ಕನನಡಪ್ರಭ ವಾರ್ತೆ ಸುಬ್ರಹ್ಮಣ್ಯಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಭಕ್ತರಿಂದ ಸುಮಾರು ೬ ಲಕ್ಷ ರು. ಮೌಲ್ಯದ ಪುಷ್ಪಾಲಂಕಾರ ಸೇವೆ ಸೋಮವಾರ ನೆರವೇರಿತು.
ಶ್ರೀ ಓಂ ಸ್ಕಂದ ಚಾರಿಟೇಬಲ್ ಟ್ರಸ್ಟ್ನ ಮಂಜುನಾಥ್, ಉಮೇಶ್, ಬಾಲಾಜಿ ನೇತೃತ್ವದಲ್ಲಿ ಟ್ರಸ್ಟ್ನ ಎಲ್ಲ ಸದಸ್ಯರು ಸೇರಿ ಸೇವೆ ನೆರವೇರಿಸಿದ್ದಾರೆ. ಟ್ರಸ್ಟ್ನ ಸುಮಾರು ೫೦ ಮಂದಿ ಸದಸ್ಯರು ಕ್ಷೇತ್ರದಲ್ಲಿ ಪುಷ್ಪಾಲಂಕಾರ ಮಾಡಿದರು. ಶ್ರೀ ದೇವಳದ ನಾಗೇಶ್ ಎ.ವಿ. ಮತ್ತು ಜಗದೀಶ್ ಎ.ವಿ ಸಹಕರಿಸಿದ್ದರು. ಸೇವೆ ನೆರವೇರಿಸಿದ ದಾನಿಗಳಿಗೆ ದೇವಳದ ವತಿಯಿಂದ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.
* ವಿವಿಧ ಹೂವಿನ ಶೃಂಗಾರ:ಶ್ರೀ ದೇವಳದ ಹೊರಾಂಗಣ, ಶ್ರೀ ದೇವಳದ ಸುತ್ತುಗೋಪುರ, ಒಳಾಂಗಣಗಳಲ್ಲಿ ಪುಷ್ಪಗಳಿಂದ ಅಲಂಕಾರ ಮಾಡಿದ್ದರು. ಒಳಾಂಗಣದಲ್ಲಿ ವಿಶೇಷವಾಗಿ ಅಲಂಕಾರವನ್ನು ಮಾಡಲಾಗಿತ್ತು. ವಿವಿಧ ವರ್ಣದ ಆರ್ಕೆಡ್ಸ್, ಮಲ್ಲಿಗೆ, ಸುಗಂಧರಾಜ, ಬೇರೆ ಬೇರೆ ವರ್ಣದ ಸೇವಂತಿಕೆ, ಕನಕಾಂಬರ, ಜೀನ್ಯ, ಗುಲಾಬಿ, ಆಸ್ಟ್ರೇಲಿಯಾ ಹೂ, ವಿವಿಧ ವರ್ಣದ ಚೆಂಡು ಹೂ ಸೇರಿದಂತೆ ಇತರ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ದೇವಳದ ಗರ್ಭಗುಡಿಯ ಮುಂಭಾಗದಲ್ಲಿನ ಗರುಡ ಸ್ತಂಭದ ಬಳಿ ಅತ್ಯಾಕರ್ಷಕವಾಗಿ ಪುಷ್ಪಾಲಂಕಾರ ಮಾಡಲಾಗಿತ್ತು. ಶ್ರೀ ದೇವಳದ ಹೊರಾಂಗಣದಲ್ಲಿರುವ ದೊಡ್ಡ ಗಂಟೆಯ ಸಮೀಪ ಅತ್ಯಾಕರ್ಷಕವಾಗಿ ಹೂವಿನಿಂದ ನವಿಲನ್ನು ಚಿತ್ರೀಕರಿಸಲಾಗಿತ್ತು.ರಾಜಗೋಪುರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಎಂಬುದಾಗಿ ಪುಷ್ಪಗಳಿಂದ ಬರೆಯಲಾಗಿತ್ತು.