ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ 1,500 ಕ್ಕೂ ಹೆಚ್ಚಿನ ಮೀನುಗಾರಿಕಾ ಬೋಟುಗಳು ಇದ್ದರೂ, ಕನಿಷ್ಟ 500 ಬೋಟುಗಳಿಗೆ ಅಗತ್ಯವಿರುವ ಪೂರಕ ವ್ಯವಸ್ಥೆಗಳು ಇಲ್ಲವಾಗಿವೆ.
2023 ನೇ ಸಾಲಿನಲ್ಲಿ 49.50 ಕೋಟಿ ರು.ಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದರು, ಕಳೆದೊಂದು ವರ್ಷದಿಂದ ಟೆಂಡರ್ ಹಂತದಲ್ಲಿರುವ 3 ನೇ ಹಂತದ ಮೀನುಗಾರಿಕಾ ಧಕ್ಕೆ ವಿಸ್ತರಣೆಯ ಉಳಿಕೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ, ಮುಂದಿನ ಒಂದು ವರ್ಷದೊಳಗೆ ಈ ಬಂದರನ್ನು ಮೀನುಗಾರರ ಬಳಕೆಗೆ ಯೋಗ್ಯವನ್ನಾಗಿಸಬೇಕು.ಬಂದರಿನ 1 ಮತ್ತು 2 ನೇ ಹಂತದ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಮಂಗಳೂರು ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಗೆ ಒಂದು ವರ್ಷದ ಹಿಂದೆಯೇ 37.50 ಕೋಟಿ ರು. ಅನುಮೋದನೆಗೊಂಡಿರುವುದಾಗಿ ಸ್ಥಳೀಯ ಬಂದರಿನ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಅನುಮೋದನೆ ಹಾಗೂ ಸಿ.ಆರ್.ಝಡ್ ಅನುಮತಿ ಬಾಕಿ ಇರುವುದಾಗಿ ಹೇಳುತ್ತಿದ್ದಾರೆ. ಈ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಲು ಕ್ರಮ ವಹಿಸಬೇಕು.
ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಪ್ರತಿ ದಿನ 100 ಕೋಟಿ ರು.ಗಳಿಗೂ ಮಿಕ್ಕಿ ವ್ಯವಹಾರ ನಡೆಯುತ್ತಿದ್ದು, ಬಂದರಿನಲ್ಲಿ ಮೀನುಗಾರರ ರಕ್ಷಣೆ, ಮಹಿಳಾ ಮೀನುಗಾರರ ಸುರಕ್ಷತೆ, ಕಳ್ಳತನ ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ಹೆಚಚ್ಚಾಗುತ್ತಿದೆ. ಇದಕ್ಕೆ ಬಂದರಿನಾದ್ಯಂತ ಸೂಕ್ತ ಸಿ.ಸಿ.ಟಿ.ವಿ. ವ್ಯವಸ್ಥೆ ಹಾಗೂ ನಿರಂತರ ಆರಕ್ಷಕ ಸಿಬ್ಬಂದಿಗಳನ್ನು ಬಂದರಿಗೆ ನಿಯೋಜಿಸಲು ಕ್ರಮ ವಹಿಸಬೇಕು.ರಂಖಂ ಮತ್ತು ಕಮಿಷನ್ ಮೀನು ಮಾರಾಟವನ್ನು ಪ್ರಸ್ತುತ ಮಂಗಳೂರು ಮೀನುಗಾರಿಕಾ ಬಂದರಿನ ಒಳಭಾಗದಲ್ಲೇ ನಡೆಸುತ್ತಾ ಇರುವುದರಿಂದ ಬೇರೆ ರಾಜ್ಯಗಳಿಂದ ಬರುವ 200 ಕ್ಕೂ ಹೆಚ್ಚಿನ ವಾಹನಗಳಿಂದ ಇನ್ನಷ್ಟುದಟ್ಟಣೆ ಉಂಟಾಗುತ್ತಿದೆ. ಇದರಿಂದ ಬಂದರಿನ ದೈನಂದಿನ ಕಾರ್ಯಚಟುವಟಿಕಗಳಿಗೆ ತೊಡಕಾಗುತ್ತಿದ್ದು, ನಗರದ ಹೊರಭಾಗದಲ್ಲಿ ಹೆದ್ದಾರಿಯ ಪಕ್ಕದಲ್ಲಿ ಸೂಕ್ತ ಜಾಗವನ್ನು ಗುರುತಿಸಿ ಈ ಮಾರುಕಟ್ಟೆಯನ್ನು ಸ್ಥಳಾಂತರಿಸುವ ಬೇಡಿಕೆಯನ್ನು ಪರಿಗಣಿಸಿ ಕ್ರಮ ವಹಿಸಬೇಕು.ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಗಣನೀಯವಾಗಿ ಮೀನುಗಾರಿಕಾ ಬೋಟುಗಳು, ಹೆಚ್ಚುತ್ತಿದ್ದರೂ ಜೆಟ್ಟಿವಿಸ್ತರಣೆಯ ಯಾವುದೇ ಯೋಜನೆಯು ಅನುಮೋದನೆಗೊಂಡಿರುವುದಿಲ್ಲ. ಆದ್ದರಿಂದ ಈಗ ಕೇಂದ್ರೀಕೃತವಾಗಿರುವ ಮಂಗಳೂರು ಬಂದರಿನ ದಟ್ಟಣೆ ಸಮಸ್ಯೆಗಳನ್ನು ನಿವಾರಿಸಲು ಪ್ರಸ್ತುತ ಮೀನುಗಾರಿಕಾ ಬೋಟುಗಳನ್ನು ಲಂಗರು ಹಾಕುತ್ತಿರುವ ತೋಟ ಬೆಂಗ್ರೆ, ಬೊಕ್ಕಪಟ್ನ ಬೆಂಗ್ರೆ, ಕೋಟೆಪುರ ಜಾಗೆಗಳಲ್ಲಿ ತಲಾ 200 ಮೀ ಉದ್ದದ ಜೆಟ್ಟಿಗಳನ್ನು ಹಾಗೂ ಪೂರಕ ಸೌಲಭ್ಯಗಳನ್ನು ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗೆ ನಿಯೋಗವು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.ಮನವಿ ಸಲ್ಲಿಸಿದ ನಿಯೋಗದಲ್ಲಿ ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ, ಪರ್ಸೀನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಬೊಕ್ಕಪಟ್ಣ, ಟ್ರಾಲ್ ಬೋಟ್ ಯೂನಿಯನ್ ಉಪಾಧ್ಯಕ್ಷ ಇಬ್ರಾಹಿಂ ಬೆಂಗ್ರೆ, ಕಾರ್ಯದರ್ಶಿ ರಾಜೇಶ್ ಪುತ್ರನ್, ರಾಷ್ಟ್ರೀಯ ಮೀನುಗಾರರ ಸಂಘಟನೆಯ ಮನೋಹರ್ ಬೋಳೂರು, ಪರ್ಸಿನ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಮೋಹನ್ ಬೆಂಗ್ರೆ ಮತ್ತಿತರರಿದ್ದರು.