ಚಿಕ್ಕಮಗಳೂರು: ವಾರದ ಕೊನೆಯ ರಜೆ ದಿನಗಳಲ್ಲಿ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರು ಜಲಪಾತ ವೀಕ್ಷಣೆಗೆ ತೆರಳುವ ಮಾರ್ಗದ ರಸ್ತೆಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ.
ಕೆಲವು ಪ್ರವಾಸಿಗರು ನೀರು ಧುಮುಕುವ ಬಂಡೆಗಳ ಮೇಲೆ ನಿಂತು ಡ್ಯಾನ್ಸ್ ಮಾಡಿ ಹುಚ್ಚಾಟ ಮೆರೆಯುತ್ತಿದ್ದಾರೆ. ಇದೊಂದು ಅಪಾಯಕಾರಿ ಪ್ರದೇಶವೆಂದು ನಾಮಫಲಕ ಹಾಕಲಾಗಿದೆ. ಅಲ್ಲದೆ ಸ್ಥಳದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರೂ ಅವರ ಕಣ್ಣು ತಪ್ಪಿಸಿ ಅಪಾಯಕಾರಿ ಸ್ಥಳಗಳಲ್ಲಿ ವೀಕ್ ಎಂಡ್ ಮಸ್ತಿ ಮಾಡುತ್ತಿದ್ದಾರೆ.
ಮೂಡಿಗೆರೆಯ ಕಾಲ ಭೈರವೇಶ್ವರ ದೇವಾಲಯಕ್ಕೆ ಹೋಗುವ ರಸ್ತೆಯಲ್ಲೂ ಕೂಡ ಭಾನುವಾರ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿದ್ದರು. ರಸ್ತೆಯ ಬದಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿ, ರಸ್ತೆಯ ಮದ್ಯದಲ್ಲಿಯೇ ಕುಡಿದು ಕುಪ್ಪಳಿ ಸುತ್ತಿದ್ದರು. ತುಂತುರು ಮಳೆಯಿಂದ ದಟ್ಟವಾದ ಮಂಜು ಕವಿದ ವಾತಾವರಣ ಈ ಸ್ಥಳದಲ್ಲಿದ್ದು, ವಾಹನಗಳ ಸಂಚಾರಕ್ಕೂ ಕಷ್ಟವಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಕೂಡ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದಾರೆ.