ಎಲ್ಲ ಕಲೆಗಳಿಗೂ ಜಾನಪದವೇ ಮೂಲ: ಡಾ.ರಾಮಕೃಷ್ಣಾರೆಡ್ಡಿ

KannadaprabhaNewsNetwork | Published : Mar 24, 2025 12:31 AM

ಸಾರಾಂಶ

ದಾಬಸ್‍ಪೇಟೆ: ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿಯೇ ಸ್ಥಳೀಯ ಸಂಸ್ಕೃತಿಯನ್ನು ಅರಿತು ಮುಂದುವರಿಯಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ರಾಮಕೃಷ್ಣಾರೆಡ್ಡಿ ತಿಳಿಸಿದರು.

ದಾಬಸ್‍ಪೇಟೆ: ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿಯೇ ಸ್ಥಳೀಯ ಸಂಸ್ಕೃತಿಯನ್ನು ಅರಿತು ಮುಂದುವರಿಯಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ರಾಮಕೃಷ್ಣಾರೆಡ್ಡಿ ತಿಳಿಸಿದರು.

ತ್ಯಾಮಗೊಂಡ್ಲು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಾಂಸ್ಕೃತಿಕ ಸಮಿತಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ-2025 ನಮ್ಮ ಸಂಸ್ಕೃತಿ ನನ್ನ ಹೆಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿಯ ಎಲ್ಲ ಕಲೆಗಳಿಗೂ ಜಾನಪದವೇ ಮೂಲ, ಆಧುನಿಕತೆ, ತಂತ್ರಜ್ಞಾನಗಳಿಂದ ಜಾನಪದ ಯುವ ಸಮುದಾಯದಿಂದ ದೂರವಾಗುತ್ತಿದೆ ಎಂದರು.

ಪರಿಚಯಿಸುವ ಪ್ರಯತ್ನ: ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ಏಪ್ರಿಲ್‍ವರೆಗೂ ಚಾನಪದ ಉತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜೀವನದಲ್ಲಿ ನಿರಂತರ ಕ್ರಮ ಹಾಗೂ ಪ್ರಯತ್ನಗಳಿಂದ ಸಾಧನೆ ಮಾಡಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ವೃದ್ಧಿಸಿಕೊಂಡರೆ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದರು.

ಪ್ರಾಂಶುಪಾಲ ತಿಮ್ಮಹನುಮಯ್ಯ ಮಾತನಾಡಿ, ಜಾನಪದ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ, ಜಾನಪದ ಕಲೆ ಗೌರವಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಜಾನಪದ ಕಲಾವಿದರ ಸಂಘದ ಅಧ್ಯಕ್ಷ ಡಾ.ಕೆ.ಸಣ್ಣಹೊನ್ನು ಕಂಟಲಗೆರೆ ಹಾಗೂ ತಂಡದವರು ಜಾನಪದ ಹಾಡುಗಳನ್ನು ಹಾಡುವ ಮೂಲಕ ಅದರ ಮಹತ್ವ ತಿಳಿಸಿಕೊಟ್ಟರು.

ಕಾಲೇಜಿನ ಪ್ರತಿ ತರಗತಿಯ ವಿದ್ಯಾರ್ಥಿಗಳು ಜಾನಪದ ಉತ್ಸವದಲ್ಲಿ ತಮ್ಮ ತರಗತಿಗಳನ್ನು ಸುಗ್ಗಿ ರಾಶಿ ಪೂಜೆ, ವಿಭಿನ್ನ ಶೈಲಿಯ ತೆಂಗಿನ ಗರಿದು ಚಪ್ಪರಗಳ ಅಲಂಕಾರ ಮಾಡಿ, ಹಾಡು ಮತ್ತು ನೃತ್ಯ ಪ್ರದರ್ಶನ ಮೂಲಕ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಅಮರೇಂದ್ರ, ಸಾಂಸ್ಕೃತಿಕ ಸಮಿತಿ ಸಂಚಾಲಕ ದಿವಾಕರ, ಉಪನ್ಯಾಸಕರಾದ ಡಾ. ರತ್ನ, ತಾರಾಮಣಿ, ಮಂಜುನಾಥ್, ಸಾಹಿಪ್ರ ಸಾದ್, ರಮೇಶ್, ಆನಂದ್, ಲಕ್ಷ್ಮೀನರಸಿಂಹಯ್ಯ ಮಹಾದೇವ್ ಮತ್ತಿತರರು ಉಪಸ್ಥಿತರಿದ್ದರು.

ಪೋಟೋ 6 :

ತ್ಯಾಮಗೊಂಡ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಾಂಸ್ಕೃತಿಕ ಸಮಿತಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ-2025 ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ರಾಮಕೃಷ್ಣಾರೆಡ್ಡಿ ಉದ್ಘಾಟಿಸಿದರು.

Share this article