ಹಾವೇರಿ: ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಮಹಿಳಾ ಕೈದಿಯೊಬ್ಬರು ಎದೆನೋವಿನಿಂದ ಬಳಲಿ ಮೃತಪಟ್ಟಿರುವ ಘಟನೆ ನಡೆದಿದೆ.ಜಿಲ್ಲೆಯ ಹಾನಗಲ್ಲ ತಾಲೂಕು ಕೊಪ್ಪರಸಿಕೊಪ್ಪ ಗ್ರಾಮದ ಪುಷ್ಪಾ ಬಸವರಾಜ ಓಲೇಕಾರ (35) ಮೃತಪಟ್ಟ ಕೈದಿ.
ಅವರು 2024ರ ಡಿ. 27ರಿಂದ ಜಿಲ್ಲಾ ಕಾರಾಗೃಹದಲ್ಲಿ ಕೈದಿಯಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಜೂ. 8ರಂದು ನಸುಕಿನ ಜಾವ ಎದೆನೋವು ಕಾಣಿಸಿಕೊಂಡಾಗ ಸಹ ಕೈದಿಯೊಬ್ಬರ ಸಹಾಯದಿಂದ ಹಾವೇರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ನಾಗರತ್ನಮ್ಮ ವೈ.ಡಿ. ಅವರು ಎಫ್ಐಆರ್ನಲ್ಲಿ ತಿಳಿಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಾಲಬಾಧೆ ತಾಳದೇ ರೈತ ಆತ್ಮಹತ್ಯೆಹಾವೇರಿ: ಸಾಲಬಾಧೆ ತಾಳಲಾರದೇ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಬ್ಬೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.ಕಬ್ಬೂರಿನ ವೀರಪ್ಪ ಭುಜಂಗಪ್ಪ ಬಾಗಾರ (54) ಮೃತಪಟ್ಟ ರೈತ. ಇವರು ಕಬ್ಬೂರ ಗ್ರಾಮದ ಯುನಿಯನ್ ಬ್ಯಾಂಕಿನಲ್ಲಿ ಬೆಳೆಸಾಲವಾಗಿ ₹2.50 ಲಕ್ಷ, ಕೃಷಿ ಅಭಿವೃದ್ಧಿಗಾಗಿ ₹2 ಲಕ್ಷ ಸಾಲ ಪಡೆದಿದ್ದರು. ಅಲ್ಲದೇ ಜಮೀನಿನಲ್ಲಿ ಬೋರ್ವೆಲ್ ಕೊರೆಯಿಸಲು ಸಂಘ- ಸಂಸ್ಥೆಗಳಲ್ಲಿ ಮತ್ತು ಖಾಸಗಿಯಾಗಿ ₹8 ಲಕ್ಷ ಸಾಲ ಮಾಡಿದ್ದರು. ಮೂರ್ನಾಲ್ಕು ವರ್ಷಗಳಿಂದ ಕೃಷಿಯಲ್ಲಿ ಅತಿಯಾದ ಹಾನಿ ಅನುಭವಿಸಿ ಸರಿಯಾಗಿ ಫಸಲು ಬಾರದೇ ಮಾಡಿದ ಸಾಲವನ್ನು ಹೇಗೆ ತೀರಿಸಬೇಕೆಂದು ಚಿಂತೆಗೀಡಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವಾಗ ಮನೆಯ ಜಂತಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆಂದು ಮೃತರ ಪತ್ನಿ ಪುಷ್ಪಾ ಬಾಗಾರ ಎಫ್ಐಆರ್ನಲ್ಲಿ ತಿಳಿಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಕೀಲರ ಮೇಲಿನ ಹಲ್ಲೆಗೆ ಖಂಡನೆಹಿರೇಕೆರೂರು: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ವಕೀಲರಾದ ಮಧುಕರ್ ಮಯ್ಯ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಇಲ್ಲಿನ ವಕೀಲರ ಸಂಘದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ವಕೀಲರಾದ ಮಧುಕರ್ ಮಯ್ಯ ಅವರು ತಮ್ಮ ನ್ಯಾಯಾಲಯದ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ತಮ್ಮ ಕಚೇರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ರೀತಿ ಹಲ್ಲೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಹಲ್ಲೆಗೊಳಗಾದ ವಕೀಲರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಸ್.ಸಿ. ಕಬ್ಬಿಣಕಂತಿಮಠ, ಎಸ್.ಆರ್. ಲಿಂಗಾಪುರ, ಎಸ್.ಬಿ. ತಿಪ್ಪಣ್ಣನವರ, ಯು.ಬಿ. ಜೋಗಿಹಳ್ಳಿ, ಜೆ.ಎನ್. ಹೊಳೆಆನ್ವೇರಿ, ಎಲ್.ಎಚ್. ಕಳ್ಳಿಮನಿ. ಜಿ.ಎಸ್. ಮತ್ತೂರ, ಪಿ.ಎಚ್. ಪಾಟೀಲ, ಎನ್.ವಿ. ಪಾಟೀಲ, ಎಸ್.ಎನ್. ಮುಲ್ಲಾ, ಎ.ಎ. ಯಲಿವಾಳ, ಬಿ.ಜಿ. ಪಾಟೀಲ, ಎಸ್.ಎಸ್. ಪಾಟೀಲ, ಐ.ಬಿ. ಗುಬ್ಬೇರ ಬಿ.ಬಿ. ಅಬಲೂರ, ಎಸ್.ಬಿ. ಗೌಡ್ರ, ಪಿ.ಆರ್. ಉಪ್ಪಾರ, ಎಸ್.ಎಚ್. ಗೌಡ್ರ, ಎಸ್.ಪಿ. ಕೆರೂಡಿ, ಬಿ.ಸಿ. ಕೊಳ್ಳಿ, ಪಿ.ಬಿ. ಮಾಗನೂರ, ಕೆ.ಬಿ. ಕುರಿಯವರ, ಡಿ.ಎಸ್. ಆರ್ಕಾಚಾರಿ, ಎಸ್.ಎಸ್. ಮಾಯಕರ್, ಆರ್.ಡಿ. ಹೊಟ್ಟಿಗೌಡ್ರ ಇತರರು ಇದ್ದರು.