ಉದ್ಯಮಿಗಳ ಪ್ರವೇಶದಿಂದ ಮಾಧ್ಯಮಗಳಲ್ಲಿ ಸ್ವಾತಂತ್ರ್ಯ ಮಾಯ

KannadaprabhaNewsNetwork |  
Published : Jul 28, 2025, 12:31 AM IST
27ಎಚ್‌ಯುಬಿ22ಕನ್ನಡಪ್ರಭ ವರದಿಗಾರ ಅಜೀಜ್ಅಹ್ಮದ ಬಳಗಾನೂರ ಸೇರಿ ಹಲವರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಾರ್ಷಿಕ ಪ್ರಶಸ್ತಿ ವಿತರಿಸಲಾಯಿತು. | Kannada Prabha

ಸಾರಾಂಶ

ಮಾಧ್ಯಮಕ್ಕೆ ಯಾವತ್ತೂ ಸವಾಲು ಇರಬಾರದು. ಆದರೆ, ಮಾಧ್ಯಮದ ಕಾರ್ಯಕರ್ತರಿಗೆ ಸವಾಲುಗಳು ಕಾಡಬೇಕು. ಜನ ಓದುವ ಸುಖ ಬಯಸಬೇಕೇ ಹೊರತು ಮನರಂಜನೆಗಾಗಿ ಮಾಧ್ಯಮ ಬಳಸಬಾರದು. ಮಾಧ್ಯಮ ಉದ್ಯಮವಾದ ನಂತರ ಬೆಳಕು ಕತ್ತಲಾಗುತ್ತಿದ್ದು, ಕತ್ತಲಿಗೆ ಬಣ್ಣ ಬಳಿಯುವ ಕಾರ್ಯವಾಗುತ್ತಿದೆ.

ಹುಬ್ಬಳ್ಳಿ: ಮಾಧ್ಯಮದ ಸ್ವಾತಂತ್ರ‍್ಯ ಎಲ್ಲಿ ಹೋಗಿದೆ, ಎಲ್ಲಿ ಮಾಯವಾಗಿದೆ ಎಂಬುದನ್ನು ಪತ್ರಕರ್ತರು ಪ್ರಶ್ನೆ ಮಾಡಿಕೊಳ್ಳಬೇಕು. ಉದ್ಯಮಿಗಳ ಕೈಗೆ ಮಾಧ್ಯಮ ಸಿಕ್ಕಾಗಿನಿಂದ ಮಾಧ್ಯಮ ಸ್ವಾತಂತ್ರ‍್ಯ ಯಾತ್ರೆಗೆ ಹೊರಟಿದೆ ಎಂದು ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್‌ ಹೇಳಿದರು.

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇಲ್ಲಿನ ಮುನ್ಸಿಪಲ್ ಎಂಪ್ಲಾಯಿಸ್‌ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮಕ್ಕೆ ಯಾವತ್ತೂ ಸವಾಲು ಇರಬಾರದು. ಆದರೆ, ಮಾಧ್ಯಮದ ಕಾರ್ಯಕರ್ತರಿಗೆ ಸವಾಲುಗಳು ಕಾಡಬೇಕು. ಜನ ಓದುವ ಸುಖ ಬಯಸಬೇಕೇ ಹೊರತು ಮನರಂಜನೆಗಾಗಿ ಮಾಧ್ಯಮ ಬಳಸಬಾರದು. ಮಾಧ್ಯಮ ಉದ್ಯಮವಾದ ನಂತರ ಬೆಳಕು ಕತ್ತಲಾಗುತ್ತಿದ್ದು, ಕತ್ತಲಿಗೆ ಬಣ್ಣ ಬಳಿಯುವ ಕಾರ್ಯವಾಗುತ್ತಿದೆ. ಜವಾಬ್ದಾರಿ ಇಲ್ಲದ ಸಮಾಜದಲ್ಲಿ ಬೇಜವಾಬ್ದಾರಿ ರಾರಾಜಿಸುತ್ತದೆ ಎಂದು ವಿಷಾಧಿಸಿದರು.

ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಮಾತನಾಡಿ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳ ಆರ್ಭಟದ ಮಧ್ಯೆಯೂ ಮುದ್ರಣ ಮಾಧ್ಯಮ ತನ್ನ ಮಹತ್ವ ಉ‍ಳಿಸಿಕೊಂಡಿದೆ. ಹಿಂದಿನ ಪತ್ರಿಕೋದ್ಯಮಕ್ಕೂ ಪ್ರಸ್ತುತ ಇರುವ ಪತ್ರಿಕೋದ್ಯಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ಪತ್ರಕರ್ತರು ಅಯೋಗ್ಯರನ್ನು ಬೆಳೆಸುತ್ತಿರುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ದಿನಗಳಲ್ಲಿ ಪತ್ರಿಕೆಗಳ ಓದು ಕ್ಷೀಣಿಸುತ್ತಿದ್ದು, ಅದಕ್ಕೆ ಕಾರಣ ಕಂಡುಕೊಳ್ಳುವ ಪ್ರಯತ್ನವಾಗಬೇಕು. ಸಾಮಾಜಿಕ ಮಾಧ್ಯಮಗಳ ಕೆಲ ನಕಲಿ ಪತ್ರಕರ್ತರಿಂದ ಮಾಧ್ಯಮದ ಮೇಲೆ ವಿಶ್ವಾಸಾರ್ಹತೆ ಕ್ಷೀಣಿಸುತ್ತಿದ್ದು, ಮುಖ್ಯ ವಾಹಿನಿಗಳ ಪತ್ರಕರ್ತರು ಈ ಕುರಿತು ಗಮನಹರಿಸಬೇಕು ಎಂದರು.

ಬಡ ಜನರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮೊದಲು ಇದ್ದಂತೆ ಆರ್ಥಿಕವಾಗಿ ದುರ್ಬಲರಿಗೆ (ಇಡಬ್ಲ್ಯುಎಸ್‌) ಶೇ. 5ರ ಯೋಜನೆ ಬಂದ್ ಆಗಿದ್ದು, ಸರ್ಕಾರಕ್ಕೆ ಮರು ಚಾಲನೆ ನೀಡುವಂತೆ ಪತ್ರ ಬರೆದು ನಿವೇಶನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಹಿರಿಯ ಪತ್ರಕರ್ತ ಸನತ್‌ಕುಮಾರ ಬೆಳಗಲಿ ಮಾತನಾಡಿ, ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ನನ್ನನ್ನು ಪ್ರಶಸ್ತಿಗೆ ಗುರುತಿಸಲಾಗಿದೆ ಎಂದರು. ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಶಸ್ತಿ ಪ್ರದಾನ: ಇದೇ ವೇಳೆ ಸನತ್‌ಕುಮಾರ ಬೆಳಗಲಿ ಅವರಿಗೆ ''''ಜೀವಮಾನ ಸಾಧನೆ'''' ಪ್ರಶಸ್ತಿ, ಸುನಿತಾ ರವೀಂದ್ರ ಕುಲಕರ್ಣಿ ಹಾಗೂ ನಿರ್ಮಲಾ ಕುದರಿ ಅವರಿಗೆ ''''ಅವ್ವ ಪತ್ರಕರ್ತೆ'''' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕನ್ನಡಪ್ರಭ ಹಿರಿಯ ಉಪಸಂಪಾದಕ ಅಜೀಜಅಹ್ಮದ ಬಳಗಾನೂರಗೆ ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ''''ಅತ್ಯುತ್ತಮ ನಗರ ವರದಿಗಾರಿಕೆ'''' ಪ್ರಶಸ್ತಿ ಸೇರಿದಂತೆ ಹಲವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಣಿ ಸದಸ್ಯ ಗಣಪತಿ ಗಂಗೊಳ್ಳಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಜೆ. ಅಬ್ಬಾಸ್ ಮುಲ್ಲಾ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ