ಶಿವಮೊಗ್ಗ: ದಾಖಲಾತಿಗಳನ್ನು ಹೊಂದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಯನ್ನು ಬ್ಲಾಕ್ನಿಂದ ಕೈ ಬಿಟ್ಟಿರುವುದನ್ನು ವಿರೋಧಿಸಿ ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಶರಾವತಿ ಮುಳುಗಡೆ ಸಂತ್ರಸ್ತ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್ ಮಾತನಾಡಿ, ಆರು ದಶಕಗಳ ಹಿಂದೆ ನಾಡಿಗೆ ಬೆಳಕು ನೀಡಲು ತಮ್ಮ ಜೀವನವನ್ನೇ ತ್ಯಾಗ ಮಾಡಿ ಇಂದಿಗೂ ಭೂಮಿ ಹಕ್ಕುಸಿಗದೇ ಅನ್ಯಾಯಕ್ಕೆ ಒಳಗಾಗಿದ್ದಾರೆ. ಮುಳುಗಡೆ ರೈತರ ಸಂಕಷ್ಟ ಆಲಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಣ್ಣು ಕಿವಿ ಎರಡು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಆರು ಜಲಾಶಯಗಳಿಗೆ ರೈತರು ಭೂಮಿ ಬಿಟ್ಟು ಕೊಟ್ಟಿದ್ದಾರೆ. ರಾಜ್ಯದಲ್ಲಿ ಯಾವ ಜಿಲ್ಲೆಯ ರೈತರು ಈ ರೀತಿ ತ್ಯಾಗ ಮಾಡಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ನೋವು ಆಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಮಯವೇ ಇಲ್ಲ. ಪಕ್ಷಾತೀತವಾದ ಹೋರಾಟ ಇದು. ಜಿಲ್ಲಾಡಳಿತ ನಮ್ಮ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವ ತನಕ ಹೋರಾಟ ನಡೆಸುತ್ತೇವೆ ಎಂದರು.
ಅರಣ್ಯ ಇಲಾಖೆಯ ಉನ್ನತಾಧಿಕಾರಿಯಾಗಿದ್ದ ಮದನ್ ಗೋಪಾಲ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಲು ಸಾಲು ಸಭೆ ನಡೆಸಿ, ಶರಾವತಿ ಮುಳುಗಡೆ ರೈತರಿಗೆ ಭೂಮಿ ಹಕ್ಕುಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಮೂರು ತಲೆಮಾರು ಕಳೆದರೂ ಭೂ ಹಕ್ಕುನೀಡದೆ ಇರುವುದು ಸರ್ಕಾರದ ತಪ್ಪಿದೆ. ಈ ಅನ್ಯಾಯ ಸರಿಪಡಿಸಬೇಕು ಎಂದಿದ್ದರು. ಆದರೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಸೂಚನೆ ಪಾಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಸಾವಿರಾರು ರೈತರ ಹಕ್ಕುಪತ್ರ ವಜಾ ಮಾಡಲು ಸಿದ್ಧತೆ ಮಾಡಿದ್ದಾರೆ. ರೈತರ ಸಮಸ್ಯೆ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆ ಮಾಡಲ್ಲ. ಶಾಸಕರು, ಸಂಸದರು ರೈತರ ಬಗ್ಗೆ ಚಕಾರ ಎತ್ತಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರತಿಯೊಬ್ಬ ರೈತರಿಗೂ ಹಕ್ಕುಪತ್ರ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತ ದಾಖಲಾತಿಗಳನ್ನು ಹೊಂದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಯನ್ನು ಬ್ಲಾಕ್ ಒಳಗೆ ಸೇರಿಸಬೇಕು. ಸರ್ವೆ ನಡೆಸಬೇಕು ಎಂದು ಒತ್ತಾಯಿಸಿದರು.ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವಾನಂದ ಕುಗ್ವೆ, ಹಕ್ಲಳಿ ರಾಮಪ್ಪ, ನಾಗರಾಜ್ ಕೆ.ಸಿ, ಷಣ್ಮುಖ ಕಂಚಾಳಸರ, ಸುಧಾಕರ್ ಶೆಟ್ಟಿಹಳ್ಳಿ, ಪ್ರವೀಣ್ ಹಿರೇಇಡಗೋಡು, ಪ್ರದೀಪ್ ಹೆಬ್ಬೂರು, ಸುಧೀರ್ ಸೇರಿದಂತೆ ಹಲವರಿದ್ದರು.ಹಕ್ಕೊತ್ತಾಯಗಳು.- ಮುಳುಗಡೆ ಸಂತ್ರಸ್ತರಿಗೆ ಕೊಡಲಾಗಿರುವ ಎಲ್ಲಾ ಜಮೀನುಗಳ ಜಂಟಿ ಸರ್ವೆ ನಡೆಸಬೇಕು. ಈಗಿನ ಸರ್ವೆಯಲ್ಲಿ ಏನೇನು ಲೋಪದೋಷಗಳಾಗಿವೆ, ಕೊರತೆಗಳಿವೆ ಎನ್ನುವುದನ್ನು ರೈತ ಪ್ರತಿನಿಧಿಗಳನ್ನು ಜೊತೆಗಿಟ್ಟುಕೊಂಡು ಕೂಲಂಕುಶವಾಗಿ ಪರಿಶೀಲಿಸಿ ಅವೆಲ್ಲವನ್ನು ಪರಿಹರಿಸಬೇಕು.-ಸವೋಚ್ಚ ನ್ಯಾಯಾಲಯವು ಮೇಲಿನಂತೆ ಸೂಚನೆ ಕೊಡುವ ಸಂದರ್ಭದಲ್ಲಿ ಯಾವುದೇ ಷರತ್ತುಗಳನ್ನು ಹಾಕದಿರುವುದನ್ನು ಪರಿಗಣಿಸಬೇಕು. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಜಮೀನಿನ ಹಕ್ಕು ಕೈಗೆಟುಕದೆ ಪರಿತಪಿಸುತ್ತಿರುವ ಸಂತ್ರಸ್ತ ರೈತರ ಸಮಸ್ಯೆಯನ್ನು ಮಾನವೀಯವಾಗಿ ಪರಿಶೀಲಿಸಿ ಅವರ ಭೂಮಿ ಸಂಬಂಧಿ ಎಲ್ಲಾ ತೊಂದರೆಗಳನ್ನು ಬಗೆಹರಿಸಬೇಕು.- ಸಂತ್ರಸ್ತ ರೈತರ ಜಮೀನಿನ ದಾಖಲೆಗಳು ಪೂರ್ಣ ಸ್ವರೂಪದಲ್ಲಿ ರೈತರಿಗೆಸಿಗುವಂತೆ ಕ್ರಮ ವಹಿಸಬೇಕು.