ಅನುಸಂಧಾನದಿಂದ ಜ್ಞಾನ ಸಂಪಾದಿಸಿ: ಹರ್ಷಾನಂದ ಶ್ರೀ

KannadaprabhaNewsNetwork | Published : Jun 21, 2024 1:05 AM

ಸಾರಾಂಶ

ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ, ಸಾಧನೆಗೈದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.

ಕನ್ನಡಪ್ರಭವಾರ್ತೆ ಜಮಖಂಡಿ

ಶ್ರದ್ಧೆ, ಉತ್ಸಾಹ, ಸ್ಮರಣೆ ಮತ್ತು ಸಮಾಧಿ ತತ್ತ್ವಗಳ ಅನುಸಂಧಾನದಿಂದ ಜ್ಞಾನ ಸಂಪಾದಿಸಬೇಕು. ಹೆತ್ತವರನ್ನು ಗೌರವದಿಂದ ಕಾಣಬೇಕು. ಎಲ್ಲಕ್ಕೂ ಮಿಗಿಲಾಗಿ ಸಂಸ್ಕಾರವಂತರಾಗಬೇಕು ಎಂದು ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಹೇಳಿದರು.

ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ 2024-25ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಮತ್ತು ವಿಶೇಷ ಸಾಧನೆಗೈದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಗಲಗಲಿಯ ಗಾಲವ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ಎಸ್. ಮರೇಗುದ್ದಿ ಮುಖ್ಯ ಅತಿಥಿಯಾಗಿ ಮಾತನಾಡಿ, ಏಕಾಗ್ರತೆ ಮತ್ತು ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಕಲಿಕೆ ನಿರಂತರ ಪ್ರಕ್ರಿಯೆಯಾಗಿದೆ. ಸಾಧಕರಾಗಲು ಸತತ ಅಭ್ಯಾಸದಲ್ಲಿ ತೊಡಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಜ್ಞಾನ ಸಮುದ್ರವನ್ನು ದಾಟಿಸುವ ಸಾಮರ್ಥ್ಯ ಶಿಕ್ಷಕರಲ್ಲಿದ್ದರೆ ವಿದ್ಯಾರ್ಥಿಗಳು ತಮ್ಮ ಗುರಿ ತಲುಪುವುದು ಸುಲಭವಾಗುತ್ತದೆ. ವಿದ್ಯಾರ್ಥಿಗಳು ಕೂಡ ಸದಾ ಧನಾತ್ಮಕ ಚಿಂತನೆಯಲ್ಲಿರಬೇಕು ಎಂದರು.

ದಾನೇಶ್ವರಿ ಠಕ್ಕನ್ನವರ, ಪ್ರಿಯಾಂಕಾ ಕುದರಿ, ಓಂಕಾರ ಕಾಂಬಳೆ (ನೀಟ್ ಸಾಧಕರು), ಸಾಕ್ಷಿ ಹವಾಲ್ದಾರ, ಲಕ್ಷ್ಮೀ ಕುಳಲಿ, ಪ್ರಿಯಾಂಕಾ ಲಕ್ಕೂರಿ, ನಮನ ಸಿಂಧೂರ, ಪ್ರಲ್ಹಾದ ಪಾಟೀಲ (ದತ್ತಿ ನಗದು ಬಹುಮಾನ ಪುರಸ್ಕೃತರು), ಸುಕನ್ಯಾ ಸುತಗುಂಡಿ, ಶಿವಲಿಂಗೇಶ್ವರಿ ನಾವಿ, ಪವನ ಕುಲಕರ್ಣಿ, ದೀಪಾ ಗುಣಗೌಡ, ನಿರ್ಮಲಾ ಮೋರೆ, ಅಪ್ಪಾಸಾಬ ಬಿರಾದಾರ, ಅಶ್ವಿನಿ ಅಂಗಡಿ, ರಮೇಶ ಜಮಖಂಡಿ ಸೇರಿದಂತೆ ( ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ 13 ವಿದ್ಯಾರ್ಥಿಗಳು) ಇವರೆಲ್ಲರಿಗೂ ನಗದು ಬಹುಮಾನ, ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ಸುಮಾ ಮಠಪತಿ ಪ್ರಾರ್ಥನೆ ಗೀತೆ ಹಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಗಿರೀಶ ಕಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಕಣಬೂರ, ಸೃಷ್ಟಿ ಕಂಕಣವಾಡಿ ನಿರೂಪಿಸಿದರು. ಉಪನ್ಯಾಸಕ ಪಿ.ಎನ್. ವಜ್ರಮಟ್ಟಿ ವಂದಿಸಿದರು.

Share this article