ರಬಕವಿ-ಬನಹಟ್ಟಿ: ಸರ್ಕಾರದ ವಿಳಂಬ ಧೋರಣೆಯಿಂದ ರೈತರು ಬೆಳೆದುನಿಂತ ಬೆಳೆಯ ರಕ್ಷಣೆಗೆ ಪರದಾಡುತ್ತಿದ್ದಾರೆ. ಹಾಗಾಗಿ ಶಾಸಕನಾಗಿ ನಾನು ಏತ ನೀರಾವರಿ ಕಾರ್ಯ ಮಾಡಿದ್ದೇನೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ-ಬನಹಟ್ಟಿ: ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರು ಮೂರು ಬಾರಿ ದಿನಾಂಕ ಮುಂದೂಡಿದ್ದಕ್ಕೆ ವೆಂಕಟೇಶ್ವರ ಹಾಗೂ ಕುಲಹಳ್ಳಿ-ಹುನ್ನೂರ ಏತ ನೀರಾವರಿ ಪ್ರಾಯೋಗಿಕ ಚಾಲನೆಗೆ ನಾನೇ ಅವಕಾಶ ನೀಡಿದ್ದು ನಿಜ. ಸರ್ಕಾರದ ವಿಳಂಬ ಧೋರಣೆಯಿಂದ ರೈತರು ಬೆಳೆದುನಿಂತ ಬೆಳೆಯ ರಕ್ಷಣೆಗೆ ಪರದಾಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಸ್ಥಳೀಯ ಶಾಸಕನಾದ ಕಾರಣ ನಾನು ಆ ಕಾರ್ಯ ಮಾಡಿದ್ದೇನೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಸಮರ್ಥಿಸಿಕೊಂಡರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡುವ ವೇಳೆ ಮಾಜಿ ಸಚಿವೆ ಉಮಾಶ್ರೀ ಅವರ ಅವಧಿಯಲ್ಲಿ ಈ ಕಾಮಗಾರಿ ನಡೆದಿದೆ ಎಂದಿದ್ದಕ್ಕೆ ತಿರುಗೇಟು ನೀಡಿದ ಶಾಸಕ ಸಿದ್ದು ಸವದಿ, ಉಮಾಶ್ರೀ ಅವಧಿಯಲ್ಲಿ ಅನುಮೋದನೆ ದೊರಕಿತ್ತು. ವೆಂಕಟೇಶ್ವರ ಹಾಗೂ ಕುಲಹಳ್ಳಿ-ಹುನ್ನೂರ ಏತ ನೀರಾವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಪೂರ್ಣ ಕಾಮಗಾರಿ ನಡೆದಿದೆ ಎಂದು ಹೇಳಿದರು.
ನೀಚ ರಾಜಕಾರಣ ಸಲ್ಲದು: ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ತಾರದೆ ಕಾಮಗಾರಿಗಳಿಗೆ ಚಾಲನೆ ನೀಡುವ ನೀಚ ರಾಜಕಾರಣವನ್ನು ವಿರೋಧಿಸುತ್ತೇನೆ. ರೈತರ ಒಳಿತಿಗಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧ. ಈಗಿನ ಸರ್ಕಾರ ಅವಾಂತರಗಳಿಗೆ ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ ಎಂದು ಸವದಿ ಮಾರ್ಮಿಕವಾಗಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.