ಅಡ್ಡೂರು ಸೇತುವೆ ಸಾಮರ್ಥ್ಯ ಪರೀಕ್ಷೆಗೆ ಕೊನೆಗೂ ಯಂತ್ರ ಬಂತು...!

KannadaprabhaNewsNetwork |  
Published : Sep 10, 2024, 01:35 AM IST
ಅಡ್ಡೂರು | Kannada Prabha

ಸಾರಾಂಶ

ತಾಲೂಕಿನ ಅಡ್ಡೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ಮಾಡಲು ಕರ್ನಾಟಕ ಸರಕಾರದ ಅಧೀನದಲ್ಲಿರುವ ಟೆಸ್ಟಿಂಗ್ ಯಂತ್ರ ಕೊನೆಗೂ ಪೊಳಲಿಗೆ ಆಗಮಿಸಿದೆ. ದುರ್ಬಲಗೊಂಡ ಅಡ್ಡೂರು ಸೇತುವೆಯ ಮೇಲೆ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ ಬಳಿಕ ಅಡ್ಡೂರು ಸೇತುವೆಗೆ ಸಂಬಂಧಿಸಿದಂತೆ ನ್ಯಾಯ ಕೇಳಲು ಗ್ರಾಮಸ್ಥರ ಸೇರುವಿಕೆಯಲ್ಲಿ ಪೊಳಲಿ ಅಡ್ಡೂರು ಸೇತುವೆ ಹೋರಾಟ ಸಮಿತಿ ಸೃಷ್ಟಿಯಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನ ಅಡ್ಡೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ಮಾಡಲು ಕರ್ನಾಟಕ ಸರಕಾರದ ಅಧೀನದಲ್ಲಿರುವ ಟೆಸ್ಟಿಂಗ್ ಯಂತ್ರ ಕೊನೆಗೂ ಪೊಳಲಿಗೆ ಆಗಮಿಸಿದೆ. ದುರ್ಬಲಗೊಂಡ ಅಡ್ಡೂರು ಸೇತುವೆಯ ಮೇಲೆ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ ಬಳಿಕ ಸೇತುವೆಯ ಸಾಮರ್ಥ್ಯ ಪರಿಶೀಲನೆಗೆ ಬೆಂಗಳೂರಿನಿಂದ ಯಂತ್ರ ಬರಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇತ್ತೀಚೆಗೆ ತಿಳಿಸಿದ್ದರು.

ಈ ನಡುವೆ ಅಡ್ಡೂರು ಸೇತುವೆಗೆ ಸಂಬಂಧಿಸಿದಂತೆ ನ್ಯಾಯ ಕೇಳಲು ಗ್ರಾಮಸ್ಥರ ಸೇರುವಿಕೆಯಲ್ಲಿ ಪೊಳಲಿ ಅಡ್ಡೂರು ಸೇತುವೆ ಹೋರಾಟ ಸಮಿತಿ ಸೃಷ್ಟಿಯಾಗಿದೆ.

ಸೇತುವೆ ಸಾಮರ್ಥ್ಯ ದ ಬಗ್ಗೆ ಎಂಜಿನಿಯರ್‌ಗಳು ವರದಿ ನೀಡಿದ ಬಳಿಕ ಮುಂದಿ‌ನ ನಿರ್ಧಾರವನ್ನು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಅಲ್ಲಿಯವರೆಗೆ ಸೇತುವೆಯ ಮೂಲಕ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಮತ್ತು ಸೇತುವೆ ಎರಡು ಭಾಗದಲ್ಲಿ ಪೋಲೀಸ್ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿ ಕಾವಲು ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಇದರಿಂದ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಮಂಗಳೂರು ಹಾಗೂ ಇತರ ಕಡೆಗೆ ಸಂಚಾರ ಮಾಡಲು ತೊಂದರೆಯಾಗುತ್ತಿದೆ ಎಂದು ಅನೇಕ ಬಾರಿ ಜಿಲ್ಲಾಧಿಕಾರಿ ಸಹಿತ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು.

ಸೇತುವೆ ಮೂಲಕ ಸಂಚಾರಕ್ಕೆ ನಿರ್ಬಂಧ ಹೇರಿ ತಿಂಗಳು ಕಳೆದರೂ ಅಧಿಕಾರಿ ವರ್ಗ ಸ್ಪಷ್ಟವಾದ ಮಾಹಿತಿ ನೀಡಿಲ್ಲ ಮತ್ತು ಸಾಮರ್ಥ್ಯ ಪರೀಕ್ಷೆ ಯಂತ್ರವನ್ನು ತರಿಸಿಲ್ಲ ಎಂದು ಸ್ಥಳೀಯರು ಆರೋಪ‌ ಮಾಡಿದ್ದರು. ಇದೀಗ ಕೊನೆಗೂ ಯಂತ್ರ ಸ್ಥಳಕ್ಕೆ ಆಗಮಿಸಿ, ಸಾಮರ್ಥ್ಯ ಪರೀಕ್ಷೆ ಆರಂಭಿಸಿದೆ.

ಇವರು ವರದಿ ನೀಡಿದ ಬಳಿಕ ಸ್ಪಷ್ಟವಾದ ಚಿತ್ರಣ ಸಿಗಲಿದ್ದು, ಮುಂದಿನ ಕ್ರಮವನ್ನು ಅಧಿಕಾರಿಗಳು ವಹಿಸಲಿದ್ದಾರೆ. ಪರೀಕ್ಷೆ ಯಂತ್ರ ಸ್ಥಳಕ್ಕೆ ಆಗಮಿಸಿದ ವೇಳೆ ಅಡ್ಡೂರು ಸೇತುವೆ ಹೋರಾಟ ಸಮಿತಿಯವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಸಮಿತಿ ಅಸ್ತಿತ್ವಕ್ಕೆ:

ಸೇತುವೆಗೆ ಸಂಬಂಧಿಸಿದಂತೆ ನ್ಯಾಯ ಕೇಳಲು ಗ್ರಾಮಸ್ಥರ ಸೇರುವಿಕೆಯಲ್ಲಿ ಪೊಳಲಿ ಅಡ್ಡೂರು ಸೇತುವೆ ಹೋರಾಟ ಸಮಿತಿ ರಚನೆಯಾಗಿದೆ. ಪೊಳಲಿ ವೆಂಕಟೇಶ ನಾವಡ ಅವರನ್ನು ಹೋರಾಟ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಉಳಿದ ಸ್ಥಳೀಯರಿಗೆ ವಿವಿಧ ಹುದ್ದೆ ಗಳನ್ನು ನೀಡಲಾಗಿದ್ದು ಹೋರಾಟದ ಕಿಚ್ಚು ಮೂಡಿದೆ.

ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿರ್ಬಂಧ ಹೇರಿ ತಿಂಗಳಾಗುತ್ತಾ ಬರುತ್ತಿದ್ದು, ಈವರೆಗೆ ಸರಿಯಾದ ವ್ಯವಸ್ಥೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ, ಇದರ ವಿರುದ್ದ ಮತ್ತು ಜನರಿಗೆ ಸೂಕ್ತವಾದ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಸ್ಥಳೀಯರು ವ್ಯವಸ್ಥೆ ವಿರುದ್ಧ ಹೋರಾಡಲು ಸಮಿತಿ ರಚಿಸಲಾಗಿದೆ.

ಪೊಳಲಿಯ ಸರ್ವಮಂಗಲ ಸಭಾಂಗಣದಲ್ಲಿ ಸಮಿತಿಗೆ ಅಧಿಕೃತ ಚಾಲನೆ ದೊರಕಿತು.

ಜಿಲ್ಲಾಡಳಿತ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ ಬಳಿಕ ಈ ಭಾಗದ ಸಾರ್ವಜನಿಕರಿಗೆ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಸೂಕ್ತವಾದ ಬದಲಿ ವ್ಯವಸ್ಥೆ ಮಾಡಬೇಕಾದ ಜಿಲ್ಲಾಡಳಿತ ಜನರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾಗಿದೆ.

ನಾವು ಈ ಬಗ್ಗೆ ಹೋರಾಟ ನಡೆಸಲು ಮುಂದಾಗಿದ್ದೇವೆ. ನಮ್ಮ ಹೋರಾಟದ ಮಾಹಿತಿ ಸಿಕ್ಕಿದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂದು ಸೇತುವೆ ಪರೀಕ್ಷೆ ಯಂತ್ರವನ್ನು ತರಿಸಿದ್ದಾರೆ. ಇನ್ನೇನಿದ್ದರೂ ಸೇತುವೆ ಯ ಸಾಮರ್ಥ್ಯ ಪರೀಕ್ಷೆ ವರದಿ ಬಳಿಕ ಮುಂದಿನ ಹೋರಾಟದ ರೂಪುರೇಷೆಗಳನ್ನು ಮಾಡಲು ಚರ್ಚಿಸಲಾಗುತ್ತದೆ ಎಂದು ಪ್ರಮುಖರಾದ ಚಂದ್ರಹಾಸ ಪಲ್ಲಿಪಾಡಿ ತಿಳಿಸಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ಪೂರೈಕೆ ಸುಧಾರಣೆ: ಸಪ್ಲೈ ಶೇ.20ರಷ್ಟು ಏರಿಕೆ
ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ