ಮಕ್ಕಳ ಭವಿಷ್ಯಕ್ಕೆ ಫಲ ಪುಷ್ಪ ಪ್ರದರ್ಶನಗಳು ಪ್ರೇರಣೆ

KannadaprabhaNewsNetwork | Published : Jan 24, 2025 12:46 AM

ಸಾರಾಂಶ

ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಅಗತ್ಯವಾದ ಜ್ಞಾನ ಮೂಡಿಸುವಂತಹ ಫಲ ಪುಷ್ಪ ಪ್ರದರ್ಶನವನ್ನು ಈ ಬಾರಿ ವಿಶೇಷವಾಗಿ ಏರ್ಪಡಿಸಲಾಗಿದೆ. ಆಕರ್ಷಕ ವಿನ್ಯಾಸದ ಫಲ ಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಣ್ತುಂಬಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಅಗತ್ಯವಾದ ಜ್ಞಾನ ಮೂಡಿಸುವಂತಹ ಫಲ ಪುಷ್ಪ ಪ್ರದರ್ಶನವನ್ನು ಈ ಬಾರಿ ವಿಶೇಷವಾಗಿ ಏರ್ಪಡಿಸಲಾಗಿದೆ. ಆಕರ್ಷಕ ವಿನ್ಯಾಸದ ಫಲ ಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಣ್ತುಂಬಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು. ತೋಟಗಾರಿಕೆ ಇಲಾಖೆ ಸಭಾಂಗಣದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಫಲ-ಪುಷ್ಪ ಪ್ರದರ್ಶನವನ್ನು ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಜನವರಿ 26 ರಿಂದ 28 ರವರೆಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಫಲಪುಷ್ಪ ಪ್ರದರ್ಶನದಲ್ಲಿ ಮಂಧರಗಿರಿ ಮರು ಸೃಷ್ಠಿ, ಸಿರಿಧಾನ್ಯ ಕಲಾಕೃತಿ, ತರಕಾರಿ ಕೆತ್ತನೆಯಲ್ಲಿ ಇಸ್ರೋಗೆ ನಮನ, ಜಾನುರ್ ಕಲೆಯಲ್ಲಿ ಹೊಮ್ಮುವ ರೈತ ಜೀವನ, ಮರಳು ಕಲಾಕೃತಿ, ಆಕರ್ಷಕ ವಿನ್ಯಾಸದ ಪುಷ್ಪ ಪ್ರದರ್ಶನ ವಿಶೇಷ ಆಕರ್ಷಣೆಯಾಗಿವೆ ಎಂದು ತಿಳಿಸಿದರು. ಕೃಷಿ ಇಲಾಖೆಯಿಂದ ಪಾರಂಪರಿಕ ಹಾಗೂ ಆಧುನಿಕ ಕೃಷಿ ಸಲಕರಣೆಗಳು ಮತ್ತು ಯಂತ್ರೋಪಕರಣಗಳ ಪ್ರದರ್ಶನ, ಮೀನುಗಾರಿಕೆ ಇಲಾಖೆಯಿಂದ ಆಕರ್ಷಕ ಅಕ್ವೇರಿಯಂ ಪ್ರದರ್ಶನ, ಪಶು ಸಂಗೋಪನೆ ಇಲಾಖೆಯಿಂದ ದೇಶಿ ತಳಿಗಳ ಪರಿಚಯ, ರೇಷ್ಮೆ ಇಲಾಖೆಯಿಂದ ರೇಷ್ಮೆ ಗೂಡಿನ ಕರಕುಶಲ ವಸ್ತುಗಳ ಪ್ರದರ್ಶನ, ಅರಣ್ಯ ಇಲಾಖೆಯಿಂದ ವನ್ಯ ಜಗತ್ತು ಪರಿಚಯಿಸಲಾಗುವುದು.ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಅಭಿವೃದ್ಧಿ ಮಾದರಿ ಪ್ರದರ್ಶನ, ಸಾಮಾಜಿಕ ಅಭಿವೃದ್ಧಿಯಿಂದ ವಸತಿ ಶಿಕ್ಷಣ ಸಮುಚ್ಛಯ, ಗಂಗಾ ಕಲ್ಯಾಣ ಯೋಜನೆಗಳ ಅನಾವರಣ, ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನಮ್ಮೂರ ರೇಷ್ಮೆ, ಗ್ರಂಥಾಲಯದಿಂದ ಜ್ಞಾನ ಭಂಡಾರ, ಪ್ರವಾಸೋದ್ಯಮ ಇಲಾಖೆಯಿಮದ ಪ್ರವಾಸಿ ತಾಣಗಳ ಛಾಯಚಿತ್ರ ಪ್ರದರ್ಶನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಸೇವೆಗಳ ಪರಿಚಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಮ್ಮೂರ ಅಂಗನವಾಡಿ ಮಾದರಿ, ಶಿಕ್ಷಣ ಇಲಾಖೆಯಿಂದ ವಿಜ್ಞಾನ ಲೋಕ, ಬೆಸ್ಕಾಂ ವತಿಯಿಂದ ಗೃಹ ಜ್ಯೋತಿ ಮಾದರಿ ಪ್ರದರ್ಶನ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಿಂದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಫಲಪುಷ್ಪ ಪ್ರದರ್ಶನ ಅಂಗವಾಗಿ ಉದ್ಯಾನವನ ಮಾಡಲ್ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿಶೇಷ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದ್ದು, ಫಲಪುಷ್ಪ ಪ್ರದರ್ಶನ ನೋಡಲು ಬರುವ ಎಲ್ಲರಿಗೂ ಉಚಿತ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯ ನಂತರ ಅಧಿಕಾರಿಗಳೊಂದಿಗೆ ಫಲಪುಷ್ಪ ಪ್ರದರ್ಶನದ ಪೂರ್ವಸಿದ್ಧತೆಯನ್ನು ಪರಿಶೀಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಬಿ.ಸಿ. ಶಾರದಮ್ಮ, ತೋಟಗಾರಿಕೆ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Share this article