ಗರ್ವಾಲೆಯಲ್ಲಿ ಔಷಧಿ ಸಸ್ಯಗಳ ಕ್ಷೇತ್ರೋತ್ಸವ

KannadaprabhaNewsNetwork |  
Published : Feb 21, 2025, 11:50 PM IST
ಚಿತ್ರ: 21ಎಂಡಿಕೆ3 : ಬೆಳೆಗಾರರಿಗೆ ಔಷಧೀಯ ಸಸ್ಯಗಳನ್ನು ವಿತರಿಸಲಾಯಿತು.  | Kannada Prabha

ಸಾರಾಂಶ

ನಮ್ಮ ದೇಶದಲ್ಲಿ 8000 ಸಸ್ಯ ಪ್ರಭೇದಗಳಿವೆ. ಇದರಲ್ಲಿ 2 ಸಾವಿರಕ್ಕೂ ಅಧಿಕ ಔಷಧೀಯ ಗುಣಗಳಿವೆ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸಹಯೋಗದಲ್ಲಿ ಜಿಲ್ಲೆಯ ಪ್ರಗತಿಪರ ಕೃಷಿಕ ಹಾಗೂ ಆದಿ ಕಾಳು ಮೆಣಸು ತಳಿ ಸಂರಕ್ಷಕ ನಾಪಂಡ ಪೂಣಚ್ಚ ಅವರ ಗರ್ವಾಲೆಯ ಆದಿ ಪೆಪ್ಪರ್ ಡೆಮೊ ಫಾರ್ಮ್ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಔಷಧಿ ಸಸ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಡಾ. ಪ್ರಭು ಮಾತನಾಡಿ ಪ್ರಗತಿಪರ ರೈತರನ್ನು ಮಾದರಿಯಾಗಿ ತೋರಿಸುವ ನಿಟ್ಟಿನಲ್ಲಿ ಪೂಣಚ್ಚ ಅವರ ತೋಟದಲ್ಲಿ ಕ್ಷೇತ್ರೋತ್ಸವ ಮಾಡುತ್ತಿದ್ದೇವೆ. ನಾನಾ ಕಾರಣದಿಂದ ಔಷಧೀಯ ಗಿಡಗಳ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ಇದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

ಸಾಮಾನ್ಯವಾಗಿ ಬೆಳೆಯುವ ಆಡುಸೋಗೆಯ ಬೇರಿಗೆ ತುಂಬಾ ಬೇಡಿಕೆಯಿದೆ. ಇದು ಉತ್ತಮ ಔಷಧೀಯ ಗಿಡವಾಗಿದೆ. ಇದರಿಂದ ಕೂಡ ಆದಾಯವನ್ನು ಗಳಿಸಬಹುದಾಗಿದೆ. ನಮ್ಮ ಪ್ರಾಧಿಕಾರದಿಂದ ಔಷಧೀಯ ಗಿಡಗಳನ್ನು ಬೆಳೆಸಲು ರೈತರಿಗೆ ಮಾಹಿತಿ ಹಾಗೂ ಉತ್ತೇಜನ ನೀಡಲಾಗುವುದು ಎಂದರು.

ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ಯು.ಎಂ. ಚಂದ್ರಶೇಖರ್ ಮಾತನಾಡಿ, ನಮ್ಮ ದೇಶದಲ್ಲಿ ಸುಮಾರು ಎಂಟು ಸಾವಿರ ಸಸ್ಯ ಪ್ರಬೇಧಗಳಿದೆ. ಇದರಲ್ಲಿ 2 ಸಾವಿರಕ್ಕೂ ಅಧಿಕ ಔಷಧೀಯ ಗಿಡಗಳಿದೆ. ಈ ಔಷಧೀಯ ಗಿಡಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ಸ್ಥಳೀಯವಾಗಿ ಔಷಧೀಯ ಸಸ್ಯಗಳನ್ನು ಬೆಳೆಸಬೇಕಾಗಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ(ಜಾಗೃತಿ ದಳ) ಸೈಯದ್ ಅಹಮದ್ ಶಾ ಹುಸೇನ್ ಮಾತನಾಡಿ ರೈತರು ತಾವು ಬೆಳೆದ ವಿವಿಧ ತಳಿಯನ್ನು ಬ್ರ್ಯಾಂಡಿಂಗ್ ಮಾಡಬೇಕಿದೆ. ರೈತರು ಮನಸ್ಸು ಮಾಡಿದರೆ ಎಲ್ಲರೂ ತಳಿಯನ್ನು ಸಂರಕ್ಷಣೆ ಮಾಡಬಹುದಾಗಿದೆ. ಔಷಧೀಯ ಗಿಡಗಳ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಇದರಿಂದ ಅರಣ್ಯ ಇಲಾಖೆಯಿಂದ ಕೆಲವು ಔಷಧೀಯ ಗಿಡಗಳನ್ನು ಕಡಿಮೆ ದರಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ನಮ್ಮ ಜಾಗದಲ್ಲಿ ಏನು ಚನ್ನಾಗಿ ಬೆಳೆಯುತ್ತದೆಯೋ ಅದನ್ನು ಬೆಳೆದು ಬ್ರ್ಯಾಂಡಿಂಗ್ ಮಾಡಬೇಕು. ಕಾಫಿ ವಾರ್ಷಿಕವಾಗಿ ಬರುವ ಆದಾಯ ಆದರೆ, ಬೆಳೆಗಾರರು ಒಟ್ಟಾಗಿ ಔಷಧೀಯ ಗಿಡಗಳನ್ನು ಬೆಳೆದರೆ ಯಾವ ಸಂದರ್ಭದಲ್ಲಿ ಬೇಕಾದರೂ ಹಣವನ್ನು ಗಳಿಸಬಹುದು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಶೈಲಜ ಮಾತನಾಡಿ ಔಷಧೀಯ ಗಿಡಗಳನ್ನು ಬೆಳೆಸಿ, ಉಳಿಸಿ ರಫ್ತು ಮಾಡಬೇಕಾಗಿದೆ ಎಂದರು.

ಪ್ರಗತಿಪರ ಕೃಷಿಕ ನಾಪಂಡ ಪೂಣಚ್ಚ ಮಾತನಾಡಿ, ಎಲ್ಲಿಂದಲೋ ತಂದ ಗಿಡಗಳನ್ನು ನಾವು ಒತ್ತಾಯ ಪೂರ್ವಕವಾಗಿ ನಮ್ಮ ಪರಿಸರದಲ್ಲಿ ಹಾಕಲು ಸಾಧ್ಯವಿಲ್ಲ. ಆದ್ದರಿಂದ ನಮ್ಮಲ್ಲಿ ಸ್ಥಳೀಯವಾಗಿ ಬೆಳೆಯುವ ಔಷಧೀಯ ಗಿಡಗಳನ್ನು ಬೆಳೆಸಿ ರೈತರಿಗೆ ನೀಡಲಾಗುವುದು ಎಂದರು.

ಜೀವ ವೈವಿಧ್ಯತೆ ಮಂಡಳಿಯ ಸಹಾಯಕ ಸಂಶೋಧಕ ಪ್ರೀತಮ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!