3ಡಿ 4ಕೆ ಲ್ಯಾಪ್ರೋಸ್ಕೋಪಿ ಮೂಲಕ ಪ್ಯಾಂಕ್ರಿಯಾಟೈಟಿಸ್‌ ಗೆ ಚಿಕಿತ್ಸೆ

KannadaprabhaNewsNetwork |  
Published : Feb 09, 2025, 01:18 AM IST
42 | Kannada Prabha

ಸಾರಾಂಶ

ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾಗದಿದ್ದರೆ ಪ್ಯಾಂಕ್ರಿಯಾಟೀಟಿಸ್‌ ಕ್ಯಾನ್ಸರ್‌ ಕಾರಕವಾಗಿ ಬದಲಾಗಬಹುದಾದ ಸಾಧ್ಯತೆ

ಕನ್ನಡಪ್ರಭ ವಾರ್ತೆ ಮೈಸೂರುಅಪರೂಪದಲ್ಲಿ ಅಪರೂಪ ಎನ್ನಲಾದ ದೀರ್ಘಕಾಲದ ಅನುವಂಶೀಯ ಪ್ಯಾಂಕ್ರಿಯಾಟೈಟಿಸ್‌ ನಿಂದ ಬಳಲುತ್ತಿದ್ದ 14 ವರ್ಷದ ಬಾಲಕನಿಗೆ ನಗರದ ಎನ್‌.ಜೆ. ಆಸ್ಪತ್ರೆಯು 3ಡಿ 4ಕೆ ಲ್ಯಾಪ್ರೋಸ್ಕೋಪಿ ಮತ್ತು ಪ್ಲೋರೊಸೆನ್ಸ್‌ ಇಮೇಜ್‌ಗೈಡೆಡ್‌ ಸರ್ಜರಿಯ ಮೂಲಕ ಗುಣಪಡಿಸುವಲ್ಲಿ ಯಶಸ್ವಿಯಾಗಿದೆ.ಭಾರತದಲ್ಲಿಯೇ ಮೊದಲು ಎನ್ನಲಾದ 3ಡಿ 4ಕೆ ಲ್ಯಾಪ್ರೋಸ್ಕೋಪಿ ತಂತ್ರಜ್ಞಾನವನ್ನು ಹೊಂದಿರುವ ಈ ಆಸ್ಪತ್ರೆಯು ತೀರ ವಿರಳವಾದ ಲ್ಯಾಪ್ರೋಸ್ಕೋಪಿಕ್‌ ಶಸ್ತ್ರಚಿಕಿತ್ಸೆಯ ಮೂಲಕ ಬಾಲಕನಿಗೆ ತಗುಲಬಹುದಾಗಿದ್ದ ಕ್ಯಾನ್ಸರನ್ನು ತಡೆಗಟ್ಟಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾಗದಿದ್ದರೆ ಪ್ಯಾಂಕ್ರಿಯಾಟೀಟಿಸ್‌ ಕ್ಯಾನ್ಸರ್‌ ಕಾರಕವಾಗಿ ಬದಲಾಗಬಹುದಾದ ಸಾಧ್ಯತೆ ಇತ್ತು ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ. ಸತೀಶ್‌ ದುರ್ಗೇಶ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಆಸ್ಪತ್ರೆಯ ಸಂಸ್ಥಾಪಕ ಡಾ. ದುರ್ಗೇಶ್‌ ಮಾತನಾಡಿ, ವಿಶ್ವದಲ್ಲಿ ಇಂತಹ ಶಸ್ತ್ರಚಿಕಿತ್ಸೆ ಕೇವಲ ಏಳೆಂಟು ಆಗಿರಬಹುದು. ಅಷ್ಟು ಅಪರೂಪದ ಈ ಕಾಯಿಲೆಗೆ ನಾವು ಚಿಕಿತ್ಸೆ ನೀಡಿದ್ದೇವೆ.ಹಾಸನ ಮೂಲದ 14 ವರ್ಷದ ಬಾಲಕನಿಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ಹೊಟ್ಟೆ ನೋವಿಗೆ ಮಾತ್ರೆ ಸೇವಿಸುತ್ತಿದ್ದ. ಅದು ದೈನಂದಿನ ಹಿಂಸೆಯಾಗಿ ಮಾರ್ಪಟ್ಟಿತು. ಕಡೆಗೆ ಶಾಲೆಗೆ ಹೋಗುವುದನ್ನೂ ನಿಲ್ಲಿಸಬೇಕಾಯಿತು. ತೂಕ ಕಡಿಮೆ ಆಗುತ್ತ, ಜ್ವರದ ಮರುಕಳಿಸಲಾರಂಭಿಸಿತು. ಈ ವೇಳೆ ಮೈಸೂರು ಇನ್‌ ಸ್ಟಿಟ್ಯೂಟ್‌ಆಫ್‌ಗ್ಯಾಸ್ಟ್ರೋ ಎಂಟರಾಲಜಿಯಲ್ಲಿ ಅವರು ಸಿಸ್ಟಿಕ್‌ ಫೈಬ್ರೋಸಿಸ್‌ ಎಂಬ ಅಪರೂಪದ ಜೆನೆಟಿಕ್‌ ಡಿಸಾರ್ಡರ್‌ ನಿಂದ ಬಳಲುವುದನ್ನು ಗಮನಿಸಲಾಯಿತು. ಇದು ಪುನರಾವರ್ತಿತ ಸೋಂಕುಗಳಿಗೆ ಕಾರಣವಾಗುತ್ತದೆ. ಅಂತಿಮವಾಗಿ ಮಧುಮೇಹ ಮತ್ತು ಬಳಿಕ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ಗೆ ಕಾರಣವಾಗಬಹುದು. ಆದ್ದರಿಂದ ಅನುಭವಿ ಪ್ಯಾಂಕ್ರಿಯಾಟಿಕ್‌ ಶಸ್ತ್ರಚಿಕಿತ್ಸಕ ಡಾ. ಸತೀಶ್‌ದುರ್ಗೇಶ್‌ ಮತ್ತು ಡಾ. ಸುದೀಶ್‌ ದುರ್ಗೇಶ್‌ ನೇತೃತ್ವದಲ್ಲಿ ಚರ್ಚಿಸಿ, ಬಾಲಕನ ವಯಸ್ಸಿನ ದೃಷ್ಟಿಯಿಂದ ಮತ್ತು ಉಳಿದ ಆರೋಗ್ಯಕರ ಮೇದೋಜ್ಜೀರಕ ಗ್ರಂಥಿ ಉಳಿಸಲು ಮತ್ತು ಅಡ್ಡ ಪರಿಣಾಮ ತಡೆಯಲು 3ಡಿ 4ಕೆ ಲ್ಯಾಪ್ರೋಸ್ಕೋಪಿ, ಫ್ರೋರೊಸೆನ್ಸ್‌ ಮಾರ್ಗದರ್ಶಿ ಶಸ್ತ್ರಚಿಕಿತ್ಸೆಯನ್ನು ಮಾಡಲು ನಿರ್ಧರಿಸಲಾಯಿತು.ಈಗ ಬಾಲಕನಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆರು ತಿಂಗಳಿನಿಂದ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ. ಆತನಿಗೆ ಯಾವುದೇ ಔಷಧಿಗಳ ಅಗತ್ಯವಿಲ್ಲದೆ ಆರೋಗ್ಯವಾಗಿದ್ದಾನೆ. ಕಳೆದು ಹೋಗಿದ್ದ ತೂಕವನ್ನು ಮರಳಿ ಪಡೆಯುತ್ತಿದ್ದಾನೆ. ಹೊಟ್ಟೆ ನೋವು ಕೂಡ ಕಂಡುಬಂದಿಲ್ಲ. ಇದು ನಮ್ಮ ಆಸ್ಪತ್ರೆಯ ಅತ್ಯಾಧುನಿಕ ತಂತ್ರಜ್ಞಾನದ ಶಕ್ತಿ ಮತ್ತು ಮೈಸೂರು ಇನ್‌ ಸ್ಟಿಟ್ಯೂಟ್‌ಆಫ್‌ಗ್ಯಾಸ್ಟ್ರೋ ಎಂಟರಾಲಜಿಯ ಶಸ್ತ್ರಚಿಕಿತ್ಸಾ ತಂಡದ ಕೌಶಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಡಾ. ಮಮತಾ, ಡಾ. ಸಿಂಧು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡುಗೊಲ್ಲರ ಸಾಂಪ್ರದಾಯಿಕ ಆಚರಣೆಗಳು ಮುಂದುವರಿಯಬೇಕು
ದೌರ್ಜನ್ಯ ಪ್ರಕರಣಗಳ ವಿಚಾರಣೆ ತ್ವರಿತ ನ್ಯಾಯಾಲಯಗಳಲ್ಲಿ ನಡೆಯಲಿ: ಪಿ.ಯಶೋಧ