ಪ್ರಗತಿ ಪರಿಶೀಲನಾ ಸಭೆ । ಯೋಜನೆಗಳ ಅನುಷ್ಠಾನ ಕುರಿತು ಮಾಹಿತಿ । ಸೂಕ್ತ ಕ್ರಮಕ್ಕೆ ಸೂಚನೆ
ಕನ್ನಡಪ್ರಭ ವಾರ್ತೆ ಚನ್ನಗಿರಿಕಾಂಗ್ರೆಸ್ ಸರ್ಕಾರ ರಾಜ್ದಲ್ಲಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಜನತೆಗೆ ತುಂಬಾ ಅನುಕೂಲವಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್ ಹೇಳಿದರು.
ತಾಲೂಕಿನಲ್ಲಿ ಬುಧವಾರ ತಾಲೂಕು ಪಂಚಾಯಿತಿ ಕಚೇರಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳಿಗೆ ಸಂಬಂಧ ಪಟ್ಟಂತೆ ಯೋಜನೆಯ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಯಾವುದೇ ತೊಂದರೆಗಳಾದರೂ ಅದರ ಬಗ್ಗೆ ಮಾಹಿತಿ ಕೇಳಲು ಸಾರ್ವಜನಿಕರು ಬಂದಾಗ ಹೆಚ್ಚು ಅಲೆದಾಡಿಸದೆ ಸ್ಫಷ್ಠವಾದ ಮಾಹಿತಿಯನ್ನು ನೀಡಿರಿ ಎಂದು ಸಭೆಯಲ್ಲಿದ್ದ ಪಂಚ ಗ್ಯಾರಂಟಿಗಳ ಯೋಜನೆಗಳಿಗೆ ಸಂಬಂಧ ಪಟ್ಟಂತಹ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಈರಗನಹಳ್ಳಿ, ಕೆಂಪನಹಳ್ಳಿ, ನಲ್ಲೂರು, ತಾವರಕೆರೆ. ಕಂಸಾಗರ ಈ ಗ್ರಾಮಗಳಲ್ಲಿನ ನ್ಯಾಯ ಬೆಲೆ ಅಂಗಡಿಗಳಲ್ಲಿ ಗೋದಾಮಿನಿಂದಲೇ ತಡವಾಗಿ ಪಡಿತರ ಬರುವುದು, ಮನೆಗಳಲ್ಲಿಯೇ ನ್ಯಾಯ ಬೆಲೆ ಅಂಗಡಿ ನಡೆಸುವುದು, ಪಡಿತರ ಬಂದಾಗ ಗ್ರಾಮದಲ್ಲಿನ ಜನತೆಗೆ ಪ್ರಚಾರ ಮಾಡಬೇಕು ಎಂದು ಅನುಷ್ಠಾನ ಸಮಿತಿಯ ಸದಸ್ಯರಾದ ಶಿವರಾಜ್, ಮಧು, ಆಂಜನೇಯ ಇರುಗಳು ಸಭೆಯ ಗಮನಕ್ಕೆ ತಂದಾಗ ಸಭೆಯಲ್ಲಿದ್ದ ಆಹಾರ ಇಲಾಖೆಯ ಶಿರಾಸ್ತೇದಾರ್ ಅರುಣ್ ಕುಮಾರ್ ಸದಸ್ಯರು ಹೇಳಿದ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.ಚನ್ನಗಿರಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಮುಂದಿನ ರಾಷ್ಟ್ರೀಯ ಹೆದ್ದಾರಿ 13ರ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆಗಳಿದ್ದು ಶಿವಮೊಗ್ಗ-ಚಿತ್ರದುರ್ಗಕ್ಕೆ ಸಂಚರಿಸುವ ಸರ್ಕಾರಿ ಬಸ್ಸುಗಳು ಹೆದ್ದಾರಿಯ ರಸ್ತೆಯ ಮಧ್ಯದಲ್ಲಿಯೇ ನಿಂತುಕೊಂಡು ಪ್ರಯಾಣಿಕರನ್ನು ಇಳಿಸುವ ಮತ್ತು ಹತ್ತಿಸಿಕೊಳ್ಳುತ್ತಾರೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಸಭೆಯಲ್ಲಿ ಅಧ್ಯಕ್ಷರ ಗಮನಕ್ಕೆ ತಂದಾಗ ಬರುವ ತಿಂಗಳಿನಲ್ಲಿ ಕೆ.ಎಸ್.ಆರ್.ಟಿ.ಸಿ ಯ ಡಿಪೋ ಆರಂಭಗೊಳ್ಳಲಿದ್ದು ಸರ್ಕಾರಿ ಬಸ್ಸುಗಳು ಚನ್ನಗಿರಿಯ ಡಿಪೋಕ್ಕೆ 30ರಿಂದ 40 ಬಸ್ಗಳು ಬರಲಿದ್ದು ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳಿಗೂ ಬಸ್ ಸಂಚಾರ ವಾಗಲಿದೆ ಎಂದು ಸಭೆಯಲ್ಲಿದ್ದ ಕೆ.ಎಸ್.ಆರ್.ಟಿ.ಸಿಯ ಅಧಿಕಾರಿ ಸಿದ್ದೇಶ್ ಅವರಿಗೆ ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್ ಹೇಳಿದರು.
ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಮಹಮ್ಮದ್ ಜಬೀಉಲ್ಲಾ ಮಾತನಾಡಿ, ಇನ್ನೆರಡು ದಿನಗಳಲ್ಲಿ ಶಾಲಾ-ಕಾಲೇಜುಗಳು ಆರಂಭಗೊಳ್ಳಲಿದ್ದು ಸರ್ಕಾರಿ ಬಸ್ಗಳು ನಿಲುಗಡೆ ಇರುವ ಪ್ರದೇಶಗಳಲ್ಲಿ ಬಸ್ಸುಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಸಭೆಯಲ್ಲಿ ಸಿಡಿಪಿಒ ನಿರ್ಮಲ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಯೋಜನೆ ಜಾರಿಗೊಂಡ 2024-25ರ ಜನವರಿ ವರೆಗೆ ಈಗಾಗಲೇ 18 ಕಂತುಗಳ ಹಣವನ್ನು ಪಾವತಿ ಮಾಡಲಾಗಿದೆ ಎಂದು ಮತ್ತು ಕೆಲ ತಿಂಗಳು ಹಣ ಸಂದಾಯ ವಾಗದೆ ಇರುವ ತಾಂತ್ರಿಕ ಕಾರಣಗಳ ಬಗ್ಗೆಯೂ ಸಮಗ್ರವಾದ ಮಾಹಿತಿಯನ್ನು ಸಭೆಗೆ ನೀಡಿದರು.
ಈ ಸಭೆಯಲ್ಲಿ ಗೃಹಜ್ಯೋತಿ ಅನುಷ್ಠಾನದ ಬಗ್ಗೆ ಬೆಸ್ಕಾಂ ಅಭಿಯಂತರ ಮಂಜುನಾಯ್ಕ್, ಯುವನಿಧಿ ಅನುಷ್ಠಾನದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.ಸಭೆಯಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಶಿವಕುಮಾರ್, ಚಂದ್ರಪ್ಪ, ಶಿವರಾಜ್, ಗುಡ್ಡಪ್ಪ, ಮಧು, ಉಮಾಪತಿ, ಆಂಜನೇಯ, ಸತೀಶ್, ಎಂ.ಸಿ.ಪಾಟೀಲ್ ಹಾಜರಿದ್ದರು.