ಮದ್ಯದ ಕತ್ತಲೆಯಿಂದ ಬದುಕಿನ ಬೆಳಕಿನೆಡೆಗೆ

KannadaprabhaNewsNetwork |  
Published : Jul 20, 2026, 01:15 AM IST
ಪೋಟೊ17ಕೆಎಸಟಿ1: ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ನಡೆದ 2083ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಭಿನವ ಕರಿಬಸವ ಶಿವಾಚಾರ್ಯರು ಮಾತನಾಡಿದರು.17ಕೆಎಸಟಿ1.1: ನವಜೀವನಕ್ಕೆ ಕಾಲಿಟ್ಟಿರುವ 76ಜನ ಮದ್ಯವರ್ಜನದಲ್ಲಿನ ಶಿಬಿರಾರ್ಥಿಗಳು ತಮ್ಮ ಕುಟುಂಬಸ್ತರೊಂದಿಗೆ. | Kannada Prabha

ಸಾರಾಂಶ

ಇಂದಿನ ಯುವಕರೇ ದೇಶದ ಭವಿಷ್ಯ. ಮದ್ಯ ಹಾಗೂ ಇತರ ವ್ಯಸನಗಳಿಂದ ದೂರ ಉಳಿದಾಗ ಮಾತ್ರ ಆರೋಗ್ಯವಂತ, ಸದೃಢ ಮತ್ತು ಸಂಸ್ಕಾರಯುತ ಭಾರತ ನಿರ್ಮಾಣ ಸಾಧ್ಯ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಒಂದೆಡೆ ಮದ್ಯದ ದುಶ್ಚಟದಿಂದ ಬದುಕು ಕಳೆದುಕೊಂಡ ಕುಟುಂಬ, ಮತ್ತೊಂದೆಡೆ ಅದೇ ದುಶ್ಚಟದಿಂದ ಹೊರ ಬಂದು ಹೊಸ ಜೀವನ ಆರಂಭಿಸುವ ಸಂಕಲ್ಪ. ಈ ಎರಡರ ನಡುವೆ ಆಶಾಕಿರಣವಾಗಿ ನಿಂತಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರ.

ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಅಟಲ್‌ಜಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ನಡೆದ 2083ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ವ್ಯಸನಮುಕ್ತ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಮತ್ತಷ್ಟು ಬಲ ತುಂಬಿತು.

ಶಿಬಿರದಲ್ಲಿ ಭಾಗವಹಿಸಿದ್ದ 76 ವ್ಯಸನಿಗಳು ಮದ್ಯ ತ್ಯಜಿಸಿ ಹೊಸ ಬದುಕು ಆರಂಭಿಸುವ ಪ್ರತಿಜ್ಞೆ ಕೈಗೊಂಡರು. ಇದು ಕೇವಲ ಒಂದು ಶಿಬಿರದ ಯಶಸ್ಸಲ್ಲ, 76 ಕುಟುಂಬಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದ ಸಾಮಾಜಿಕ ಪರಿವರ್ತನೆಯ ಕ್ಷಣವಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ನಿಡಶೇಸಿಯ ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಇಂದಿನ ಯುವಕರೇ ದೇಶದ ಭವಿಷ್ಯ. ಮದ್ಯ ಹಾಗೂ ಇತರ ವ್ಯಸನಗಳಿಂದ ದೂರ ಉಳಿದಾಗ ಮಾತ್ರ ಆರೋಗ್ಯವಂತ, ಸದೃಢ ಮತ್ತು ಸಂಸ್ಕಾರಯುತ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಮದ್ಯದ ದುಷ್ಪರಿಣಾಮ ವ್ಯಕ್ತಿಯ ಆರೋಗ್ಯಕ್ಕೆ ಮಾತ್ರ ಸೀಮಿತವಾಗದೆ ಕುಟುಂಬದ ನೆಮ್ಮದಿ, ಮಕ್ಕಳ ಭವಿಷ್ಯ ಹಾಗೂ ಸಮಾಜದ ಶಾಂತಿಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬ ಯುವಕ ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ತನ್ನ ಹೊಣೆಗಾರಿಕೆ ಅರಿತು ಸ್ವಯಂಪ್ರೇರಿತನಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಡಾ. ಡಿ. ವೀರೇಂದ್ರ ಹೆಗ್ಗಡೆ ಪರಿಕಲ್ಪನೆಯಲ್ಲಿ ಆರಂಭವಾದ ಮದ್ಯವರ್ಜನ ಶಿಬಿರ ಸಾಮಾಜಿಕ ಚಳವಳಿಯಾಗಿ ಬೆಳೆದಿವೆ. ವ್ಯಸನದಿಂದ ಕುಸಿದ ಬದುಕುಗಳಿಗೆ ಹೊಸ ದಿಕ್ಕು ತೋರಿಸುವ ಈ ಶಿಬಿರಗಳು ಸಾವಿರಾರು ಕುಟುಂಬಗಳ ಬದುಕಿನಲ್ಲಿ ಆಶಾಕಿರಣ ಮೂಡಿಸಿವೆ.

ಹಿರೇಬನ್ನಿಗೋಳದಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿದ 76 ಮಂದಿ ಮದ್ಯ ತ್ಯಜಿಸಿ ಹೊಸ ಜೀವನ ರೂಪಿಸಿಕೊಳ್ಳುವ ಸಂಕಲ್ಪ ಕೈಗೊಂಡಿರುವುದು ಸಾಧನೆಯಾಗಿದೆ ಎಂದು ಶ್ಲಾಘಿಸಿದರು.

ಸಮಾಜಸೇವಕ ರವಿಕುಮಾರ ಹಿರೇಮಠ ಮಾತನಾಡಿ, ಮದ್ಯಪಾನ ಆರೋಗ್ಯ, ಆರ್ಥಿಕ ಸ್ಥಿರತೆ, ಕುಟುಂಬದ ನೆಮ್ಮದಿ ಕಸಿದುಕೊಳ್ಳುವ ದೊಡ್ಡ ಪಿಡುಗಾಗಿದೆ. ಮದ್ಯವ್ಯಸನಿಗಳಲ್ಲಿ ಮನಪರಿವರ್ತನೆ ತಂದು ಸಮಾಜದ ಮುಖ್ಯವಾಹಿನಿಗೆ ಕರೆ ತರುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.

ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಮನುಷ್ಯನಿಂದ ತಪ್ಪು ಆಗುವುದು ಸಹಜ. ಆದರೆ, ಅದನ್ನರಿತು ತಿದ್ದಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವುದೇ ನಿಜವಾದ ಗೆಲುವು. ಶಿಬಿರಾರ್ಥಿಗಳು ಮದ್ಯವನ್ನು ಸಂಪೂರ್ಣ ತ್ಯಜಿಸಿ ಕುಟುಂಬ, ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ರೆಹಮಾನಸಾಬ್ ದೊಡ್ಡಮನಿ, ಬಸವಂತಪ್ಪ ಗದ್ದಿ, ಬಸವರಾಜ ನಾಲತವಾಡ, ಮಂಜುನಾಥ, ನಿರಂಜನ, ವೀರೇಶ ಬಂಗಾರಶೆಟ್ಟರ್, ಮಹಾಂತೇಶ್, ವಿ.ವಿ. ಹಿರೇಮಠ, ರಮೇಶ್ ಕುಲಕರ್ಣಿ, ಪತ್ರಕರ್ತರ ಸಂಘದ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ, ಶರಣಪ್ಪ ಲೈನದ್, ಮೈಲಾರಪ್ಪ ಮಂತ್ರಿ, ಶರಣಪ್ಪ ತೊಂಡಿಹಾಳ, ಶರಣಪ್ಪ ಭತ್ತದ, ಪ್ರಕಾಶ ಗೋಗೆರಿ, ಶರಣಪ್ಪ ದುಗಲದ್, ಮಂಜುನಾಥ ನರೆಗಲ್, ರಾಮಣ್ಣ ಬಡಿಗೇರ, ಹಳ್ಳಪ್ಪ ವಾಲ್ಮೀಕಿ, ಬಾಳಪ್ಪ ಅಗಸಿಮುಂದಿನ, ಅಯ್ಯಪ್ಪ ಕಲ್ಗೂಡಿ, ಶರಣಪ್ಪ ಹಾವರಗಿ, ಶರಣಪ್ಪ ಮಲಕಪ್ಪ, ಪರಿಮಳಾ ಶೆಟ್ಟಿ, ರಿಹಾನ್, ಅರುಣ್, ಮಹೇಶ್, ಶರಣಪ್ಪ, ನವೀನ್, ಗಣೇಶ್, ಪ್ರಕಾಶ್, ರಾಘವೇಂದ್ರ, ಚಿದಾನಂದ, ಶಿವಾನಂದ, ಮಂಜುಳಾ, ದೀಪಿಕಾ, ಸಂಗೀತಾ, ಅಕ್ಕಮ್ಮ, ನಂದಾ, ರೂಪಾ, ಚಳಗೇರಾ ವಲಯದ ಸೇವಾ ಪ್ರತಿನಿಧಿ, ಒಕ್ಕೂಟದ ಪದಾಧಿಕಾರಿ, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಮದ್ಯ ಬಿಡುವುದು ಒಬ್ಬ ವ್ಯಕ್ತಿಯ ಗೆಲುವಲ್ಲ, ಅದು ಒಂದು ಕುಟುಂಬದ ಪುನರ್ಜನ್ಮ. ಸಮಾಜದ ಆರೋಗ್ಯಕರ ಭವಿಷ್ಯಕ್ಕೆ ಇಂತಹ ಮದ್ಯವರ್ಜನ ಶಿಬಿರಗಳು ಆಶಾಕಿರಣವಾಗಿವೆ ಎಂದು ನಿಡಶೇಸಿ ಅಭಿನವ ಕರಿಬಸವ ಶಿವಾಚಾರ್ಯರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ
ಅನುಮತಿ ಬಳಿಕ ಶರಾವತಿ ಪಂಪ್ಡ್‌ ಸ್ಟೋರೇಜ್‌ ಶುರು : ಡಿಕೆ