ಮುಳಗುಂದ: ಸಮೀಪದ ಯಲಿಶಿರೂರು ಗ್ರಾಪಂ ವ್ಯಾಪ್ತಿಯ ವೆಂಕಟಾಪುರ ದೇವಸ್ಥಾನಕ್ಕೆ ತೆರಳುವ ರಸ್ತೆಪಕ್ಕದ ಗುಡ್ಡದ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಾನೂನು ಉಲ್ಲಂಘಿಸಿ ಪವನ ವಿದ್ಯುತ್ ಕಂಪನಿಯ ಫ್ಯಾನ್ ಅಳವಡಿಸಲಾಗುತ್ತಿದೆ ಎಂದು ಆರೋಪಿಸಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರಮುಖರಾದ ರಮೇಶ ಓಂಕಾರಿ ಮಾತನಾಡಿ, ಯಲಿಶಿರೂರು ಗ್ರಾಮದ ಹದ್ದಿನಲ್ಲಿರುವ ರಿ.ಸ.ನಂ. 34/1ರ 173 ಎಕರೆ 17 ಗುಂಟೆ ಕಾಯ್ದಿಟ ಅರಣ್ಯ ಪ್ರದೇಶವಿದೆ. ಇದರ ಪೂರ್ವ ದಿಕ್ಕಿಗೆ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಜಮೀನು ರಿ.ಸ.ನಂ 34A/2 118 ಎಕರೆ ಜಮೀನು ಈ ಎರಡು ಆಸ್ತಿಗಳು ಸಾರ್ವಜನಿಕರ ಆಸ್ತಿಗಳಾಗಿವೆ.
ದೇವಸ್ಥಾನದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ಆಸ್ತಿಯನ್ನು ದೇವಸ್ಥಾನದ ಟ್ರಸ್ಟ್ನವರು ಕಾನೂನುಬಾಹಿರವಾಗಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ವೈಯಕ್ತಿಕ ಲಾಭಕ್ಕಾಗಿ ಪವನ ವಿದ್ಯುತ್ ಕಂಪನಿಯವರಿಗೆ ನೀಡಿದ್ದಾರೆ. ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ಹಾಗೂ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಪವನ ವಿದ್ಯುತ್ ಕಂಪನಿ ಫ್ಯಾನ್ಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿದರು.ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ, ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪವನ ವಿದ್ಯುತ್ ಕಂಪನಿಯವರು ಅಳವಡಿಸಿರುವ ಫ್ಯಾನ್ಗಳನ್ನ ತೆರವುಗೊಳಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಈ ಭಾಗದ ಎಲ್ಲ ರೈತರು ಸೇರಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.