ಕನ್ನಡಪ್ರಭ ವಾರ್ತೆ ಧಾರವಾಡ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಯ ಕೃಷ್ಣಮೂರ್ತಿ ಕುಲಕರ್ಣಿ ಎಂಬುವರ ವಿರುದ್ಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಹಣದ ವಂಚನೆ ಹಾಗೂ ಮಹಿಳೆ ಮೇಲೆ ದೌರ್ಜನ್ಯ ಎಸಗಿರುವ ಕುರಿತು ದೂರು ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ್ತಿ ಮುಮ್ತಾಜ್ ನೀಲಿವಾಲೆ ಆಗ್ರಹಿಸಿದರು. ಶುಕ್ರವಾರ ಎಫ್ಐಆರ್ ಪ್ರತಿಯೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಶ್ರೀರಾಮ ನಗರದ ನಿವಾಸಿ ನಿರ್ಮಲಾ (ಹೆಸರು ಬದಲಾಯಿಸಿದೆ) ಎಂಬವರಿಗೆ ಚಿರಪರಿಚಿತರಂತೆ ನಟಿಸಿ ₹75 ಸಾವಿರ ನಗದು ಹಾಗೂ ಫೋನಪೇ ಮೂಲಕ ₹95 ಸಾವಿರ ಸಾಲದ ರೂಪದಲ್ಲಿ ಪಡೆದ ಕೃಷ್ಣಮೂರ್ತಿ ಕುಲಕರ್ಣಿ ಈಗ ಹಣ ಕೊಡು ಎಂದಾಗ ಅನವಶ್ಯಕವಾಗಿ ಮಹಿಳೆಗೆ ಪೀಡಿಸುತ್ತಿದ್ದಾನೆ. ನೊಂದ ಮಹಿಳೆ ತಮ್ಮ ಬಳಿ ಬಂದು ಕಷ್ಟ ತೋಡಿಕೊಂಡಾಗ ದಾಖಲೆ ಸಮೇತ ಆತನ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದರು. ಸಾಲ ಪಡೆದ ಹಣವನ್ನು ಕೇಳಿದಾಗ ಮೂರು ಸಾವಿರ, ಎರಡು ಸಾವಿರದಂತೆ ಕೆಲವು ಬಾರಿ ಚಿಲ್ಲರೆ ಹಣ ನೀಡಿದ ಆತ ಪೂರ್ತಿ ಹಣ ಕೇಳಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಲ್ಲದೇ, ಮಾಧ್ಯಮ ಜಗತ್ತೇ ನನಗೆ ಗೊತ್ತು, ಯಾವ ಪೊಲೀಸರು ನನಗೆ ಏನೂ ಮಾಡಲಾರರು ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದಾನೆ. ಈಗಾಗಲೇ ಕೃಷ್ಣಮೂರ್ತಿ ಕುಲಕರ್ಣಿ ಅತ್ಯಾಚಾರದ ಪ್ರರಕಣವೊಂದರಲ್ಲಿ ಜೈಲು ಕಂಡಿದ್ದು ಇದೀಗ ಮತ್ತೊಂದು ಮಹಿಳೆಯ ಬಳಿ ಹಣ ಪಡೆದು ಮೋಸ ಮಾಡಿದ್ದಾನೆ. ಹೀಗಾಗಿ ವಿದ್ಯಾಗಿರಿ ಪೊಲೀಸರು ಕೂಡಲೇ ಆತನನ್ನು ಬಂಧಿಸಬೇಕೆಂದು ನೀಲಿವಾಲೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ನೋಂದ ಮಹಿಳೆ ಸಹ ಇದ್ದರು.