ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಗುವಿನ ಜನನದ ಬಳಿಕ ಪಾಲನೆ, ಪೋಷಣೆ ಮಾಡುವ ಜೊತೆಗೆ ಅವರು ಕಲಿಸುವ ಒಂದೊಂದು ವಿಷಯಗಳಿಂದ ತಾಯಿ ಮೊದಲ ಗುರು ಆಗುತ್ತಾಳೆ ಎಂದು ಮೈಸೂರು ಕುದುರೆ ಮಠದ ಗುರುಶಾಂತ ಸ್ವಾಮೀಜಿ ತಿಳಿಸಿದರು.ಪಟ್ಟಣದ ಬಸವೇಶ್ವರ ದೇವಾಲಯದ ಆವರಣದಲ್ಲಿ ಶ್ರೀಜಗಜ್ಯೋತಿ ಬಸವೇಶ್ವರ ಸಂಘ, ಅಖಿಲ ಭಾರತ ವೀರಶೈವ ಮಹಾಸಭಾ, ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳನ್ನು ಎತ್ತು ಹೊತ್ತು ಅವರನ್ನು ಲಾಲನೆ ಪಾಲನೆ ಮಾಡಿ ತನ್ನ ಮಗುವಿಗೆ ಸಂಸ್ಕಾರ ಕೊಡುವವಳು ತಾಯಿ. ಮಕ್ಕಳಿಗೆ ಮೊದಲ ಗುರುವಾಗಿ, ನಡತೆ ಕಲಿಸಿ ಪ್ರಪಂಚ ಪರಿಚಯಿಸುವ ಮೂಲಕ ಅವಳ ಕೊಡುಗೆ ಅಪಾರವಾದದ್ದು. ವಿದ್ಯೆ ಕಲಿತು, ಉದ್ಯೋಗಸ್ಥರಾಗಿ ಉನ್ನತ ಸ್ಥಾನಕ್ಕೇರಿದ ಮೇಲೆ ಎಂದಿಗೂ ತಮ್ಮ ತಾಯಿ, ತಂದೆಯನ್ನು ಮರೆಯಬಾರದು ಎಂದರು.ಇದಕ್ಕೂ ಮುನ್ನ ಶ್ರೀಗಳು ಬಸವೇಶ್ವರ ಫೋಟೋಗೆ ಪುಷ್ಪ ನಮನ ಸಲ್ಲಿಸಿ, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಬಳಿಕ ಶ್ರೀರಂಗಪಟ್ಟಣ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕಕ್ಕೆ ನೂತನವಾಗಿ ಆಯ್ಕೆಯಾಗಿದ್ದ ನಿರ್ದೇಶಕರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಗದೀಶ್, ಮಹಾಸಭಾ ಅಧ್ಯಕ್ಷ ನಾಗರಾಜ್, ಕನೌಕರ ಕ್ಷೇಮಾಭಿವೃದ್ಧಿ ಅಧ್ಯಕ್ಷ ನಂದೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ನಿಜಗುಣ, ಟೌನ್ ಪ್ರಧಾನ ಕಾರ್ಯದರ್ಶಿ ಪ್ರದೀಪ್, ತಾಲೂಕು ಘಟಕದ ಉಪಾಧ್ಯಕ್ಷ ಚಂದ್ರಶೇಖರ್, ಮಹಿಳಾ ಉಪಾಧ್ಯಕ್ಷೆ ಸೌಮ್ಯ, ಕಾರ್ಯದರ್ಶಿ ದೀಪಕ್ ಮಹಿಳಾ ಕಾರ್ಯದರ್ಶಿ ವೀಣಾ ಕಾಶೀನಾಥ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕುಮಾರ್, ಹಿರಿಯ ವಕೀಲ ಮರಿಬಸವಯ್ಯ, ಮಾಸ್ಟರ್ ನಂಜುಂಡಸ್ವಾಮಿ, ಮಾಸ್ಟರ್ ವಿಶ್ವನಾಥ್, ನಿಂಗಪ್ಪ, ಮಾಜಿ ಪುರಸಭಾ ಸದಸ್ಯ ಸೋಮಶೇಖರ್ ಸೇರಿದಂತೆ ನಿರ್ದೇಶಕರು ಪಾಲ್ಗೊಂಡಿದ್ದರು.