ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಅಮೃತ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಅಂಚೆ ಇಲಾಖೆ, ಸಂವಹನ ಸಚಿವಾಲಯದ ಸಹಭಾಗಿತ್ವದಲ್ಲಿ ತುಳುನಾಡ ಅಭಯರಾಣಿ ಅಬ್ಬಕ್ಕಳ ಅಂಚೆಚೀಟಿ ಬಿಡುಗಡೆಯನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಯ ರಾಜಸಭಾಂಗಣದಲ್ಲಿ ಶುಕ್ರವಾರ ಅಪರಾಹ್ನ ೩.೧೫ಕ್ಕೆ ಕೇಂದ್ರ ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ನೆರವೇರಿಸಲಿದ್ದಾರೆ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹೇಮಾವತಿ ವೀ. ಹೆಗ್ಗಡೆ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಪುತ್ತೂರು ಎಸ್ಎಸ್ಪಿ ನವೀನ್ಚಂದ್ರ, ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ, ಅಂಚೆಚೀಟಿ ಬಿಡುಗಡೆ ಸಮಿತಿ ಪ್ರಮುಖರಾದ ಫಿಲಾಟೆಲಿಸ್ಟ್ ಮಹಾವೀರ್ ಕುಂಡೂರ್, ಮಾಜಿ ಸಚಿವ ಕೆ. ಅಭಯಚಂದ್ರ, ಚೌಟರ ಅರಮನೆಯ ಕುಲದೀಪ ಎಂ., ಮಹೇಂದ್ರ ಸಿಂಗಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಅಬ್ಬಕ್ಕ ಸಭಾಂಗಣ: ಎಕ್ಸಲೆಂಟ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ರೂಪುಗೊಳ್ಳಲಿರುವ ಸಭಾಂಗಣಕ್ಕೆ ರಾಣಿ ಅಬ್ಬಕ್ಕ ಹೆಸರು ಇಡಲಾಗುವುದು ಎಂದು ಯುವರಾಜ್ ಜೈನ್ ತಿಳಿಸಿದರು.ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮಾತನಾಡಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರಯತ್ನದ ಫಲವಾಗಿ, ೨೦೧೧ರಲ್ಲಿ ೨೪ ಮಂದಿ ಪರಿಣತ ಕಲಾವಿದರು ರಚಿಸಿದ ಅಬ್ಬಕ್ಕಳ ಚಿತ್ರಗಳಲ್ಲಿ ಕಾರ್ಕಳ ಮೂಲದ ವಾಸುದೇವ ಕಾಮತ್ (ಮುಂಬೈ) ವಿರಚಿತ ಚಿತ್ರ ಅಂತಿಮಗೊಳಿಸಲಾಗಿದ್ದು ಇದನ್ನೇ ಅಂಚೆ ಚೀಟಿಯಲ್ಲಿ ಬಳಸಲಾಗಿದೆ ಎಂದು ವಿವರಿಸಿದರು.
ಪುತ್ತೂರು ಅಂಚೆ ವಿಭಾಗದ ಡಿವೈಎಸ್ಪಿ ಉಷಾ ಕೆ. ಮಾತನಾಡಿ, ಒಟ್ಟು ನಿಗದಿತ ೩,೨೬,೦೦೦ ಅಂಚೆಚೀಟಿಗಳನ್ನು (ಒಮ್ಮೆ ಮಾತ್ರ) ಮುದ್ರಿಸಿದ್ದು ದೇಶಾದ್ಯಂತ ಡಿ.೧೬ರಿಂದ ಖರೀದಿಗೆ ಲಭ್ಯವಿದೆ ಎಂದು ತಿಳಿಸಿದರು.ಎಕ್ಸಲೆಂಟ್ ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್, ಶೈಕ್ಷಣಿಕ ನಿರ್ದೇಶಕ ಡಾ ಬಿ ಪಿ ಸಂಪತ್ ಕುಮಾರ್, ಪುತ್ತೂರು ಅಂಚೆ ವಿಭಾಗದ ಡಿವೈಎಸ್ಪಿ ಉಷಾ ಕೆ., ಎಎಸ್ಎಸ್ಪಿ ಚಂದ್ರ ನಾಯಕ್, ಮಾರುಕಟ್ಟೆ ವಿಭಾಗದ ಗುರುಪ್ರಸಾದ್ ಇದ್ದರು.