ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಐದು ದಶಕಗಳಿಂದ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಫ್ರೆಂಡ್ಸ್ ಸೆಂಟರ್ ಸಂಸ್ಥೆಯು ನಿರಂತರವಾಗಿ ವೈವಿಧ್ಯ ಸೇವಾ ಕಾರ್ಯ ಹಮ್ಮಿಕೊಂಡು ಬರುತ್ತಿದೆ ಎಂದು ಫ್ರೆಂಡ್ಸ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಉಮಾಶಂಕರ್ ಹೇಳಿದರು.ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಪ್ರವರ್ತಕರ ಸನ್ಮಾನ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ಜನರು ಸೇರಿ ಸ್ಥಾಪಿಸಿದ ಸಂಸ್ಥೆ ಇಂದು ರಾಜ್ಯದಲ್ಲಿ ಮಾದರಿಯಾಗಿ ಬೆಳೆದಿದೆ ಎಂದರು.
ಐದು ದಶಕಗಳಲ್ಲಿ ರಾಜ್ಯಮಟ್ಟದ ಚರ್ಚಾ ಸ್ಪರ್ಧೆ, ನೇತ್ರದಾನ, ರಕ್ತದಾನ ಶಿಬಿರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಮಾಡುತ್ತಿದೆ. ಇಂತಹ ಸಂಸ್ಥೆಯಲ್ಲಿ ನಗರದ ಗಣ್ಯರು ಸೇವೆ ಸಲ್ಲಿಸಿರುವುದು ವಿಶೇಷ ಎಂದು ಅಭಿಪ್ರಾಯಪಟ್ಟರು.ಫ್ರೆಂಡ್ಸ್ ಸೆಂಟರ್ ತುಂಬಾ ವಿಶೇಷವಾದ ಸಂಸ್ಥೆಯಾಗಿದ್ದು, ಬರುವ ದಿನಗಳಲ್ಲಿ ಇನ್ನೂ ಅನೇಕ ಸೇವಾ ಕಾರ್ಯ ನಡೆಸಲಾಗುವುದು. ಇಂದಿಗೂ ಸಂಸ್ಥೆಯು ಉತ್ತಮ ಕಾರ್ಯ ಚಟುವಟಿಕೆಗಳಿಂದ ಕೂಡಿರುವುದು ಶ್ಲಾಘನೀಯ ಎಂದು ತಿಳಿಸಿದರು. ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಲೋಕೇಶ್ ಮಾತನಾಡಿ, ಎಲ್ಲ ಸಂಸ್ಥೆಗಳಿಗಿಂತ ಫ್ರೆಂಡ್ಸ್ ಸೆಂಟರ್ ವಿಶೇಷವಾದ ಸಂಸ್ಥೆಯಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿದ್ದು, ಸೇವೆ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.
ಸ್ಥಾಪಕ ಪದಾಧಿಕಾರಿಗಳಾದ ಕೆ. ನರಸಿಂಹಮೂರ್ತಿ, ಬಿ.ಭಾರ್ಗವರಾವ್, ಸಿ.ಕೆ. ಶ್ರೀನಿವಾಸ್, ಧೃವಕುಮಾರ್ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸನ್ಮಾನಿತರು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹಂಚಿಕೊಂಡರು.ಮಾಜಿ ಅಧ್ಯಕ್ಷರಾದ ಎಸ್. ದತ್ತಾತ್ರಿ, ಜಿ. ವಿಜಯಕುಮಾರ್, ವಿ. ನಾಗರಾಜ, ಜಿ. ಸತ್ಯನಾರಾಯಣ, ಟಿ. ಎನ್. ಲಕ್ಷ್ಮೀಕಾಂತ್, ಡಾ. ದೀಪಕ್, ಎಸ್. ವೆಂಕಟರಾಮ್, ವಿ. ಆರ್. ಅಡಿಗ, ಕಾರ್ಯದರ್ಶಿ ಮಲ್ಲಿಕಾರ್ಜುನ ಕಾನೂರು, ಮೋಹನಕುಮಾರ್ ಹಾಗೂ ಸದಸ್ಯರು ಭಾಗವಹಿಸಿದ್ದರು.