ಅಪರಾಧ ನಿಯಂತ್ರಣಕ್ಕೆ ಪೊಲೀಸರಿಗೆ ಮುಕ್ತ ಅಧಿಕಾರ

KannadaprabhaNewsNetwork |  
Published : May 15, 2026, 01:45 AM IST
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಹಾಗೂ ಮಹಾನಗರ ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನೆಯಲ್ಲಿ ಸಚಿವ ಸಂತೋಷ ಲಾಡ್‌ ಮಾತನಾಡಿದರು. | Kannada Prabha

ಸಾರಾಂಶ

ಕಳೆದ ಐದಾರು ತಿಂಗಳಿಂದ ಅಪರಾಧಗಳ ಸಂಖ್ಯೆ ಕಡಿಮೆ ಆಗಿದ್ದರೂ ಸಂಪೂರ್ಣ ನಿಯಂತ್ರಣವಾಗುತ್ತಿಲ್ಲ. ಡ್ರಗ್ಸ್, ಗಾಂಜಾ ಸೇವನೆ, ಮಾರಾಟವಿದ್ದು ಸಂಪೂರ್ಣ ನಿಲ್ಲುತ್ತಿಲ್ಲ.

ಧಾರವಾಡ:

ಜಿಲ್ಲೆಯಲ್ಲಿ ಅಪರಾಧ ಪ್ರಕರಣ ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳಿಗೆ ಮುಕ್ತ (ಫ್ರೀ ಹ್ಯಾಂಡ್) ಅಧಿಕಾರ ನೀಡಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ, ಅದಕ್ಕೆ ಕುಮ್ಮಕ್ಕು ನೀಡುವ ಮತ್ತು ಡ್ರಗ್ಸ್, ಗಾಂಜಾ, ಅಫೀಮು ಪ್ರಕರಣಗಳಲ್ಲಿ ಸಿಗುವ ವ್ಯಕ್ತಿಗಳಿಗೆ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಲಿ. ಈ ಮೂಲಕ ಜಿಲ್ಲೆಯನ್ನು ಡ್ರಗ್ಸ್, ಗಾಂಜಾ ಮತ್ತು ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಹಾಗೂ ಮಹಾನಗರ ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ಕಳೆದ ಐದಾರು ತಿಂಗಳಿಂದ ಅಪರಾಧಗಳ ಸಂಖ್ಯೆ ಕಡಿಮೆ ಆಗಿದ್ದರೂ ಸಂಪೂರ್ಣ ನಿಯಂತ್ರಣವಾಗುತ್ತಿಲ್ಲ. ಡ್ರಗ್ಸ್, ಗಾಂಜಾ ಸೇವನೆ, ಮಾರಾಟವಿದ್ದು ಸಂಪೂರ್ಣ ನಿಲ್ಲುತ್ತಿಲ್ಲ. ಕೆಳಮಟ್ಟದಿಂದ ಪೊಲೀಸ್ ಅಧಿಕಾರಿಗಳು ಪ್ರತಿ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ, ತನಿಖೆ ಮಾಡಿ, ನಿಜವಾದ ಅಪರಾಧಿಗಳ ಮೇಲೆ ಕ್ರಮ ಜರುಗಿಸಬೇಕು. ಅಪರಾಧಿ ಕೃತ್ಯದ ಮನೊಭಾವದವರಿಗೆ ಪೊಲೀಸ್‌ ಅಧಿಕಾರ ತೋರಿಸಿ, ನಿಯಮಾನುಸಾರ ಕಾನೂನು ಕ್ರಮ ಜರುಗಿಸಲು ತಿಳಿಸಿದರು.

ಕಾಲೇಜು, ಸಾರ್ವಜನಿಕ ಸ್ಥಳ ಹಾಗೂ ಗ್ರಾಮ, ಪಟ್ಟಣ ಪ್ರದೇಶಗಳಲ್ಲಿ ಡ್ರಗ್ಸ್, ಗಾಂಜಾ ಅಂತಹ ಅಫೀಮುಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಶಿಕ್ಷಕರನ್ನು, ಸಮಾಜದ ಗಣ್ಯ ವ್ಯಕ್ತಿ, ಜನಾಭಿಪ್ರಾಯ ರೂಪಿಸುವವರನ್ನು ಅಪರಾಧ ಮುಕ್ತ ಜಿಲ್ಲೆ ಮಾಡುವ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದ ಅವರು, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರು ಮತ್ತು ಠಾಣಾ, ವೃತ್ತ ಮಟ್ಟದ ಅಧಿಕಾರಿಗಳು ರಾತ್ರಿ ಜಿಲ್ಲೆಯಲ್ಲಿ ಸಂಚರಿಸಿ, ಅನಿರೀಕ್ಷಿತ ಭೇಟಿ ನೀಡಿ, ಶಾಂತಿ, ಕಾನೂನು ಸುವ್ಯವಸ್ಥೆ ಪರಿಶೀಲಿಸಬೇಕು. ಜೊತೆಗೆ ತಮಗೆ ವರದಿ ಸಲ್ಲಿಸಲು ಲಾಡ್‌ ತಿಳಿಸಿದರು.

ಜಿಲ್ಲೆಯು ವಿದ್ಯಾವಂತರ ನಾಡು, ಸಾಂಸ್ಕೃತಿಕ ಬೀಡು, ಸಾಹಿತ್ಯ, ಸಂಸ್ಕೃತಿಯ ನೆಲ ಎಂಬ ಖ್ಯಾತಿ ಪಡೆದಿದೆ. ಅದಕ್ಕೆ ತಕ್ಕಂತೆ ಇಲ್ಲಿಯ ಯುವ ಜನಾಂಗ ವರ್ತಿಸಬೇಕು. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಸಿ, ಜಿಲ್ಲಾಡಳಿತ ಕಾರ್ಯೋನ್ಮುಖವಾಗಬೇಕು ಎಂದು ಸಚಿವರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್., ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ಪೊಲೀಸ್ ಆಯುಕ್ತ ರವೀಶ ಸಿ.ಆರ್. ಮತ್ತು ಶ್ರುತಿ ಎನ್.ಎಸ್. ಮಾತನಾಡಿದರು. ಎಸಿ ಶಾಲಂ ಹುಸೇನ್ ಸೇರಿದಂತೆ ಪೊಲೀಸ್‌ ಇಲಾಖೆ ವಿವಿಧ ವಿಭಾಗಗಳ ಅಧಿಕಾರಿಗಳು, ರೈಲ್ವೆ ಪೊಲೀಸ್‌ ಅಧಿಕಾರಿಗಳಿದ್ದರು. ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ

ಅಪರಾಧಿಗಳು, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗವಹಿಸುವವರು, ಶಾಂತಿ, ಸುವ್ಯಸ್ಥೆಗೆ ದಕ್ಕೆ ತರುವವರ ಮೇಲೆ ಮುಲಾಜು ಇಲ್ಲದೆ ಕ್ರಮಕೈಗೊಳ್ಳಬೇಕು. ಯಾರ ಶಿಫಾರಸು, ಒತ್ತಡಗಳಿಗೆ ಒಳಗಾಗದೇ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳಿ. ಜಿಲ್ಲೆಯು ಆದಷ್ಟು ಬೇಗನೆ ಡ್ರಗ್ಸ್, ಗಾಂಜಾ ಹಾಗೂ ಅಪರಾಧ ಮುಕ್ತ ಜಿಲ್ಲೆಯಾಗಿ ರೂಪಗೊಳ್ಳಬೇಕು. ಇದಕ್ಕೆ ನಾನು ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ, ಜನಪ್ರತಿನಿಧಿಗಳ ಸಹಕಾರವಿದೆ.

ಸಂತೋಷ ಲಾಡ್‌, ಉಸ್ತುವಾರಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆ ಮುಚ್ಚುವ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ
ಸಾಂಸ್ಕೃತಿಕ ಮೌಲ್ಯದೊಂದಿಗೆ ಇನ್ಫೋಸಿಸ್‌ ಕಾರ್ಯನಿರ್ವಹಣೆ