುಸ್ತರವಾಯಿತು. ಅಷ್ಟೇ ಅಲ್ಲದೆ ಈ ಕಲುಷಿತ ನೀರಿನಿಂದಾಗಿ ಮನುಷ್ಯರಿಗೆ ಮಾತ್ರವಲ್ಲದೇ ಮರಗಿಡಗಳೂ ಸಹ ರೋಗಕ್ಕೆ ತುತ್ತಾಗಿ ಒಣಗಲಾರಂಭಿಸಿದವು. ವ್ಯವಸಾಯ ಮಾಡಲು ರೈತರು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಯಿತು. ಅಷ್ಟೇ ಅಲ್ಲದೇ ತುಂಬಾ ರೈತ ಕುಟುಂಬಗಳು ಮಳೆಯನ್ನು ಆಶ್ರಯಿಸೇ ವ್ಯವಸಾಯ ಮಾಡುತ್ತಿದ್ದು, ಕಾಲಕಾಲಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಈ ಭಾಗ ಪದೇಪದೇ ಬರಗಾಲಕ್ಕೆ ತುತ್ತಾಗಿ ಜೀವನ ನಿರ್ವಹಣೆಗೆ ಕಷ್ಟ ಅನುಭವಿಸುವಂತಾಯಿತು. ಈ ಎಲ್ಲಾ ವಿಚಾರಗಳಿಂದ ನೊಂದ ರೈತರು ತಮ್ಮ ಜೀವನ ನಿರ್ವಹಣೆಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಮದುವೆ, ಮನೆ ನಿರ್ಮಾಣ ಮೊದಲಾದ ಕಾರಣಗಳಿಂದಾಗಿ ತಮಗೆ ಆಧಾರವಾಗಿದ್ದ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದರ ಮೂಲಕವಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
5ಕೆಆರ್ ಎಂಎನ್ 1.ಜೆಪಿಜಿ