ಪೊಲೀಸ್‌ ತಂಡಕ್ಕೆ ಸೌಹಾರ್ದ ಕ್ರಿಕೆಟ್ ಕಪ್

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ದೊಡ್ಡಬಳ್ಳಾಪುರ: ಮಾಧ್ಯಮ ಬಳಗ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಆರ್‌ಡಿಪಿಆರ್‌ ಸಂಯುಕ್ತಾಶ್ರಯದಲ್ಲಿ ನಡೆದ ಸೌಹಾರ್ದ ಕ್ರಿಕೆಟ್ ಕಪ್ ಟೂರ್ನಿಯಲ್ಲಿ ಪೊಲೀಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ದೊಡ್ಡಬಳ್ಳಾಪುರ: ಮಾಧ್ಯಮ ಬಳಗ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಆರ್‌ಡಿಪಿಆರ್‌ ಸಂಯುಕ್ತಾಶ್ರಯದಲ್ಲಿ ನಡೆದ ಸೌಹಾರ್ದ ಕ್ರಿಕೆಟ್ ಕಪ್ ಟೂರ್ನಿಯಲ್ಲಿ ಪೊಲೀಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು. ಕಂದಾಯ ಇಲಾಖೆ ತಂಡ‌ ಹಾಗೂ ಮಾಧ್ಯಮ ಬಳಗ ಕ್ರಮವಾಗಿ ಮೂರು‌ ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.

ಮಾಧ್ಯಮ ಬಳಗ ಹಾಗೂ ಪೊಲೀಸ್ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮಾಧ್ಯಮ ತಂಡ ಪರಾಭವಗೊಂಡಿತು. ದ್ವಿತೀಯ ಪಂದ್ಯ ಕಂದಾಯ ಇಲಾಖೆ ಹಾಗೂ ಆರ್ ಡಿಪಿಆರ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್ ಡಿಪಿಆರ್ ವಿಜಯ ಸಾಧಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪೈಫೋಟಿಯಲ್ಲಿ ಕಂದಾಯ ಇಲಾಖೆಯ ಆಟಗಾರರು ಮಾಧ್ಯಮ ಬಳಗಕ್ಕೆ ಸೋಲುಣಿಸಿದರು. ರೋಚಕ‌ ಫೈನಲ್ ಪಂದ್ಯದಲ್ಲಿ ಪೊಲೀಸ್ ಇಲಾಖೆ ಕಡೆಯ ಓವರ್ ನಲ್ಲಿ ಆರ್ ಡಿಪಿಆರ್ ಎದುರು ವಿಜಯ ಸಾಧಿಸಿ 2023-24ನೇ ಸಾಲಿನ ಸೌಹಾರ್ದ ಕ್ರಿಕೆಟ್ ಕಪ್ ಪಡೆಯಿತು.

ಟೂರ್ನಿಯ ಆರಂಭಕ್ಕೂ ಮುನ್ನ ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಡಿವೈಎಸ್ಪಿ ರವಿ ಪಿ., ತಹಸೀಲ್ದಾರ್ ವಿಭಾ ವಿದ್ಯಾ ರಾಠೋಡ್, ತಾಪಂ ಇಒ ಮುನಿರಾಜು, ವಕೀಲ ಪ್ರತಾಪ್ ಸೇರಿದಂತೆ ಹಲವು ಗಣ್ಯರು ಪಂದ್ಯಾವಳಿಗೆ ಚಾಲನೆ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ‌ ಬಾಲದಂಡಿ ಅವರು ಕ್ರೀಡಾಂಗಣಕ್ಕೆ ಆಗಮಿಸಿ ಎಲ್ಲ ತಂಡದ ಅಟಗಾರರಿಗೆ ಶುಭ ಹಾರೈಸಿದರು.

ವಿಜೇತ ತಂಡಗಳಿಗೆ ಡಿವೈಎಸ್ಪಿ ರವಿ ಪಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಸೌಹಾರ್ದಯುತವಾಗಿ ಕ್ರಿಕೆಟ್ ಸೇರಿದಂತೆ ಇನ್ನಿತರೆ ಚಟುವಟಿಕೆಗಳು ಹೆಚ್ಚು ಅಗತ್ಯವಾಗಿವೆ. ಆಟಗಳಲ್ಲಿ ಸೋಲು-ಗೆಲುವು ಸಹಜ. ದಿನನಿತ್ಯದ ಕರ್ತವ್ಯದಲ್ಲಿ ರಿಲ್ಯಾಕ್ಸ್‌ ಇರುವುದಿಲ್ಲ. ಈ ರೀತಯ ಕ್ರೀಡೆಗಳನ್ನು ಆಯೋಜನೆ ಮಾಡುವುದರಿಂದ ಮನಸ್ಸಿಗೆ ಕೊಂಚ ನೆಮ್ಮದಿ ಸಿಗಲಿದೆ. ಜೊತೆಗೆ ಎಲ್ಲರೂ ಒಂದೆಡೆ ಸೇರಿದಾಗ ಪರಸ್ಪರ ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಕ್ರೀಡೆಗಳನ್ನು ಆಯೋಜನೆ ಮಾಡಿದರೆ ಇಲಾಖೆಯ ಸಹಕಾರ ಸದಾ ಇರಲಿದೆ. ಕ್ರೀಡೆಗಳಿಗೆ ಸಾರ್ವಜನಿಕರನ್ನೂ ಒಳಗೊಂಡಂತೆ ಆಯೋಜನೆ ಮಾಡಿದರೆ ಆಡಳಿತ ವರ್ಗ- ಸಾರ್ವಜನಿಕರ ಮಧ್ಯೆ ಸಂಬಂಧ ವೃದ್ಧಿಸಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಪಿಐ ಮುನಿಕೃಷ್ಣ ನಗರ ಠಾಣೆ ಪಿಐ ಅಮರೇಶ್ ಗೌಡ, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಪಿಐ ಎಂ.ಆ‌ರ್.ಹರೀಶ್‌, ಹೊಸಹಳ್ಳಿ ಠಾಣೆ ಪಿಐ ರಾವ್ ಗಣೇಶ್ ಇತರರಿದ್ದರು.18ಕೆಡಿಬಿಪಿ6- ದೊಡ್ಡಬಳ್ಳಾಪುರದಲ್ಲಿ ನಡೆದ ಪೊಲೀಸ್‌, ಕಂದಾಯ ಇಲಾಖೆ, ಆರ್‌ಡಿಪಿಆರ್ ಮತ್ತು ಮಾಧ್ಯಮ ಬಳಗದ ಸೌಹಾರ್ದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪೊಲೀಸ್‌ ತಂಡ ಜಯಗಳಿಸಿತು.

Share this article