ಹಂಪಿಯಲ್ಲಿ ಮಳೆಗೆ ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಸಾಲುಮಂಟಪದ ಎರಡು ಮಂಟಪಗಳು ಉರುಳಿವೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಹಂಪಿಯ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದರೂ ಈ ಅಪರೂಪದ ಸ್ಮಾರಕಗಳ ಸಂರಕ್ಷಣೆ ಒತ್ತು ನೀಡಲಾಗುತ್ತಿಲ್ಲ ಎಂಬ ಕೂಗು ಎದ್ದಿದೆ. ಭಾರತೀಯ ಪುರಾತತ್ವ ಇಲಾಖೆ ಹಂಪಿಯಲ್ಲಿರುವ ಸ್ಮಾರಕ, ಮಂಟಪ, ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿರುವುದನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ.
ಹಂಪಿಯಲ್ಲಿ ಮಳೆಗೆ ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಸಾಲುಮಂಟಪದ ಎರಡು ಮಂಟಪಗಳು ಉರುಳಿವೆ. ಈ ಮಂಟಪಗಳಲ್ಲಿ ವಿಜಯನಗರ ಅರಸರ ಕಾಲದಲ್ಲಿ ವಜ್ರ, ವೈಢೂರ್ಯ, ಮುತ್ತು, ರತ್ನಗಳನ್ನು ಬಳ್ಳದಿಂದ ಅಳೆಯಲಾಗುತ್ತಿತ್ತು ಎಂದು ಆಗಿನ ಕಾಲಕ್ಕೆ ಹಂಪಿಗೆ ಬಂದಿದ್ದ ವಿದೇಶಿ ಪ್ರವಾಸಿಗರೇ ಹೇಳಿದ್ದಾರೆ. ಹೀಗಿದ್ದರೂ ಹಂಪಿ ಈ ಸಾಲು ಮಂಟಪಗಳ ಸಂರಕ್ಷಣೆ ಹಾಗೂ ಜೀರ್ಣೋದ್ಧಾರಕ್ಕೆ ವೇಗ ದೊರೆತಿಲ್ಲ ಎಂಬ ದೂರುಗಳಿವೆ.
ಹಂಪಿಯ ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಸಾಲು ಮಂಟಪಗಳಲ್ಲಿ ಈ ಹಿಂದೆ ಅಂಗಡಿ-ಮುಂಗಟ್ಟುಗಳನ್ನು ನಡೆಸಲಾಗುತ್ತಿತ್ತು. 2009-10ರಲ್ಲಿ ಕಾರ್ಯಾಚರಣೆ ನಡೆಸಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಆಗಿನ ಜಿಲ್ಲಾಡಳಿತ ತೆರವು ಮಾಡಿತ್ತು. ಬಳಿಕ ಪುರಾತತ್ವ ಇಲಾಖೆ ಸುಪರ್ದಿಗೆ ಒಪ್ಪಿಸಲಾಗಿತ್ತು. ಹೀಗಿದ್ದರೂ ಈ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡುವ ಕೆಲಸ ಮಾತ್ರ ವೇಗ ಪಡೆದಿಲ್ಲ ಎಂಬುದು ಸ್ಮಾರಕಪ್ರಿಯರ ಅಭಿಪ್ರಾಯ.
ಸಮಿತಿ ರಚನೆ:
ಭಾರತೀಯ ಪುರಾತತ್ವ ಇಲಾಖೆಯ ಹಂಪಿ ವಲಯದಿಂದ ಈಗ ಪರಿಣತ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಹಂಪಿಯಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ದೇವಾಲಯ, ಮಂಟಪಗಳು, ಸ್ಮಾರಕಗಳನ್ನು ಗುರುತಿಸಿ ವರದಿ ನೀಡಲಿದೆ. ಈ ವರದಿ ಆಧಾರದಲ್ಲಿ ಕ್ರಮ ವಹಿಸಲು ಪುರಾತತ್ವ ಇಲಾಖೆಯ ಹಂಪಿ ವಲಯ ನಿರ್ಧರಿಸಿದೆ.
2019-20ರಿಂದಲೇ ಹಂಪಿಯ ಸಾಲುಮಂಟಪಗಳ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ. ಆಗ ₹2 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿತ್ತು. ಈಗಲೂ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿದೆ. ರಥಬೀದಿಯ ಸಾಲು ಮಂಟಪಗಳ ಸಮಗ್ರ ಜೀರ್ಣೋದ್ಧಾರಕ್ಕಾಗಿ ₹30 ಕೋಟಿ ವೆಚ್ಚ ತಗುಲಲಿದೆ ಎನ್ನುತ್ತವೆ ಪುರಾತತ್ವ ಇಲಾಖೆಯ ಮೂಲಗಳು.
ಈ ಹಿಂದೆಯೂ ಹಂಪಿಯಲ್ಲಿ ಗಾಳಿ-ಮಳೆಗೆ ಸ್ಮಾರಕಗಳು ಉರುಳಿ ಬಿದ್ದಿದ್ದವು. ಆಗಲೂ ಜಿರ್ಣೋದ್ಧಾರ ಕಾರ್ಯ ನಡೆಸಲಾಗಿತ್ತು. ಈಗಲೂ ಆ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಈ ಹಿಂದೆ ಹಂಪಿಯ ಕುದುರೆಗೊಂಬೆ ಮಂಟಪ, ವರಾಹ ದೇವಾಲಯ, ಶ್ರೀಕೃಷ್ಣ ದೇವಾಲಯದ ಆವರಣದಲ್ಲಿ ಮಂಟಪಗಳು, ಕಮಲ ಮಹಲ್ ಬಳಿ ಕೋಟೆಗೋಡೆ, ಶ್ರೀವಿರೂಪಾಕ್ಷೇಶ್ವರ ರಥಬೀದಿಯ ಮಂಟಪಗಳು, ಮಾಲವ್ಯಂತ ರಘುನಾಥ ದೇವಾಲಯದ ಗಾಳಿ ಗೋಪುರಗಳು ಕೂಡ ಉರುಳಿದ್ದವು. ಆಗ ಜೀರ್ಣೋದ್ಧಾರ ಕೈಗೊಳ್ಳಲಾಗಿತ್ತು. ಈಗ ಈ ಮಂಟಪ ಕೂಡ ಜೀರ್ಣೋದ್ಧಾರ ಮಾಡಲಾಗುವುದು ಎಂದು ಪುರಾತತ್ವ ಇಲಾಖೆ ತಿಳಿಸಿದೆ.
ಹಂಪಿಯ ಸ್ಮಾರಕಗಳನ್ನು ಸಂರಕ್ಷಣೆ ಮಾಡಬೇಕು. ಯುನೆಸ್ಕೊ ಪಟ್ಟಿಯಲ್ಲಿದ್ದರೂ ಗಾಳಿ-ಮಳೆಗೆ ಬೀಳುವ ಹಂತಕ್ಕೆ ತಲುಪಿರುವ ಸ್ಮಾರಕಗಳನ್ನು ಗುರುತಿಸಿ, ಜೀರ್ಣೋದ್ಧಾರ ಕೈಗೊಳ್ಳಲಾಗುತ್ತಿಲ್ಲ ಎನ್ನುತ್ತಾರೆ ವಿಜಯನಗರ ಸ್ಮಾರಕ ಸಂಸ್ಕೃತಿ ಸೇನೆ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ.
ಶಿಥಿಲಾವಸ್ಥೆಯ ಸ್ಮಾರಕ, ಮಂಟಪ, ದೇಗುಲ ಗುರುತಿಸಲು ಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ಸಲ್ಲಿಸಲಿದೆ. ಬಳಿಕ ಕ್ರಮ ವಹಿಸಲಾಗುವುದು. ಮಳೆಗೆ ಬಿದ್ದ ಮಂಟಪಗಳನ್ನು ಜೀರ್ಣೋದ್ಧಾರ ಮಾಡಲಾಗುವುದು ಎನ್ನುತ್ತಾರೆ ಭಾರತೀಯ ಪುರಾತತ್ವ ಇಲಾಖೆ ಹಂಪಿ ವಲಯ ಅಧೀಕ್ಷಕ ನಿಹಿಲ್ ದಾಸ್.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.