ನಿರಂತರ ಮಳೆಗೆ ಕಂಗಾಲಾದ ಅನ್ನದಾತರು

KannadaprabhaNewsNetwork |  
Published : Oct 27, 2025, 12:30 AM IST
ಪೋಟೋಕನಕಗಿರಿ ತಾಲೂಕಿನ ಕೆ.ಕಾಟಾಪೂರದಲ್ಲಿ ಅತೀವೃಷ್ಟಿಯಿಂದಾಗಿ ನೆಲಕಚ್ಚಿದ ಭತ್ತ.  | Kannada Prabha

ಸಾರಾಂಶ

ಒಂದೂವರೆ ತಿಂಗಳ ಹಿಂದೆ ಮಳೆ ಸಹಿತ ಗಾಳಿಗೆ ಹತ್ತಿ ಬೆಳೆಯ ಕಾಯಿಗಳು ಗಿಡದಲ್ಲಿಯೆ ಕೊಳೆತು ಹೋಗಿದ್ದವು

ಎಂ. ಪ್ರಹ್ಲಾದ್ ಕನಕಗಿರಿ

ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಬೆಳೆ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಹೌದು, ಹಗಲು ರಾತ್ರಿ ಎನ್ನದೆ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದರಿಂದ ರೈತ ಕಂಗಾಲಾಗಿದ್ದಾನೆ. ತಾಲೂಕಿನ ನವಲಿ, ಕನಕಗಿರಿ ಹಾಗೂ ಹುಲಿಹೈದರ ಹೋಬಳಿ ಕೇಂದ್ರಗಳಲ್ಲಿ ಅತಿಯಾದ ಮಳೆಯಿಂದ ಬೆಳೆಗಳಿಗೆ ತೇವಾಂಶ ಹೆಚ್ಚಾಗಿ ಬೆಳೆಗಳು ಕೊಳೆಯುತ್ತಿವೆ. ತಾಲೂಕಿನಲ್ಲಿ ತೊಗರಿ ಬೆಳೆ ಯಥೇಚ್ಛವಾಗಿ ಬೆಳೆದಿದ್ದು, ಹೊಲದಲ್ಲಿ ನೀರು ನಿಂತು ಬೆಳೆ ಹಾಳಾಗಿದೆ.

ಇನ್ನೂ ತೊಗರಿ ಬೆಳೆಯ ಹೂವು ಉದುರುತ್ತಿದ್ದರಿಂದ ರೈತ ಚಿಂತೆಗೀಡಾಗಿದ್ದಾನೆ. ಇದರ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಿಸಿದರೂ ಹೂವು ಉದುರುವಿಕೆ ನಿಲ್ಲುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಪ್ರತಿ ಹೆಕ್ಟೇರ್‌ಗೆ ಲಕ್ಷಾಂತರ ಖರ್ಚು ಮಾಡಿರುವ ಅನ್ನದಾತ ಕೈ ಸುಟ್ಟುಕೊಂಡು ಕೊರಗುತ್ತಿದ್ದಾನೆ.

ಹತ್ತಿಗೂ ಇಲ್ಲ ಪರಿಹಾರ:ಒಂದೂವರೆ ತಿಂಗಳ ಹಿಂದೆ ಮಳೆ ಸಹಿತ ಗಾಳಿಗೆ ಹತ್ತಿ ಬೆಳೆಯ ಕಾಯಿಗಳು ಗಿಡದಲ್ಲಿಯೆ ಕೊಳೆತು ಹೋಗಿದ್ದವು. ಈ ಬಗ್ಗೆ ರೈತರು ಮೇಲಧಿಕಾರಿಗಳ ಗಮನಕ್ಕೆ ತಂದಾಗ ಪರಿಶೀಲಿಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿತ್ತು. ಅದಾಗ್ಯೂ ಹಾನಿಗೊಳಗಾದ ರೈತರಿಗೆ ನಯಾಪೈಸೆ ಪರಿಹಾರ ಬಂದಿಲ್ಲ.

ಈ ಹಿಂದೆಯೂ ಎರಡ್ಮೂರು ಬಾರಿ ಅತಿವೃಷ್ಟಿಯಿಂದ ತಾಲೂಕಿನ ಹಲವೆಡೆ ರೈತರು ಬೆಳೆದ ಬೆಳೆ ನಾಶವಾಗಿತ್ತು. ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿ ವರದಿ ಮಾಡಿಕೊಂಡಿದ್ದರು. ಆದರೆ, ಬೆಳೆ ನಾಶವಾಗಿರುವ ರೈತರಿಗೆ ಈ ವರೆಗೂ ಪರಿಹಾರ ದೊರೆತಿಲ್ಲ. ತಹಸೀಲ್ದಾರರ ನೇತೃತ್ವದ ಅಧಿಕಾರಿಗಳ ತಂಡವು ತಾಲೂಕಿನಾದ್ಯಂತ ಸಂಚಾರ ನಡೆಸಿ ಹಾನಿಯಾಗಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅನುಕೂಲ ಮಾಡಬೇಕು ಎಂಬುದು ಅನ್ನದಾತನ ಅಳಲಾಗಿದೆ.

ಎರಡ್ಮೂರು ತಿಂಗಳಿಂದ ಮೂರು ಬಾರಿ ಭತ್ತದ ಬೆಳೆ ನೆಲಕಚ್ಚಿದೆ. ಅಧಿಕಾರಿಗಳು ಗದ್ದೆಗೆ ಬಂದು ಜಿಪಿಎಸ್ ಮಾಡಿಕೊಂಡು ಹೋಗಿದ್ದಾರೆ. ಆದರೆ ಇದುವರೆಗೂ ಪರಿಹಾರ ಬಂದಿಲ್ಲ. ಈ ಬಗ್ಗೆ ಮೇಲಧಿಕಾರಿಗಳನ್ನು ಕೇಳಿದರೆ ಪರಿಹಾರದ ಮೊತ್ತ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಹೇಳುತ್ತಿದ್ದಾರೆ. ಆದರೆ, ಇದುವರೆಗೂ ಬೆಳೆ ನಷ್ಟ ಪರಿಹಾರದ ಒಂದು ರು. ಬಂದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ರೈತರಿಗೆ ಪರಿಹಾರ ನೀಡಿ ನೆರವಾಗಬೇಕು ಎಂದು ರೈತ ಶರಣಬಸವ ತಿಳಿಸಿದ್ದಾರೆ.

ಹಾನಿಯಾದಗೊಮ್ಮೆ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಜಿಪಿಎಸ್ ಮಾಡಿ ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಸರ್ಕಾರ ಹಣ ಮಂಜೂರು ಮಾಡಿದಾಗ ಪರಿಹಾರ ಬರಲಿದೆ ಎಂದು ತಹಸೀಲ್ದಾರ್‌ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ