ಚಿಕ್ಕೋಡಿ: ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕು ಹಾಗೂ ಸತತ 4 ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ತೆರೆ ಎಳೆಯಬೇಕೆಂದು ಶಾಸಕ ಗಣೇಶ ಹುಕ್ಕೇರಿ ಸದನದಲ್ಲಿ ಆಗ್ರಹಿಸಿದರು.
ದ್ರಾಕ್ಷಿ, ದಾಳಿಂಬೆ ಸೇರಿದಂತೆ ಪ್ರಮುಖ ಬೆಳೆಗಳಿಗೆ ಮಹಾರಾಷ್ಟ್ರವೇ ಮಾರುಕಟ್ಟೆಯಾಗಿದ್ದರಿಂದ ರಾಜ್ಯಕ್ಕೆ ಬರಬೇಕಿರುವ ರಾಜಸ್ವ ಪಕ್ಕದ ರಾಜ್ಯಗಳ ಪಾಲಾಗುತ್ತಿದೆ. ಬೆಳಗಾವಿಯನ್ನು ವ್ಯವಸ್ಥಿತವಾಗಿ ವಿಭಜಿಸಿ, ಚಿಕ್ಕೋಡಿಯನ್ನು ನೂತನ ಜಿಲ್ಲೆಯಾಗಿ ರಚಿಸಿ ಜನ ಸಾಮಾನ್ಯರಿಗೆ ಎಲ್ಲ ರೀತಿಯಿಂದಲೂ ಅನುಕೂಲ ಮಾಡಿಕೊಡಬೇಕು. ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಆಗ್ರಹಿಸಿದರು.
ಚಿಕ್ಕೋಡಿ ತಾಲೂಕಿನ ರೈತರ ಬಹುದಿನಗಳ ಕನಸಾದ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯ ಬಗ್ಗೆ ಮಾತನಾಡಿದ ಶಾಸಕರು, ಈಗಾಗಲೇ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಮಂಜೂರಾಗಿ ಟೆಂಡರ್ ಪ್ರಕ್ರಿಯೆಯಲ್ಲಿರುವ ಕಾರಣ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಬೇಕೆಂದು ವಿನಂತಿಸಿದರು.---
ಒಟ್ಟು ₹ 382.30 ಕೋಟಿ ವೆಚ್ಚದ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಚಿಕ್ಕೋಡಿ ತಾಲೂಕಿನ ಸುಮಾರು 21 ಹಳ್ಳಿಗಳ ರೈತರ ಒಟ್ಟು 78000 ಹೆಕ್ಟೇರ್ ಜಮೀನುಗಳು ನೀರಾವರಿಯಾಗಿ ಮಾರ್ಪಾಡಾಗಲು ಸಹಕಾರಿಯಾಗಲಿದೆ.