ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್. ಎನ್. ರವೀಂದ್ರ ಉದ್ಘಾಟಿಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಪಟ್ಟಣದ ಪತ್ರಿಕಾಭವನ ಸಭಾಂಗಣದಲ್ಲಿ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಎನ್. ರವೀಂದ್ರ ಅವರು, ಕೊರೊನಾ, ಅತೀವೃಷ್ಟಿ, ಅನಾವೃಷ್ಟಿ ಸಂದರ್ಭ ಪತ್ರಕರ್ತರು ಸಲ್ಲಿಸಿದ ಸೇವೆ ಶ್ಲಾಘನೀಯ. ಪತ್ರಕರ್ತರು ದೇಶ ರಕ್ಷಣೆಗೆ ನಿಂತಿರುವ ಸೈನಿಕರಿಗೆ ಸಮಾನ, ಇಬ್ಬರ ಕೆಲಸಗಳು ತುಂಬ ಕ್ಲಿಷ್ಟಕರವಾಗಿದ್ದು ಅವರಿಗೆ ಗೌರವ ಸಲ್ಲಿಸುವುದು ಸಮಾಜದ ಕೆಲಸವಾಗಬೇಕು ಎಂದು ಹೇಳಿದರು.
ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದು, ಮುಂದಿನ ವರ್ಷಗಳಲ್ಲಿ ಕೊಡಗಿನಲ್ಲಿ ಅದರಲ್ಲೂ ರಾಜಧಾನಿ ಮಡಿಕೇರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ರಸ್ತೆ ಸಂಚಾರದ ಕುರಿತು ಪರ್ಯಾಯ ವ್ಯವಸ್ಥೆ ಕಲ್ಪಿಸಲು ನೀಲನಕಾಶೆ ತಯಾರಿಸದಿದ್ದರೆ ಕಷ್ಟವಾಗುತ್ತದೆ. ಅದಕ್ಕೆ ದೂರದೃಷ್ಠಿಯಿಂದ ಚಿಂತನೆ ನಡೆಸಬೇಕು ಎಂದರು.
ಕ್ಷೇಮನಿಧಿಗೆ ರೂ.50೫೦ ಸಾವಿರ ದೇಣಿಗೆ ಘೋಷಣೆ
ನಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜ ಕಾರ್ಯಕ್ಕೆ ನೀಡಬೇಕು ಎಂದ ರವೀಂದ್ರ ಅವರು, ಪತ್ರಕರ್ತರ ಸಂಘದ ದತ್ತಿನಿಧಿ ಸ್ಥಾಪನೆಗಾಗಿ 50 ಸಾವಿರ ರು. ದೇಣಿಗೆ ನೀಡಲಾಗುವುದು ಎಂದು ಘೋಷಿಸಿದರು.
ಹಿರಿಯ ವಕೀಲ ಈಶ್ವರಚಂದ್ರ ಸಾಗರ್ ಮಾತನಾಡಿ, ಪತ್ರಕರ್ತರು ಸಮಾಜದ ಕಣ್ಣುಗಳಿದ್ದಂತೆ. ಕೊಡಗಿನ ಪತ್ರಿಕೋದ್ಯಮಕ್ಕೆ ಉತ್ತಮ ಹೆಸರಿದೆ. ಇದನ್ನು ಉಳಿಸಿಕೊಂಡು ಹೋಗಬೇಕು. ತಾಲೂಕು ಸಂಘದ ದತ್ತಿನಿಧಿಗೆ ತಮ್ಮ ತಂದೆ ದಿ.ಬಸಪ್ಪ ಅವರ ಹೆಸರಿನಲ್ಲಿ 25 ಸಾವಿರ ನೀಡಲಾಗುವುದು ಎಂದು ತಿಳಿಸಿದರು.
ತಾಲೂಕು ಸಂಘದ ದತ್ತಿನಿಧಿಗೆ ತಾಲೂಕು ಅಧ್ಯಕ್ಷ ಹರೀಶ್ ಕುಮಾರ್ ತಮ್ಮ ತಂದೆ ರಾಮೇಗೌಡರ ಹೆಸರಿನಲ್ಲಿ, ಜಿಲ್ಲಾ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅವರು ತಮ್ಮ ತಂದೆ ತೇಲಪಂಡ ಸೋಮಣ್ಣ ಅವರ ಹೆಸರಿನಲ್ಲಿ, ಜಿಲ್ಲಾ ಸಂಘದ ಸ್ಥಾಪಕ ಅಧ್ಯಕ್ಷ ಮುರಳೀಧರ್ ಅವರು ತಮ್ಮ ತಂದೆ ಅಪ್ಪಸ್ವಾಮಿ ಅವರ ಹೆಸರಿನಲ್ಲಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್ ಅವರು ತಮ್ಮ ತಂದೆ ಸುಬ್ಬಯ್ಯಗೌಡ ಅವರ ಹೆಸರಿನಲ್ಲಿ ಹಾಗೂ ಕೂಗೂರಿನ ಯಶಸ್ವಿನಿ ಚಂದ್ರಕಾಂತ್ ಅವರು ತಮ್ಮ ತಂದೆ ದಿ.ತಿಮ್ಮಪ್ಪ ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅದ್ಯಕ್ಷ ಹೆಚ್.ಅರ್. ಹರೀಶ್ ಕುಮಾರ್ ವಹಿಸಿದ್ದರು. ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘದ ಉಪಾಧ್ಯಕ್ಷ ಕವನ್ ಕಾರ್ಯಪ್ಪ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಡಿ.ಪಿ. ಲೋಕೇಶ್ ಸ್ವಾಗತಿಸಿದರು.
ಕಳೆದ 25 ವರ್ಷಗಳಿಂದ ನಿರಂತರವಾಗಿ ಸಲ್ಲಿಸಿದ ಸಮಾಜ ಮುಖಿ ಕೆಲಸಗಳಿಗಾಗಿ ಜೀ ವಾಹಿನಿಯ ಯುವರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಹಾಗೂ ಜೇಸಿ ರತ್ನ ಪ್ರಶಸ್ತಿಗೆ ಭಾಜನರಾದ ಹರಪಳ್ಳಿ ರವೀಂದ್ರ ಅವರನ್ನು ಗೌರವಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.