ಕನ್ನಡಪ್ರಭ ವಾರ್ತೆ ಭದ್ರಾವತಿಮುಂಬರುವ ವಿಶ್ವ ಜಲ ದಿನಾಚರಣೆ ಅಂಗವಾಗಿ ಕೆರೆ ಕಟ್ಟೆಗಳ ಉತ್ಸವ ನಡೆಯಲಿರುವುದರಿಂದ ಈ ಕಾರ್ಯಕ್ರಮಕ್ಕೆ ಜಲಸಂಪನ್ಮೂಲ ಸಚಿವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ರವರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ನೂತನ ತಹಸೀಲ್ದಾರ್ ಪರಶುರಾಮ್ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಧಾನಸಭಾ ಕ್ಷೇತ್ರದ ದೊಣಭಘಟ್ಟ ಸರ್ವೆ ನಂ.36ರ ದೊಡ್ಡಕೆರೆ, ತಡಸ ಸರ್ವೆ ನಂ.72ರ ಕೆರೆ, ಹೊಳೆನೇರಳಕೆರೆ ಸರ್ವೆ ನಂ: 50ರ ದೊಡ್ಡಕೆರೆ ಹಾಗು ನಂಜಾಪುರ ಸರ್ವೆ,ನಂ.1ರ ಸರ್ಕಾರಿ ಕೆರೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಿದ್ದಾಪುರ ಸರ್ವೆ ನಂ.63 ಹಾಗೂ ಇದಕ್ಕೆ ಲಗತ್ತಾಗಿರುವ ಸರ್ವೆ ನಂಬರಿನ ಕೆರೆಗಳು ಮತ್ತು ಸರ್ವೆ ನಂ.110ರ ಸರ್ಕಾರಿ ಕೆರೆ, ಜನ್ನಾಪುರ ಸರ್ವೆ ನಂ: 90ರ ಕೆರೆ ಮತ್ತು ಸೀಗೆಬಾಗಿ ಸರ್ವೆ ನಂ.33ರ ಕೆರೆ ಸೇರಿದಂತೆ ಇನ್ನಿತರ ಕೆರೆಗಳ ಬೌಂಡರಿ ಕಾರ್ಯ ತುರ್ತಾಗಿ ನಿಗದಿಪಡಿಸಿ ಒತ್ತುವರಿ ತೆರವುಗೊಳಿಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ.
ಟ್ರಸ್ಟ್ ಚೇರ್ಮನ್ ಆರ್. ವೇಣುಗೋಪಾಲ್, ವೈಸ್ ಛೇರ್ಮನ್ ಎನ್.ಎಲ್ ರಮಾದೇವಿ, ಗೌರವಾಧ್ಯಕ್ಷ ವಿಶ್ವೇಶ್ವರರಾವ್ ಗಾಯಕ್ವಾಡ್, ಪ್ರಧಾನ ಕಾರ್ಯದರ್ಶಿ ಬಿ.ವಿ ಗಿರಿ, ಸಂಚಾಲಕ ಎಂ.ವಿ. ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಕೆ.ಎಸ್. ಶೈಲಜಾ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.