ಕನ್ನಡಪ್ರಭ ವಾರ್ತೆ ಮಂಡ್ಯ ನಶಿಸುತ್ತಿರುವ ಜನಪದ ಕಲೆ, ಸಾಹಿತ್ಯವನ್ನು ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ತಿಳಿಸಿದರು.
ಜನಪದರು ಕಟ್ಟಿ ಬೆಳೆಸಿದ ಜನಪದ ಕಲೆ ಮತ್ತು ಸಾಹಿತ್ಯ ಇತ್ತೀಚಿನ ಕಾಲಘಟ್ಟದಲ್ಲಿ ನಶಿಸುವ ಹಂತಕ್ಕೆ ಬಂದು ನಿಂತಿದೆ. ಪಾಶ್ಚಿಮಾತ್ಯ ಸಾಹಿತ್ಯದ ಹೊಡೆತಕ್ಕೆ ಸಿಲುಕಿ ಜನಪದ ನಲುಗಿ ಹೋಗುತ್ತಿದೆ. ಈ ದಿನಗಳಲ್ಲಿ ಸಂಗೀತ ನೃತ್ಯ ಕಲಾನಿಕೇತನ ಸಂಸ್ಥೆಯವರು ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದು ಶ್ಲಾಘನೀಯ ಎಂದರು.
ಜನಪದ ಸಾಹಿತ್ಯವನ್ನು ಅರಿತು, ಜನಪದ ಕಲೆಯನ್ನು ಯುವಜನರು ಕಲಿತು ಪ್ರದರ್ಶಿಸುವಂತಹ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಕೆಲವು ಕಲೆಗಳು ಸುಲಭವಾಗಿದ್ದರೆ, ಮತ್ತೆ ಕೆಲವು ಕಠಿಣವಾಗಿರುತ್ತವೆ. ಎಲ್ಲವನ್ನೂ ಅಭ್ಯಾಸ ಮಾಡುವುದು ಬಹಳ ಮುಖ್ಯ. ಇದನ್ನು ಜನರಿಗೆ ಉಣಬಡಿಸುವುದು ಸಹ ಅಷ್ಟೇ ಸವಾಲಿನ ಕೆಲಸವೂ ಆಗುತ್ತದೆ ಎಂದು ಪ್ರತಿಪಾದಿಸಿದರು.ಖ್ಯಾತ ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಬಹಳ ಮುಖ್ಯ ಇದರಿಂದ ಅವರ ಕಲಾಪ್ರತಿಭೆ ಮತ್ತಷ್ಟು ಬೆಳಗಲು ಸಾಧ್ಯವಾಗುತ್ತದೆ ಎಂದರು.
ಹೆಚ್ಚಿನವರಿಗೆ ಅವಕಾಶಗಳು ಸಿಕ್ಕಲ್ಲಿ ಮತ್ತಷ್ಟು ಅತ್ಯುತ್ತಮವಾಗಿ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಪ್ರತಿಭೆಯನ್ನು ಗುರುತಿಸದಿದ್ದರೆ ಉತ್ತಮವಾದ ಕಲಾಪ್ರತಿಭೆ ಸಿಗುವುದು ಅಸಾಧ್ಯವಾಗುತ್ತದೆ. ಇದನ್ನು ಮನಗಂಡು ಸಂಘ ಸಂಸ್ಥೆಗಳು ಸಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಸುಜಾತ ಸಿದ್ದಯ್ಯ ವಹಿಸಿದ್ದರು. ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಸುಜಾತ ರಮೇಶ್, ಜಿಲ್ಲಾ ಮೀನು ಉತ್ಪಾದಕರು ಮತ್ತು ಮಾರಾಟಗಾರರ ಸಹಕಾರ ಸಂಘದ ಅಧ್ಯಕ್ಷೆ ಭಾಗ್ಯ, ಗಾಯಕರೂ ಆದ್ಯ ವೈದ್ಯ ಡಾ. ಮಾದೇಶ್, ಮುಡಾ ಮಾಜಿ ನಿರ್ದೇಶಕ ಬಿ.ಎಸ್. ಹನುಮಂತು, ಸಂಗೀತ ನೃತ್ಯ ಕಲಾನಿಕೇತನ ಸಂಸ್ಥೆ ಅಧ್ಯಕ್ಷೆ ಶೋಭ ಪಿ.ಗೌಡ, ಕಾರ್ಯದರ್ಶಿ ಲೀಲಾವತಿ, ಖಜಾಂಚಿ ಬಿ.ಆರ್. ಸುನೀತಾ, ಗಾಯಕ ದೇವರಾಜ್ ಕೊಪ್ಪ ಇತರರು ಭಾಗವಹಿಸಿದ್ದರು.