ಜನಪದ ವಿದ್ವಾಂಸ ಡಾ.ಎನ್.ಆರ್. ನಾಯಕ ನಿಧನ

KannadaprabhaNewsNetwork |  
Published : Sep 15, 2025, 01:00 AM IST
ಡಾ.ಎನ್.ಆರ್.ನಾಯಕ | Kannada Prabha

ಸಾರಾಂಶ

ಮರಣಾನಂತರ ತಮ್ಮ ಕಣ್ಣನ್ನು ದಾನ ಮಾಡಿದ್ದು, ಕುಮಟಾದ ರೇವಣಕರ್ ಕಣ್ಣಿನ ಆಸ್ಪತ್ರೆಗೆ ತಮ್ಮ ಕಣ್ಣನ್ನು ನೀಡಿದ್ದಾರೆ.

ಹೊನ್ನಾವರ: ತಾಲೂಕಿನ ಎಸ್.ಡಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಜನಪದ ವಿದ್ವಾಂಸ, ಸಾಹಿತಿ, ವಿಚಾರವಾದಿ ಡಾ.ಎನ್.ಆರ್. ನಾಯಕ (೯೧) ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೊನ್ನಾವರದ ಸ್ವಗೃಹದಲ್ಲಿ ಭಾನುವಾರ ಮಧ್ಯಾಹ್ನ ಅಸುನೀಗಿದರು.

ಅವರ ಮರಣಾನಂತರ ತಮ್ಮ ಕಣ್ಣನ್ನು ದಾನ ಮಾಡಿದ್ದು, ಕುಮಟಾದ ರೇವಣಕರ್ ಕಣ್ಣಿನ ಆಸ್ಪತ್ರೆಗೆ ತಮ್ಮ ಕಣ್ಣನ್ನು ನೀಡಿದ್ದಾರೆ. ಇವರ ಮಡದಿ ಡಾ.ಶಾಂತಿ ನಾಯಕ್ ಅಸುನೀಗಿದ ಸರಿಯಾಗಿ ಒಂದು ತಿಂಗಳಿಗೆ ಡಾ.ಎನ್.ಆರ್.ನಾಯಕ ನಿಧನರಾದರು.

ಡಾ.ಎನ್.ಆರ್. ನಾಯಕ ಉತ್ತರಕನ್ನಡದ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ೨೮-೬-೧೯೩೫ರಲ್ಲಿ ಜನಿಸಿದ್ದ ಇವರು ಜಿಲ್ಲೆಯ ಜನಜೀವನದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದರು. ಕಳೆದ ೪೫ ವರ್ಷಕ್ಕೂ ಅಧಿಕ ಕಾಲದಿಂದ ಜನಪದ ಕ್ಷೇತ್ರದಲ್ಲಿ ದುಡಿದಿದ್ದ ವಿದ್ವಾಂಸರಾಗಿದ್ದರು. ಉತ್ತರಕನ್ನಡ ಜಿಲ್ಲೆಯ ಹಾಲಕ್ಕಿ, ಗ್ರಾಮ ಒಕ್ಕಲು, ಸಿದ್ದಿ ಜನಾಂಗದ ಬಗ್ಗೆ ಅಧ್ಯಯನ ನಡೆಸಿ ಅವರ ಬಗ್ಗೆ ಪುಸ್ತಕಗಳನ್ನು ಬರೆದಿದ್ದರು. ಜಾನಪದ ಕಲೆಗಳು ಮತ್ತು ಆಟಗಳಿಂದ ಹಿಡಿದು ಆಚರಣೆಗಳು ಮತ್ತು ಔಷಧೀಯ ಸಸ್ಯಗಳವರೆಗೆ ಕನ್ನಡದಲ್ಲಿ 80ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಬರೆದಿದ್ದಾರೆ ಅಥವಾ ಸಹ-ಲೇಖಕರಾಗಿದ್ದಾರೆ. ಅವರ ಅನೇಕ ಪುಸ್ತಕಗಳನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕಗಳಾಗಿ ಹೊರಹೊಮ್ಮಿದೆ. ಕಥೆ, ಸಂಶೋಧನಾ ಗ್ರಂಥ , ಅನುಭವ ಗ್ರಂಥ , ಜಾನಪದ ಸಂಶೋಧನೆ ಮುಂತಾದ ಬರಹಗಳನ್ನು ಬರೆದಿದ್ದಾರೆ.

ಕರ್ನಾಟಕ ರಾಜ್ಯೋತ್ಸವ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಜಾನಪದ ವಿಶೇಷ ಪ್ರಶಸ್ತಿ, ಗೊರೂಚ ಜಾನಪದ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದರು.

ಇವರು ಪುತ್ರರಾದ ರವೀಂದ್ರ, ವಿವೇಕ ಹಾಗೂ ಪುತ್ರಿ ಡಾ.ಸವಿತಾ, ಅಳಿಯ ಉದಯ್ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಇವರ ನಿಧನಕ್ಕೆ ಎಂಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ, ಆಡಳಿತ ಮಂಡಳಿ ಸರ್ವಸದಸ್ಯರು, ಪ್ರಾಚಾರ್ಯ ಡಾ.ಡಿ.ಎಲ್.ಹೆಬ್ಬಾರ್, ಡಾ.ಶ್ರೀಪಾದ ಹೆಗಡೆ ಕಣ್ಣಿ, ಡಾ.ಶ್ರೀಪಾದ ಶೆಟ್ಟಿ, ಅಳ್ಳಂಕಿ ಕಾಲೇಜಿನ ಪ್ರಾಚಾರ್ಯ ಜಿ.ಎಸ್.ಹೆಗಡೆ , ಕನ್ನಡ ಉಪನ್ಯಾಸಕ ಎನ್.ಜಿ. ಹೆಗಡೆ ಅಪಗಾಲ್, ಪ್ರಶಾಂತ್ ಹೆಗಡೆ ಮೂಡಲಮನೆ ಡಾ.ಎನ್.ಆರ್.ನಾಯಕ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಎನ್.ಆರ್.ನಾಯಕ್ ಇಚ್ಛೆಯಂತೆ ಅಂತ್ಯಸಂಸ್ಕಾರ ಸೋಮವಾರ ಬೆಳಿಗ್ಗೆ 10.30ಕ್ಕೆ ಹೊನ್ನಾವರದ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು. ಹೊನ್ನಾವರದ ಸ್ವಗೃಹ ಸುಹಾಸದಲ್ಲಿ ಮುಂಜಾನೆ 10 ಗಂಟೆವರೆಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ