ಐದು ಕೋಟಿ ಸುರಿಯೋಕೆ ರಾತ್ರೋ ರಾತ್ರಿ ಕೆರೆ ತೂಬಿಗೆ ಹಾನಿ

KannadaprabhaNewsNetwork |  
Published : Oct 05, 2024, 01:38 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್   | Kannada Prabha

ಸಾರಾಂಶ

ದುಬಾರಿ ವೆಚ್ಚದಲ್ಲಿ ಸಾರ್ವಜನಿಕ ತಂಗುದಾಣಗಳ ನಿರ್ಮಿಸಿ ಸರ್ಕಾರಿ ಅನುದಾನ ಅಪವ್ಯಯಕ್ಕೆ ಕಾರಣವಾಗಿದ್ದ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ(CUDA), ಮುರುಘಾಮಠದ ಮುಂಭಾಗದ ಕೆರೆ ಅಭಿವೃದ್ಧಿ ಪಡಿಸಲು ಮತ್ತೊಂದು ಅನುದಾನ ಅಪವ್ಯಯದ ಘನಂದಾರಿ ಕೆಲಸಕ್ಕೆ ಮತ್ತೆ ಮರು ಚಾಲನೆ ನೀಡಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭವಾರ್ತೆ ಚಿತ್ರದುರ್ಗ

ದುಬಾರಿ ವೆಚ್ಚದಲ್ಲಿ ಸಾರ್ವಜನಿಕ ತಂಗುದಾಣಗಳ ನಿರ್ಮಿಸಿ ಸರ್ಕಾರಿ ಅನುದಾನ ಅಪವ್ಯಯಕ್ಕೆ ಕಾರಣವಾಗಿದ್ದ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ(CUDA), ಮುರುಘಾಮಠದ ಮುಂಭಾಗದ ಕೆರೆ ಅಭಿವೃದ್ಧಿ ಪಡಿಸಲು ಮತ್ತೊಂದು ಅನುದಾನ ಅಪವ್ಯಯದ ಘನಂದಾರಿ ಕೆಲಸಕ್ಕೆ ಮತ್ತೆ ಮರು ಚಾಲನೆ ನೀಡಿದೆ.

ಗುರುವಾರ ರಾತ್ರಿ ಕೆರೆಯ ತೂಬಿಗೆ (ನೀರು ಹೊರ ಹೋಗುವ ಪ್ರದೇಶ) ಜೆಸಿಬಿ ಯಂತ್ರದ ಮೂಲಕ ಹಾನಿ ಪಡಿಸಿ ಮೂರು ಅಡಿಯಷ್ಟು ನೀರು ಹೊರ ಕಳಿಸುವ ಕಾರ್ಯಕ್ಕೆ ಕೈ ಹಾಕಿದೆ. ರಾತ್ರಿ ಏಕಾಏಕಿ ಕೆರೆ ನೀರು ಹೊರ ಹೋಗಿದ್ದರಿಂದ ಕೆಲ ರೈತರ ಜಮೀನಿಗೆ ನೀರು ನುಗ್ಗಿ ಹಾನಿಯಾಗಿದೆ. ರೈತರಿಗೆ ಇದು ಅಭಿವೃದ್ದಿ ಕಾರ್ಯದ ಫಲ ಎಂದು ಗೊತ್ತೇ ಇಲ್ಲ. ಕೆರೆ ಭರ್ತಿಯಾಗಿ ನೀರು ಹೊರ ಬಿಟ್ಟಿದ್ದಾರೆ ಎಂದೇ ಭಾವಿಸಿದ್ದಾರೆ.

ಏನಿದು ಕೆರೆ ಅಭಿವೃದ್ದಿ ಯೋಜನೆ

ಚಿತ್ರದುರ್ಗ ಮುರುಘಾಮಠದ ಮುಂಭಾಗದಲ್ಲಿ ಒಂದು ಕೆರೆಯಿದ್ದು, ಅದನ್ನು ಅರಸನಕೆರೆ ಎಂದೇ ಕರೆಯಲಾಗುತ್ತದೆ. ಕವಾಡಿಗರಹಟ್ಟಿ ಮೇಲ್ಭಾಗದಿಂದ ಹರಿದು ಬರುವ ಚರಂಡಿ ಹಾಗೂ ಡ್ರೈನೇಜ್ ನೀರು ನೇರವಾಗಿ ಈ ಕೆರೆಯಲ್ಲಿ ಸಂಗ್ರಹವಾಗಿದೆ. ಈ ಕೆರೆಗೆ ನೈಸರ್ಗಿಕವಾಗಿ ಹರಿದು ಬರುವ ನೀರಿನಿಂದ ಮತ್ತು ಅಲ್ಲಿ ಬಡಾವಣೆಗಳು ತಲೆಎತ್ತಿರುವುದರಿಂದ ಬಹಳ ವರ್ಷಗಳ ಕಾಲ ಕೆರೆಯಲ್ಲಿ ಗುಂಡಿಗಳಿದ್ದವು.

ಈಗ ಚರಂಡಿ ನೀರು ಹರಿದು ಬಂದು ಭರ್ತಿಯಾಗಿದೆ. ಈ ಕೆರೆಯ ಸುತ್ತಲೂ ತಂತಿ ಬೇಲಿ, ವಾಕಿಂಗ್ ಪಾಥ್, ಮಧ್ಯ ಭಾಗದಲ್ಲಿ ಸಂಪರ್ಕ ಸೇತುವೆ, ನಾಲ್ಕು ಬಯೋ ಟಾಯ್ಲೆಟ್, ಅಲಂಕಾರಿ ದೀಪ ಹಾಗೂ ಚಾಟ್ ಸೆಂಟರ್ ಗಳ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಐದು ಕೋಟಿ ವೆಚ್ಚದ ಯೋಜನೆ ಸಿದ್ದಪಡಿಸಲಾಗಿದೆ. ಕೆರೆಯಲ್ಲಿನ ನೀರನ್ನು ಹೊರ ಹಾಕಲು ಹತ್ತು ಲಕ್ಷ ರುಪಾಯಿ ಖರ್ಚು ಮಾಡಲಾಗುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲೇಕ್ ಡೆವಲಪ್ ಮೆಂಟ್ ಹೆಸರಲ್ಲಿ ಒಂದಿಷ್ಟು ಸಂಪನ್ಮೂಲ ಕ್ರೂಢೀಕರಣವಾಗಲಿದ್ದು, ಈ ಅನುದಾನ ಬಳಸಲಾಗುತ್ತದೆ.

ಕೆರೆ ಅಭಿವೃದ್ಧಿಪಡಿಸಿ, ಅದನ್ನೊಂದು ಪ್ರವಾಸಿ ತಾಣವಾಗಿ ಮಾಡಲು ಯಾರ ವಿರೋಧವೂ ಇಲ್ಲ. ಆದರೆ ಕೆರೆ ಯಾವುದೆಂಬುದೇ ಮುಖ್ಯವಾಗುತ್ತದೆ. ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಮೃತಪಟ್ಟ ಘಟನೆ ಇನ್ನೂ ಮಾಸಿಲ್ಲ. ಇದೇ ಗ್ರಾಮದಿಂದ ಚರಂಡಿ ನೀರು ಸಂಗ್ರಹವಾಗುವ ಕೆರೆಗೆ ಅಭಿವೃದ್ಧಿ ಕೈಗೆತ್ತಿಕೊಂಡರೆ, ಅಲ್ಲಿ ವಾಕ್ ಮಾಡುವರು ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಕೆರೆ ಪಕ್ಕ ಹೋದರೆ ಮೂಗು ಮುಚ್ಚಿಕೊಂಡು ಹೋಗುವಷ್ಟರ ಮಟ್ಟಿಗೆ ದುರ್ನಾತ ಬೀರುತ್ತದೆ. ಇಂತಹ ಕೆರೆ ಅಭಿವೃದ್ಧಿ ಪಡಿಸಲು ಐದು ಕೋಟಿ ಸುರಿಯುವುದು ಮೂರ್ಖತನವೆಂದೇ ಜನತೆ ಅಭಿಪ್ರಾಯಪಡುತ್ತಾರೆ.

ವರ್ಷದ ಹಿಂದೆ ಈ ಕೆರೆ ಅಭಿವೃದ್ಧಿ ಪಡಿಸಲು ಮುಂದಾದಾಗ ಕನ್ನಡಪ್ರಭ ಅನುದಾನ ಅಪವ್ಯಯದ ಸರಣಿ-6 ರಲ್ಲಿ ಈ ಕೆರೆ ಬಗ್ಗೆ ಬರೆದಿತ್ತು. ಸಾರ್ವಜನಿಕರ ವಿರೋಧದಿಂದಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಹಿಂದೇಟು ಹಾಕಿದ್ದ ಕುಡಾ, ಇದೀಗ ಮತ್ತೆ ಅದಕ್ಕೆ ಚಾಲನೆ ನೀಡಿದೆ. ಐದು ಕೋಟಿಯಷ್ಟು ಅಪಾರ ಪ್ರಮಾಣದ ಹಣ ಕೆರೆಗೆ ಸುರಿಯಲು ಮುಂದಾಗಿದೆ. ನಿವೇಶನಗಳ ಹಗರಣಗಳಿಂದಾಗಿ ಮೈಸೂರು ಮುಡಾ ರಾಜ್ಯವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದರೆ, ಇದೀಗ ಅನುದಾನದ ಅಪವ್ಯಯದ ಕಾರಣಕ್ಕೆ ಕುಡಾ ಮುನ್ನಲೆಗೆ ಬಂದಿದೆ.

ನಗರಾಭಿವೃದ್ದಿ ಪ್ರಾಧಿಕಾರದವರು ಐದು ಕೋಟಿ ಖರ್ಚು ಮಾಡಿ ಅರಸನಕೆರೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ ಎಂದಷ್ಟೇ ಗೊತ್ತು. ಅದರ ಪೂರ್ಣ ಪ್ರಮಾಣದ ವಿವರ ಗಮನಿಸಿಲ್ಲ. ಪ್ರಾಧಿಕಾರದ ಆಯುಕ್ತರ ಬಳಿ ಮಾಹಿತಿ ತರಿಸಿಕೊಂಡು ಪರಿಶೀಲಿಸಲಾಗುವುದು.ಬಿ.ಟಿ.ಕುಮಾರಸ್ವಾಮಿ ಅಪರ ಜಿಲ್ಲಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಮಧ್ಯಾಹ್ನ 3ಕ್ಕೆ ಪಿಯುಸಿ ಫಲಿತಾಂಶ
ಕಾಡುಪ್ರಾಣಿಗಳ ಸಂತಾನಶಕ್ತಿ ಹರಣಕ್ಕೆ ರಾಜ್ಯ ಸರ್ಕಾರದಿಂದ ಚಿಂತನೆ: ಖಂಡ್ರೆ