ರಾಮನಗರ: ಬಿಡದಿ ಟೌನ್ಶಿಪ್ ಯೋಜನೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಎರಡು ಗ್ರಾಮಗಳ ಭೂ ಸ್ವಾಧೀನ ಸಂಬಂಧ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ಹೊರಡಿಸುವಂತೆ ಒತ್ತಾಯಿಸಿ ಬೈರಮಂಗಲ ಭಾಗದ ರೈತರು ಮತ್ತು ಸ್ಥಳೀಯ ಮುಖಂಡರು ರಾಜ್ಯಸರ್ಕಾರ ಹಾಗೂ ಜಿಬಿಡಿಎ ವಿರುದ್ಧ ಪ್ರತಿಭಟನೆ ನಡೆಸಿದರು.
ಬಿಡದಿ ಸಮಗ್ರ ಉಪನಗರ ಯೋಜನೆ ಸಂಬಂಧ ಒಟ್ಟು 9 ಕಂದಾಯ ಗ್ರಾಮಗಳ ಪೈಕಿ 7 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಉಳಿದಿರುವ 2 ಗ್ರಾಮಗಳ ಅಧಿಸೂಚನೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ಸ್ಥಳೀಯ ರೈತರು ಹಾಗೂ ಜಮೀನು ಮಾಲೀಕರು ಆತಂಕ ಮತ್ತು ಅನಿಶ್ಚಿತತೆ ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ತಾಪಂ ಮಾಜಿ ಸದಸ್ಯ ಹೊಸೂರು ರಾಜಣ್ಣ ಮಾತನಾಡಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಸರ್ಕಾರದ ವಿಳಂಬ ನೀತಿಯಿಂದಾಗಿ ಭೂಮಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಮಧ್ಯಪ್ರವೇಶಿಸಿ, ಬಾಕಿ ಉಳಿದಿರುವ ಎರಡು ಗ್ರಾಮಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಬೇಕು. ಒಂದು ವೇಳೆ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.ರೈತ ಹೊಸೂರು ಸಿದ್ದರಾಜು ಮಾತನಾಡಿ, ಬೈರಮಂಗಲ-ಕಂಚುಗಾರನಹಳ್ಳಿ ಎರಡು ಗ್ರಾಮಗಳಿಗೂ ಅಂತಿಮ ಅಧಿಸೂಚನೆ ಹೊರಡಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಮಾಡಿದ್ದೇವೆ. ಅಂತಿಮ ಅಧಿಸೂಚನೆ ವಿಳಂಬವಾದರೆ ಆ ಭಾಗದ ರೈತರಿಗೆ ನಷ್ಟ ಆಗಲಿದೆ. ಕೂಡಲೇ ಸರ್ಕಾರ ಯೋಜನೆ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅಧಿಸೂಚನೆ ವಿಳಂಬ ಮಾಡಿದರೆ ಪರಿಹಾರ ದರ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭೂ ಮಾಲೀಕರಾದ ಕೃಷ್ಣಮೂರ್ತಿ, ಅಂಚಿಪುರ ಶೇಖರ್ , ಭರತ್ , ರಾಧಾಕೃಷ್ಣ, ಗೌತಮ್,
(ಒಂದು ಫೋಟೋ ಸುದ್ದಿ ಜತೆಗೆ)
4. ಕಂದಾಯ ಭವನದ ಜಿಬಿಡಿಎ ಕಚೇರಿ ಮುಂದೆ ಧರಣಿ ನಡೆಸಿದ ರೈತರು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿದರು.
ರಾಮನಗರದ ಕಂದಾಯ ಭವನದಲ್ಲಿರುವ ಜಿಬಿಡಿಎ ಕಚೇರಿ ಎದುರು ಬಿಡದಿ ಟೌನ್ಶಿಪ್ ಯೋಜನೆಯ ಬಾಕಿ ಉಳಿದಿರುವ ಎರಡು ಗ್ರಾಮಗಳ ಭೂ ಸ್ವಾಧೀನ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಬೈರಮಂಗಲ ಭಾಗದ ರೈತರು ಜಿಬಿಡಿಎ ವಿರುದ್ಧ ಪ್ರತಿಭಟನೆ ನಡೆಸಿದರು.