ಕನ್ನಡಪ್ರಭ ವಾರ್ತೆ ಕೊಪ್ಪಳ
ಮಾಜಿ ಸಚಿವ ವೆಂಕಟರಾವ್ ನಾಡಗೌಡ್ರು, ಶಾಸಕಿ ಕೆರೆಮ್ಮ ನಾಯಕ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್, ಜೆಡಿಎಸ್ ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್ ಹಾಗೂ ಮುಖಂಡರು ತುಂಗಭದ್ರಾ ಅಣೆಕಟ್ಟೆಯಲ್ಲಿ ಕೊಚ್ಚಿ ಹೋಗಿರುವ ಕ್ರಸ್ಟ್ ಗೇಟ್ಸ್ ಸ್ಥಳದ ಪರಿಶೀಲನೆ ನಡೆಸಿದರು. ಕ್ರಸ್ಟ್ ಗೇಟ್ ಕೊಚ್ಚಿ ಹೋದ ನಂತರ ಆಗಿರುವ ಬೆಳವಣಿಗೆ ಕುರಿತು ಚರ್ಚಿಸಿದರು.
ರಾಜ್ಯ ಸರ್ಕಾರ ಅಣೆಕಟ್ಟು ನಿರ್ವಹಣೆಯ ಸಭೆಯನ್ನು ಬೆಂಗಳೂರಿನಲ್ಲಿ ಮಾಡಿದ್ದು ತಪ್ಪು. ಮಳೆಗಾಲದಲ್ಲಿ ಆಣೆಕಟ್ಟನ್ನು ಸರಿಯಾಗಿ ಪರಿಶೀಲನೆ ಮಾಡದಿರುವುದು ಅಕ್ಷಮ್ಯ ಅಪರಾಧ. ಅಣೆಕಟ್ಟು ನಿರ್ವಹಣೆ ರಾಜ್ಯ ಸರ್ಕಾರದ ಜವಾಬ್ದಾರಿ. ಇದರಲ್ಲಿ ಕೇಂದ್ರ ಸರ್ಕಾರವನ್ನು ದೋಷಿಸಿ ಪ್ರಯೋಜನವಿಲ್ಲವೆಂದು ವೆಂಕಟರಾವ್ ನಾಡಗೌಡ್ರ ಹೇಳಿದರು.ಈಗಾಗಲೇ ರೈತರಿಗೆ ಒಂದು ಹೆಕ್ಟೇರಿಗೆ ₹50,000 ಪರಿಹಾರ ಘೋಷಿಸಬೇಕೆಂದು ಮೈತ್ರಿ ಪಕ್ಷ ಒತ್ತಾಯಿಸಿವೆ. ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕೂಡಲೇ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಸಿ.ವಿ. ಚಂದ್ರಶೇಖರ ಒತ್ತಾಯಿಸಿದರು.
ಯಂತ್ರದ ಮೇಲೆ ಅವಲಂಬನೆಯಿಂದಾಗಿ ದುರಂತ- ಸುತ್ತೂರು ಶ್ರೀಗಳು:
ಮನುಷ್ಯ ಯಂತ್ರಗಳ ಮೇಲೆ ಹೆಚ್ಚು ಹೆಚ್ಚು ಅವಲಂಬನೆ ಆಗುತ್ತಿರುವುದರಿಂದ ಇಂಥ ದುರಂತಗಳು ನಡೆಯುತ್ತವೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ ಗೇಟ್ ಮುರಿದಿರುವ ಮಾಹಿತಿ ಗೊತ್ತಾಯಿತು, ಹೀಗಾಗಿ, ಈ ಭಾಗದಲ್ಲಿಯೇ ಇರುವುದರಿಂದ ಭೇಟಿ ಮಾಡಿ ನೋಡಿದ್ದೇನೆ. ಪರಿಶೀಲನೆಯ ವೇಳೆಯಲ್ಲಿ ಇನ್ನೂ ಒಳಹರಿವು ಇರುವುದರಿಂದ ಅಷ್ಟರೊಳಗಾಗಿ ಗೇಟ್ ನಿರ್ಮಾಣವಾದರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.ಸರ್ಕಾರ ಈಗಾಗಲೇ ತುರ್ತು ಕ್ರಮ ವಹಿಸಿದೆ. ಅಗತ್ಯ ರೀತಿಯಲ್ಲಿ ಕ್ರಮಕೈಗೊಂಡು ಗೇಟ್ ಪುನರ್ ನಿರ್ಮಾಣ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಆದಷ್ಟು ಬೇಗನೆ ಕಾರ್ಯ ಪೂರ್ಣಗೊಂಡು ನೀರು ನಿಲ್ಲುವಂತಾಗಲಿ ಎಂದರು.ಇಂದು ಅಥವಾ ನಾಳೆಯೊಳಗಾಗಿ ಗೇಟ್ ಕೂಡಿಸುವ ಪ್ರಯತ್ನ ನಡೆದಿದೆ. ಒಂದು ಬೆಳೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಈಗಾಗಲೇ ಸಿಎಂ ಹಾಗೂ ಡಿಸಿಎಂ ಅವರೇ ಹೇಳಿದ್ದಾರೆ. ರಾಜ್ಯಾದ್ಯಂತ ಇರುವ ಜಲಾಶಯಗಳ ಸುರಕ್ಷತೆಯನ್ನು ಸಹ ಪರಿಶೀಲಿಸುವ ಕಾರ್ಯ ನಡೆದಿದೆ ಎಂದರು.ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ ಇದ್ದರು.