ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ಪ್ರತ್ಯೇಕ ಎರಡು ಕಡೆಗಳಲ್ಲಿ ಪ್ರತಿಸ್ಥಾಪಿಸಲಾಗಿದ್ದ ಗಣೇಶಮೂರ್ತಿಗಳ ವಿಸರ್ಜನಾ ಕಾರ್ಯ 400ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ಶನಿವಾರ ನಡೆಯಿತು.ಪಟ್ಟಣದ ಮುಖ್ಯ ರಸ್ತೆಯ ಪೇಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಕಾಂಪೌಂಡ್ ಬಾಯ್ಸ್ ಯುವಕರ ತಂಡ ಹಾಗೂ ಚಿಕ್ಕ ಮಸೀದಿ ಹಿಂಭಾಗದ ಶ್ರೀವಿನಾಯಕ ಗೆಳೆಯರ ಬಳಗದಿಂದ ಪ್ರತ್ಯೇಕವಾಗಿ ಎರಡು ಕಡೆಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಸ್ಥಾಪಿಸಲಾಗಿತ್ತು.
ಶನಿವಾರ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಯುವಕರು ಹತ್ತಾರು ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು. ಕಳೆದ ವರ್ಷ ನಾಗಮಂಗಲ ಹಾಗೂ ಇತ್ತೀಚೆಗೆ ಮದ್ದೂರಿನಲ್ಲಿ ಗಣೇಶನ ವಿಸರ್ಜನೆ ವೇಳೆ ನಡೆದ ಸಂಘರ್ಷಗಳು ಪಟ್ಟಣದಲ್ಲಿ ಮರುಕಳಿಸದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಬಾರಿ ಬಿಗಿ ಭದ್ರತೆ ಕೈಗೊಂಡು ನೂರಾರು ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.1 ಎಸ್ಪಿ, 2 ಎಎಸ್ಪಿ, 3 ಡಿವೈಎಸ್ಪಿ, 8 ಇನ್ಸ್ ಪೆಕ್ಟರ್, 9 ಪಿಎಸ್ಐ, ಅರ್ಪಿಎಫ್ ತುಕಡಿ ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಬೆಳಗ್ಗಿನಿಂದಲೇ ಪಟ್ಟಣದ ಜಾಮಿಯಾ ಮಸೀದಿ ಸುತ್ತಲೂ ಪೊಲೀಸ್ ಬ್ಯಾರಿಗೇಟ್ ಅಳವಡಿಸಿ ಪೊಲೀಸರು ಬಂದೋಬಸ್ತ್ ಹಾಕಲಾಗಿತ್ತು. ಜೊತೆಗೆ ಪಟ್ಟಣದ ಪ್ರತಿ ದೇವಾಲಯಗಳಲ್ಲಿ ಸಹ 2 -3 ಮಂದಿ ಪೊಲೀಸರನ್ನು ನಿಯೋಜಿಸಿ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಯಾವುದೇ ಗಲಾಟೆ, ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿತ್ತು.
ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಸಿಇ ತಿಮ್ಮಯ್ಯ, ಡಿವೈಎಸ್ಪಿ ಶಾಂತ ಮಲ್ಲಪ್ಪ ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಗಣೇಶನ ಮೆರವಣಿಗೆ ನಡೆಯುವವರೆವಿಗೂ ಜೊತೆಯಲ್ಲಿದ್ದು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದರು.ಗಣಪತಿಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಭದ್ರಕಾಳಿಗೆ ಭಕ್ತರಿಂದ ಈಡುಗಾಯಿ ಸಮರ್ಪಣೆ
ಕಿಕ್ಕೇರಿ:ಚನ್ನನಕೊಪ್ಪಲು ಬಡಾವಣೆಯ ಪ್ರಿನ್ಸ್ಬಾಯ್ಸ್ ಬಳಗ ಹಮ್ಮಿಕೊಂಡಿದ್ದ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಶ್ರೀಭದ್ರಕಾಳಿ ದೇವಿ ಮೆರವಣಿಗೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಈಡುಗಾಯಿ ಸಮರ್ಪಿಸಿದರು.
ದ್ರಕಾಳಿ ಅವಾಹನೆಯಾದ ವೇಷಧಾರಿ ರಂಗೋಲಿಯಿಂದ ಮಂಡಲ ರಚಿಸಿಕೊಂಡು ದೇವಿ ಅವತಾರಣಿಕೆಯ ವಿವಿಧ ನೃತ್ಯ ಪ್ರದರ್ಶಿಸಿದರು. ಚಂಡೆ ವಾದ್ಯಕ್ಕೆ ತಕ್ಕಂತೆ ವೀರಾವೇಷದಿಂದ ಮೆರವಣಿಗೆಯಲ್ಲಿ ಕುಣಿದರು. ಭದ್ರಕಾಳಿ ದೇವಿ ನೃತ್ಯ ಮಾಡುತ್ತಿದವರೊಂದಿಗೆ ವೀರಭದ್ರಕುಣಿತದವರು ಸಾಥ್ ನೀಡಿದರು.ಭಕ್ತರು ಎಸೆಯುತ್ತಿದ್ದ ನಿಂಬೆಹಣ್ಣು, ತೆಂಗಿನಕಾಯಿಯನ್ನು ವೀರವೇಷದಿಂದ ಖಡ್ಗದಿಂದ ಛೇದಿಸಿ ನಿಬ್ಬೆರಗು ಗೊಳಿಸಿದರು. ಮಂಡಲದ ಸುತ್ತ ವೃತ್ತಾಕಾರವಾಗಿ ತಿರುಗುತ್ತ ಬೆಂಕಿ ಜ್ವಾಲೆಯೊಂದಿಗೆ ನರ್ತಿಸಿದರು. ಹಾಸನ ಕಲಾತಂಡ ಬಳಗದ ಭದ್ರಕಾಳಿ ನೃತ್ಯ ಮೆರವಣಿಗೆ ವೀಕ್ಷಿಸಲು ಹತ್ತಾರು ಗ್ರಾಮಗಳಿಂದ ರೈತರು, ಯುವಕರು ಅಧಿಕವಾಗಿ ಆಗಮಿಸಿದ್ದರು.
ಭಕ್ತರು ಅವಾಹನೆಯಾದ ಭದ್ರಕಾಳಿಗೆ ನೂರಾರು ತೆಂಗಿನ ಕಾಯಿಗಳಿಂದ ದೃಷ್ಟಿ ಇಳಿತೆಗೆದು ಈಡುಗಾಯಿ ಹೊಡೆದು ಸಮಾಧಾನಗೊಳಿಸಿದರು. ಗಣಪತಿ ವಿಸರ್ಜನಾ ಮೆರವಣಿಗೆ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಸಾಗಿತು. ಬೆಳ್ಳಿ ಸಾರೋಟಿನಲ್ಲಿ ಸಾಗಿದ ಗಣೇಶ ಮೂರ್ತಿಗೆ ದಾರಿಯುದ್ದಕ್ಕೂ ಭಕ್ತರು ಹಣ್ಣು ಕಾಯಿ ಅರ್ಪಿಸಿ, ಆರತಿ ಬೆಳಗಿ ಇಷ್ಟಾರ್ಥಈಡೇರಿಕೆಗೆ ಪ್ರಾರ್ಥಿಸಿದರು.ಅಂತಿಮವಾಗಿ ಅಮಾನಿಕೆರೆಯಲ್ಲಿ ಗಣೇಶಮೂರ್ತಿಯನ್ನು ವಿಷರ್ಜಿಸಲಾಯಿತು. ಭಕ್ತರಿಗೆತೀರ್ಥ, ಪ್ರಸಾದ ವಿತರಿಸಲಾಯಿತು.