ಕನ್ನಡಪ್ರಭ ವಾರ್ತೆ ಚಿಂತಾಮಣಿ
ಶಕ್ತಿ ದೇವತೆಯೆಂದು ಪ್ರಸಿದ್ಧಿ ಪಡೆದಿರುವ ಗಂಗಾಭವಾನಿ ಅಮ್ಮನವರ ಜಾತ್ರೆಯನ್ನು ಪ್ರತಿ ವರ್ಷ ನಗರ ಹಾಗೂ ನರಸಿಂಹಪೇಟೆಯ ಸುತ್ತಮುತ್ತಲಿನ ಬಡಾವಣೆಗಳ ನಾಗರಿಕರು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ. ಜಾತ್ರೆಯ ಪ್ರಯುಕ್ತ ಗಂಗಾಭವಾನಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು, ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಅಮ್ಮನವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ಗಂಗಜಾತ್ರೆಯ ಪ್ರಯುಕ್ತ ನಗರದ ನರಸಿಂಹಪೇಟೆ, ಅಂಬೇಡ್ಕರ್ ಕಾಲೋನಿ, ಎನ್ಎನ್ಟಿ ರಸ್ತೆ, ಗಜಾನನ ವೃತ್ತ, ಟ್ಯಾಂಕ್ ಬಂಡ್ ರಸ್ತೆ, ವೆಂಕಟಗಿರಿಕೋಟೆ, ತಪತೇಶ್ವರ ಕಾಲೋನಿ, ವಿನಾಯಕ ನಗರ, ಸೊಣ್ಣಶೆಟ್ಟಿಹಳ್ಳಿ, ಚೌಡರೆಡ್ಡಿಪಾಳ್ಯ, ಎನ್.ಆರ್.ಬಡಾವಣೆ, ಆಶ್ರಯ ಬಡಾವಣೆ, ಕೆ.ಆರ್.ಬಡಾವಣೆ ಸೇರಿ ಪಟಾಲಮ್ಮ ದೇವಸ್ಥಾನ ಸುತ್ತಮುತ್ತಲಿನ ಸಹಸ್ರಾರು ಮಹಿಳೆಯರು, ಗಂಗಾಭವಾನಿ ಅಮ್ಮನವರಿಗೆ ವಿಶೇಷವಾಗಿ ತಯಾರಿಸಿದ್ದ ತಂಬಿಟ್ಟು ದೀಪಗಳನ್ನು ಹೊತ್ತು ಮೆರವಣಿಗೆ ಮೂಲಕ ಗಂಗಾಭವಾನಿ ದೇವಾಲಯಕ್ಕೆ ಆಗಮಿಸಿ, ಪೂಜೆ ಸಲ್ಲಿಸುವ ಮೂಲಕ ಹರಕೆ ಸಲ್ಲಿಸಿದರು.ಮಂಗಳವಾರ ರಾತ್ರಿ ಅಲಂಕೃತ ಪಲ್ಲಕ್ಕಿಯಲ್ಲಿ ಅಮ್ಮನವರ ಉತ್ಸವ ಮೂರ್ತಿಯನ್ನಿಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಪುಂಗನೂರು ಶೈಲಿಯಲ್ಲಿ ವಾದ್ಯಮೇಳಗಳೊಂದಿಗೆ ಭವ್ಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಕೊಳಲು ವಾದನ ಸಹಿತ ನೃತ್ಯ ಪ್ರದರ್ಶನ, ಮಹಿಳೆಯರ ಕೋಲಾಟ, ತಮಟೆ ವಾದ್ಯಗಳ ಸದ್ದಿಗೆ ಯುವಕರ ಕುಣಿತ ಸಾರ್ವಜನಿಕರ ಗಮನ ಸೆಳೆಯಿತು.