ಫ್ಲೈ ಓವರ್ ರಸ್ತೆ ದುರಸ್ತಿಗೆ ತಾಕೀತು

KannadaprabhaNewsNetwork | Updated : May 27 2025, 12:43 AM IST
ವಾಹನ ಸಂಚಾರಕ್ಕೆ ತೊಡಕಾಗಿರುವ ದಾವಣಗೆರೆ ಮಾರ್ಗದ ರೈಲ್ವೆ ಫ್ಲೈ ಓವರ್ ರಸ್ತೆ ದುರಸ್ತಿಗೊಳಿಸುವಂತೆ ಪಿಡಬ್ಲುಡಿ ಎಇಇ ಸುಂದರ್‌ ಅವರಿಗೆ ನಗರಸಭೆ ಅಧ್ಯಕ್ಷೆ ಕವಿತ ಮಾರುತಿ ಬೇಡರ್ ಆಗ್ರಹಿಸಿದ್ದಾರೆ.
Follow Us

ಹರಿಹರ: ವಾಹನ ಸಂಚಾರಕ್ಕೆ ತೊಡಕಾಗಿರುವ ದಾವಣಗೆರೆ ಮಾರ್ಗದ ರೈಲ್ವೆ ಫ್ಲೈ ಓವರ್ ರಸ್ತೆ ದುರಸ್ತಿಗೊಳಿಸುವಂತೆ ಪಿಡಬ್ಲುಡಿ ಎಇಇ ಸುಂದರ್‌ ಅವರಿಗೆ ನಗರಸಭೆ ಅಧ್ಯಕ್ಷೆ ಕವಿತ ಮಾರುತಿ ಬೇಡರ್ ಆಗ್ರಹಿಸಿದರು.

ಪಿಡಬ್ಲುಡಿ ಎಇಇ ಸುಂದರ್‌ರೊಂದಿಗೆ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧ್ಯಕ್ಷರು, ೨ ವರ್ಷಗಳಿಂದ ಫ್ಲೈ ಓವರ್ ಮೇಲೆ ಹಾಗೂ ಅಕ್ಕಪಕ್ಕದ ಸರ್ವಿಸ್ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಈ ಸೇತುವೆ ಮೂಲಕ ಹಾಗೂ ಸರ್ವಿಸ್ ರಸ್ತೆ ಮೂಲಕ ದಾವಣಗೆರೆ, ಅಮರಾವತಿ, ಜೈಭೀಮನಗರ, ಅಮರಾವತಿ ಕಾಲೋನಿ, ಕೆಎಚ್‌ಬಿ ಕಾಲೊನಿ, ನ್ಯಾಯಾಲಯ, ದೊಗ್ಗಳ್ಳಿ, ಆಂಜನೇಯ ಬಡಾವಣೆ, ಸೇಂಟ್ ಅಲೋಶಿಯಸ್ ಕಾಲೇಜು ಹಾಗೂ ಇತರೆ ಪ್ರದೇಶಗಳಿಗೆ ನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ರಸ್ತೆಗಳಲ್ಲಿ ಸಾಗುವಾಗ ಗುಂಡಿಗಳಿರುವ ಕಾರಣ ಅಪಘಾತವಾಗಿ ಜೀವಕ್ಕೆ ಹಾನಿಯಾದರೆ ಯಾರು ಹೊಣೆ? ಸುಲಲಿತ ಸಂಚಾರಕ್ಕೆ ಕೂಡಲೆ ಸೂಕ್ತ ವ್ಯವಸ್ಥೆ ಮಾಡಿಸಿರಿ ಎಂದು ತಾಕೀತು ಮಾಡಿದರು.

ಪಿಡಬ್ಲುಡಿ ಎಇಇ ಸುಂದರ್ ಮಾತನಾಡಿ, ಫೈಓವರ್ ಹಾಗೂ ಅಕ್ಕಪಕ್ಕದ ಸರ್ವಿಸ್ ರಸ್ತೆ ರೈಲ್ವೆ ಇಲಾಖೆಯಿಂದ ನಿರ್ಮಿಸಲಾಗಿದೆ. ನಮಗೆ ಈ ಹಿಂದೆ ಹಸ್ತಾಂತರ ಪಡೆಯಲು ಪತ್ರ ಬರೆದಿದ್ದರು. ಆದರೆ ಇಲ್ಲಿನ ನ್ಯೂನತೆಗಳನ್ನು ಸರಿಪಡಿಸಿದ ನಂತರ ಹಸ್ತಾಂತರ ಪಡೆಯಲಾಗುವುದೆಂದು ನಾವು ಪ್ರತಿಕ್ರಿಯಿಸಿ ಪತ್ರ ಬರೆದಿದ್ದೆವು ಎಂದು ಸ್ಪಷ್ಟಪಡಿಸಿದರು.

ರೈಲ್ವೆ ಇಲಾಖೆಗೆ ಇತ್ತೀಚಿಗೆ ಮತ್ತೊಂದು ಪತ್ರ ಬರೆದಿದ್ದು, ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳುವ ನಿರೀಕ್ಷೆ ಇದೆ. ಸಿಆರ್‌ಎಫ್ ಅನುದಾನದಲ್ಲಿ ಸಮೀಪದ ಜೋಡಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಆ ಕಾಮಗಾರಿಯಲ್ಲಿ ಫ್ಲೈ ಓವರ್ ಪಕ್ಕದ ಸರ್ವಿಸ್ ರಸ್ತೆಗಳ ಡಾಂಬರೀಕರಣ ನಡೆಯಲಿದೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.

ಜೆಡಿಎಸ್ ಯುವ ಮುಖಂಡ ಮಾರುತಿ ಬೇಡರ್ ಹಾಗೂ ಇತರರಿದ್ದರು.