ಕನ್ನಡಪ್ರಭ ವಾರ್ತೆ ಮೈಸೂರು
ಜಗತ್ತು ಸಂಘರ್ಷಮಯ ವಾತಾವರಣದಿಂದ ಬಳಲುತ್ತಿದೆ. ನೆಮ್ಮದಿ ಇಲ್ಲವಾಗಿದೆ. ದೇವರು, ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ ತಲೆಯಲ್ಲಿ ಮೌಢ್ಯಗಳನ್ನು ತುಂಬಿ ದಾರಿ ತಪ್ಪಿಸುವುದನ್ನು ತಪ್ಪಿಸಲು ವಿಶ್ವಮಾನವ ಧರ್ಮ ಪರ್ಯಾಯ ಮಾರ್ಗವಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುವೆಂಪು ಅವರ ಪಂಚಸೂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ. ಈ ಪಂಚತತ್ವಗಳೇ ವಿಶ್ವಮಾನವ ಧರ್ಮದ ತಿರುಳು. ವೈಯಕ್ತಿಕ ದರ್ಶನಕ್ಕೆ ಈ ಸೂತ್ರಗಳು ಅಳವಡಿಕೆ ಅಗತ್ಯವಾಗಿದೆ. ಕೇಂದ್ರ ಸರ್ಕಾರ ನಡೆಸಲಿರುವ ಗಣತಿ ವೇಳೆ ವಿಶ್ವಮಾನವ ಧರ್ಮಕ್ಕೆ ಮಾನ್ಯತೆ ಕೊಡುವಂತೆ ಮನವಿ ಮಾಡಲು ಈ ಅಧಿವೇಶನ ನೆರವಾಗಲಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ವಿವಿಧ ಕಡೆ ನಡೆಯುವ ಸಮಾವೇಶಗಳಲ್ಲಿ ವಿಶ್ವಮಾನವ ಧರ್ಮದ ಮಾನ್ಯತೆಗಾಗಿ ಒತ್ತಾಯಿಸಲಿದ್ದೇವೆ ಎಂದರು.ಯಾಚೇನಹಳ್ಳಿಯಲ್ಲಿ 1.50 ಕೋಟಿ ರು. ವೆಚ್ಚದಲ್ಲಿ ಕುವೆಂಪು ಸ್ಮಾರಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕುವೆಂಪು ಚಿತಾಭಸ್ಮ, 10 ಸಾವಿರ ಪುಸ್ತಕಗಳ ಗ್ರಂಥಾಲಯ, ಕುವೆಂಪು ಚಿತ್ರ ಗ್ಯಾಲರಿ, ಸಭಾಂಗಣ ನಿರ್ಮಿಸಲಾಗುತ್ತಿದೆ. 2 ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂದರು.
ಪ್ರಗತಿಪರ ಚಿಂತಕ ವೈ.ಎನ್. ಶಂಕರೇಗೌಡ ಮಾತನಾಡಿ, ತೀರ್ಥಹಳ್ಳಿ ಬಿಟ್ಟರೆ ಯಾಚೇನಹಳ್ಳಿ ಕುವೆಂಪು ಚಿತಾಭಸ್ಮ ಇರುವ ಸ್ಥಳವಾಗಿದೆ. ಮಂತ್ರಮಾಂಗಲ್ಯ ಆಶಯದಲ್ಲಿ ಸರಳ ವಿವಾಹವಾಗುವವರಿಗೆ ಯಾಚೇನಹಳ್ಳಿ ಕೇಂದ್ರ ವೇದಿಕೆಯಾಗಲಿದೆ ಎಂದರು. ಮಂಡ್ಯ ವಿವಿ ಕನ್ನಡ ಉಪನ್ಯಾಸಕ ಉಮೇಶ್ ದಡಮಹಳ್ಳಿ ಇದ್ದರು.