ಮಂಗಳೂರಿನ ವೇಣು ಶರ್ಮ, ಪುತ್ರಿ ಅವನಿ ಶರ್ಮ ಸ್ವಾದಿಷ್ಟ ತಿನಿಸುಗಳಲ್ಲಿ ಮಾಡಿದ ಮೋಡಿ
ಕರಾಡ ಸಂಸ್ಕೃತಿಯ ವಿಜಯಯಾತ್ರೆ:
ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಯಶಸ್ವಿಯಾಗಿದ್ದ ಅಪ್ಪ, ಮಗಳ ಅಡುಗೆಯ ಕನಸನ್ನು ಕಂಡಾಗ ತನ್ನ ಪ್ರತಿಷ್ಠೆ ಬದಿಗೊತ್ತಿ, ಅವಳ ಅಡುಗೆ ಮನೆಯಲ್ಲಿ ಒಬ್ಬ ಸಾಮಾನ್ಯ ಸಹಾಯಕನಾಗಿ (Sous-chef) ನಿಲ್ಲಲು ನಿರ್ಧರಿಸಿದರು.
ಅಪ್ಪ-ಮಗಳ ಗುರಿ ಕೇವಲ ಟ್ರೋಫಿ ಗೆಲ್ಲುವುದಾಗಿರಲಿಲ್ಲ. ಅಳಿವಿನಂಚಿನಲ್ಲಿರುವ ತಮ್ಮ ಕರಾಡ ಬ್ರಾಹ್ಮಣ ಸಮುದಾಯದ ವಿಶಿಷ್ಟ ಸಸ್ಯಾಹಾರಿ ಅಡುಗೆಗಳನ್ನು ಇಡೀ ದೇಶಕ್ಕೆ ಉಣಬಡಿಸುವುದಾಗಿತ್ತು. ಸೀಸನ್ನ ಮೊದಲ ‘ಇಮ್ಯುನಿಟಿ ಪಿನ್’ ಗೆದ್ದ ಆ ಕ್ಷಣ ಇಂದಿಗೂ ಮಾಸ್ಟರ್ ಚೆಫ್ ಇತಿಹಾಸದಲ್ಲಿ ಅಮರ. ಪ್ರಬಲ ಸ್ಪರ್ಧಿಗಳ ನಡುವೆ, ಅಪ್ಪ-ಮಗಳು ತಯಾರಿಸಿದ ‘ದೀಪ ಆರಾಧನೆ’ ಎಂಬ ಸಿಹಿ ತಿಂಡಿ ತೀರ್ಪುಗಾರರಾದ ರಣವೀರ್ ಬ್ರಾರ್ ಮತ್ತು ವಿಕಾಸ್ ಖನ್ನಾ ಅವರ ಮನ ಗೆದ್ದಿತು. ಅಂದು ವೇಣು ಶರ್ಮಾ ಅವರ ಕಣ್ಣಿಂದ ಉರುಳಿದ ಆನಂದಬಾಷ್ಪ ಕೇವಲ ಗೆಲುವಿನದ್ದಾಗಿರಲಿಲ್ಲ, ಅದು ತನ್ನ ಮಗಳು ಸಾಧಕಿಯಾಗಿ ನಿಂತಿದ್ದನ್ನು ಕಂಡ ಒಬ್ಬ ತಂದೆಯ ಹೆಮ್ಮೆಯ ಕಣ್ಣೀರು.ಅಡುಗೆ ಮನೆಯಲ್ಲಿ ಸಮಯದ ಮಿತಿ ಎದುರಾದಾಗ, ಒತ್ತಡ ಹೆಚ್ಚಾದಾಗ ಅವನಿ ಗಾಬರಿಯಾಗುತ್ತಿದ್ದಳು. ಆಗ ಅಪ್ಪ ಅವಳ ಬೆನ್ನ ಮೇಲೆ ಕೈ ಇಟ್ಟು ಸಮಾಧಾನಿಸುತ್ತಿದ್ದರು. ಅಪ್ಪ ತರಕಾರಿ ಹೆಚ್ಚುತ್ತಿದ್ದರೆ, ಮಗಳು ತನ್ನ ಆಧುನಿಕ ತಂತ್ರಜ್ಞಾನದ ಅಡುಗೆ ಮಾಡುತ್ತಿದ್ದಳು. ಅಲ್ಲಿ ಅಡುಗೆಯಲ್ಲ, ಒಂದು ಕವಿತೆ ಸೃಷ್ಟಿಯಾಗುತ್ತಿತ್ತು.ಸೋತು ಗೆದ್ದರು: ಫೆ.27ರ ಸೆಮಿ-ಫೈನಲ್ ಸುತ್ತಿನಲ್ಲಿ, ಪ್ಲೇಟಿಂಗ್ ಮುಗಿಸಲು ಕೇವಲ ಎರಡು ನಿಮಿಷಗಳ ಕಾಲಾವಕಾಶ ಸಾಲದೇ ಹೋಯಿತು. ಅಷ್ಟೊಂದು ಪರಿಶ್ರಮ ಪಟ್ಟ ತಂದೆಮಗಳ ಜೋಡಿ ಗೆಲುವಿನ ಹೊಸ್ತಿಲಲ್ಲೇ ಎಲಿಮಿನೇಟ್ ಆಯಿತು. ಅವನಿ ಕಣ್ಣೀರು ಹಾಕುತ್ತಾ ಅಪ್ಪನಿಗೆ ‘ಸಾರಿ ಅಪ್ಪ, ನನ್ನಿಂದಾಗಿ ನಾವು ಸೋತಿದ್ದೇವೆ’ ಎಂದಾಗ, ವೇಣು ಶರ್ಮಾ ಅವರು ಅವಳನ್ನು ತಬ್ಬಿಕೊಂಡು ಹೇಳಿದರು: ‘ಮಗಳೇ, ನೀನು ಸೋತಿಲ್ಲ. ಕಾಸರಗೋಡಿನ ಈ ತಂದೆ-ಮಗಳನ್ನು ಇಡೀ ಭಾರತ ಪ್ರೀತಿಸುವಂತೆ ಮಾಡಿದ್ದೀಯಲ್ಲಾ, ಅದೇ ನಮ್ಮ ಅತಿದೊಡ್ಡ ಗೆಲುವು’.ಅವರು ತಮ್ಮ ಏಪ್ರನ್ ಕಳಚಿ ಹೊರಬರುವಾಗ ತೀರ್ಪುಗಾರರು ಕೂಡ ಕಣ್ಣೀರಿಟ್ಟರು.ಅವನಿ ಮತ್ತು ವೇಣು ಶರ್ಮಾ ಟ್ರೋಫಿ ಗೆಲ್ಲದಿರಬಹುದು, ಆದರೆ ಅವರು ಗೆದ್ದಿದ್ದು ಕೋಟ್ಯಂತರ ತಂದೆ-ಮಕ್ಕಳ ಹೃದಯವನ್ನು. ಕರಾಡ ಅಡುಗೆಯ ಘಮಲು ಇಂದು ಮುಂಬೈನಿಂದ ಭಾರತದ ಎಲ್ಲೆಡೆ ಹರಡಿದೆ. ಶರ್ಮಾ ಕುಟುಂಬದ ಈ ಕಥೆ ಎಂದಿಗೂ ಮುಗಿಯದ ಸ್ಫೂರ್ತಿ.
-ಅಕ್ಷರ ಸಜಂಗದ್ದೆ.