ಬಳ್ಳಾರಿ ವಿವಿಯಲ್ಲಿ ಗಾಂಧಿ, ಶಾಸ್ತ್ರಿ ಸ್ಮರಣೆ; ವಿವಿಧ ಸೇವಾ ಕಾರ್ಯಕರ್ತರಿಗೆ ಸನ್ಮಾನ

KannadaprabhaNewsNetwork |  
Published : Oct 07, 2024, 01:47 AM IST
ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಅಂಗವಾಗಿ ಬಳ್ಳಾರಿ ವಿವಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವಾ ಕೊಡುಗೆ ನೀಡುತ್ತಿರುವವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕಾಯಕವೇ ಕೈಲಾಸ ಎಂದು ನಂಬಿರುವ ಎಲ್ಲ ಸೇವಾನಿರತ ವ್ಯಕ್ತಿಗಳನ್ನು ನಾವೆಲ್ಲ ಗೌರವಿಸಬೇಕು.

ಬಳ್ಳಾರಿ: ಮಹಾತ್ಮಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವಾ ಕೊಡುಗೆ ನೀಡುತ್ತಿರುವ 23 ಜನರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿವಿಯ ಕುಲಪತಿ ಪ್ರೊ.ಎಂ. ಮುನಿರಾಜು ಹಾಗೂ ಕುಲಸಚಿವ ರುದ್ರೇಶ್ ಎಸ್.ಎನ್. ಸಮುದಾಯ ಸೇವೆಯಲ್ಲಿ ತೊಡಗಿರುವ ವಿಶ್ವವಿದ್ಯಾಲಯೇತರ ವ್ಯಕ್ತಿಗಳನ್ನು ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯವು ಗುರುತಿಸಿ ಗೌರವಿಸುತ್ತಿದೆ. ಗಾಂಧೀಜಿಯವರ ಆಶಯದಂತೆ ಸೌಲಭ್ಯ ವಂಚಿತ ವರ್ಗದ ಸಿಬ್ಬಂದಿಯನ್ನು ಗೌರವಿಸುವ ಪರಿಪಾಠಕ್ಕೆ ವಿವಿಯು ನಾಂದಿ ಹಾಡಿದೆ. ತಮ್ಮ ಸೇವೆಯಲ್ಲಿ ಬದ್ಧತೆ ಪ್ರದರ್ಶಿಸುವ ವಿವಿಧ ಸೇವಾ ವಲಯದ ನೌಕರರಿಗೆ ವಿವಿ ವತಿಯಿಂದ ಮುಂಬರುವ ದಿನಗಳಲ್ಲಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯು ದೇಶದ ಆಸ್ತಿಯಾಗಿದ್ದು, ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಮಹಾತ್ಮ ಗಾಂಧೀಯವರ ಕನಸನ್ನು ನನಸು ಮಾಡುವ ಸಣ್ಣ ಪ್ರಯತ್ನಕ್ಕೆ ವಿವಿಯು ಇಂದು ಪ್ರಯತ್ನಿಸಿದೆ. ಕಾಯಕವೇ ಕೈಲಾಸ ಎಂದು ನಂಬಿರುವ ಎಲ್ಲ ಸೇವಾನಿರತ ವ್ಯಕ್ತಿಗಳನ್ನು ನಾವೆಲ್ಲ ಗೌರವಿಸಬೇಕು ಎಂದು ಹೇಳಿದರು.

ಸುಮಾರು 2 ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿದ ಶವಾಗಾರ ನಿರ್ವಾಹಕ ಅಂದ್ರಯ್ಯ, ಅಂಗನವಾಡಿ ಕಾರ್ಯಕರ್ತೆ ಮಹಾಲಕ್ಷ್ಮಿ, ಆರೋಗ್ಯ ಇಲಾಖೆಯ ಡಿ ಸುನಿತಾ, ತ್ಯಾಜ್ಯ ನಿರ್ವಹಣೆ ಮಾಡುವ ಶ್ರೀನಿವಾಸುಲು, ಹಮಾಲಿ ಕಾರ್ಮಿಕ ಲಕ್ಷ್ಮಿ ನಾರಾಯಣ, ಕೆಎಸ್‌ಆರ್‌ಟಿಸಿ ಚಾಲಕರಾದ ಅಶೋಕ್, ದಾದಾಪೀರ್, ಪೌರಕಾರ್ಮಿಕ ಹನುಮಂತಪ್ಪ,

ಪೋಸ್ಟ್‌ಮ್ಯಾನ್ ಮೌನೇಶ್, ಆಟೋ ಚಾಲಕ ನಾಗರಾಜ್‌ರಾವ್, ಕೂಲಿ ಕಾರ್ಮಿಕ ಚಂದ್ರಶೇಖರ್, ಆಶಾ ಕಾರ್ಯಕರ್ತೆ ರತ್ನಮ್ಮ, ಧೋಬಿ ವೃತ್ತಿಯ ಜಮುನಮ್ಮ, ಮನೆ ಕೆಲಸಗಾರರಾದ ಪದ್ಮಾವತಿ, ಹಾಲು ಮಾರುವ ಮಹೇಶ್, ಹೂ ಮಾರಾಟಗಾರ ಲೋಕಪ್ಪ, ದಿನಪತ್ರಿಕೆ ವಿತರಕ ಸತೀಶ್, ಜಿಲ್ಲಾ ಆಸ್ಪತ್ರೆಯ ಸಿದ್ಧಯ್ಯ, ಅಭಿನಂದನ್, ಟೈಲರ್ ಕೃಷ್ಣರಾವ್ ಹಾಗೂ ಕೆಇಬಿ ಲೈನ್‌ಮನ್‌ಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಂಗನಾಥ್ ಮತ್ತು ರಾಘವೇಂದ್ರ ಗುಡದೂರು ತಂಡದಿಂದ ಗಾಂಧಿ ನಮನ ಸಂಗೀತ ಗೋಷ್ಠಿ ನಡೆಯಿತು. ಡಾ.ಕುಮಾರ್ ಹಾಗೂ ಶಶಿಧರ್ ಕೆಲ್ಲೂರ್ ಕಾರ್ಯಕ್ರಮ ನಿರ್ವಹಿಸಿದರು. ವಿವಿಯ ಬೋಧಕ ಬೋಧಕೇತರ ಸಿಬ್ಬಂದಿ ಮುಂಜಾನೆ 6ರಿಂದ ಒಂದು ತಾಸು ಕಾಲ ಶ್ರಮದಾನ ನಿರ್ವಹಿಸಿ, ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

PREV

Recommended Stories

ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ