ದಾಬಸ್ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿನ ಬಿದಲೂರು ಗಂಗಮ್ಮನ ಕೆರೆಯಲ್ಲಿ ಕಳೆದ ಮೂರು ತಿಂಗಳಿನಿಂದ ನೀರಿನ ಮಟ್ಟ ಕಡಿಮೆಯಾಗಿದ್ದು, ಬಿಸಿಲ ಬೇಗೆ ಮತ್ತು ಆಮ್ಲಜನಕದ ಕೊರತೆಯಿಂದ ಸಾವಿರಾರು ಮೀನುಗಳು ಸಾವನ್ನಪ್ಪಿವೆ.
ಮೀನುಗಾರಿಕೆ ಇಲಾಖೆ ಅಧಿಕಾರಿ ಅಮೃತ ಮಾತನಾಡಿ, ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, ಮೀನುಗಳ ಸಂಖ್ಯೆ ಹೆಚ್ಚಾದ ಕಾರಣ ಅವುಗಳ ಉಸಿರಾಟಕ್ಕೆ ಅಗತ್ಯ ಆಮ್ಲಜನಕದ ಕೊರತೆ ಹಾಗೂ ಬೇಸಿಗೆ ಕಾವಿನಿಂದ ಮೀನುಗಳ ಸಾವು ಸಂಭವಿಸಿದೆ. ಕಡಿಮೆ ನೀರಿರುವ ಕೆರೆಯಲ್ಲಿನ ಮೀನುಗಳನ್ನು ಹೆಚ್ಚು ನೀರಿರುವ ಕೆರೆಗಳಲ್ಲಿ ಬಿಟ್ಟು ಸಾವು ತಡೆಯಲಾಗುವುದು ಎನ್ನುತ್ತಾರೆ.
ಮೀನಿನ ವ್ಯಾಪಾರಿ ರಾಜು ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಸುರಿದ ಮಳೆಯಿಂದಾಗಿ ಹೋಬಳಿಯ ಬಹುತೇಕ ಕೆರೆಗಳು ಕೋಡಿಹರಿದಿದ್ದು, ಮೀನು ಸಾಕಾಣಿಕೆಗೆ ಅನುಕೂಲಕರವಾಗಿದ್ದವು. ಕಳೆದ ವರ್ಷ ಉತ್ತಮ ಮಳೆಯಾಗದ ಕಾರಣ ಕೆರೆಯಲ್ಲಿನ ನೀರು ದಿನೇ ದಿನೇ ಖಾಲಿಯಾಗಿ ಕೆರೆಯಲ್ಲಿನ ಮೀನು ಮರಿಗಳು ಸಾಯುವ ಸ್ಥಿತಿ ಎದುರಾಗಿದೆ, ಈ ವರ್ಷದಲ್ಲಿ ಒಂದು ಲಕ್ಷ ಮೀನು ಮರಿಗಳನ್ನು ಬಿಡಲಾಗಿತ್ತು, ಲಕ್ಷಾಂತರ ಹಣ ನಿಡಿ ಟೆಂಡರ್ ಪಡೆದರೂ ಹೂಡಿಕೆ ಹಣ ಬಂದಿಲ್ಲ.