ಲಕ್ಷ ಲಕ್ಷ ರೊಟ್ಚಿ ಸಂಗ್ರಹಿಸಲು ಪ್ರತ್ಯೇಕ ವ್ಯವಸ್ಥೆ
ನೂರಾರು ಕ್ವಿಂಟಲ್ ಸಿಹಿ ತಿನಿಸನ್ನು ಭಕ್ತರೇ ತಂದುಕೊಡುತ್ತಾರೆಕನ್ನಡಪ್ರಭ ವಾರ್ತೆ ಕೊಪ್ಪಳಜ. 15ರಂದು ನಡೆಯುವ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಲಕ್ಷ ಲಕ್ಷ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ನಡೆಸಲು ಈಗಿನಿಂದಲೇ ಭರದಿಂದ ಸಿದ್ಧತೆ ಸಾಗಿದೆ.
ಏಕಕಾಲಕ್ಕೆ ಹತ್ತರಿಂದ ಹದಿನೈದು ಸಾವಿರ ಭಕ್ತರು ಪ್ರಸಾದ ಸ್ವೀಕಾರ ಮಾಡಲು ವಿಸ್ತಾರವಾದ ಜಾಗದಲ್ಲಿ ತಯಾರಿ ಕಾರ್ಯ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದು, ಜ. 10ರ ವೇಳೆಗೆ ಸಿದ್ಧವಾಗಲಿದೆ.ನಿತ್ಯವೂ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ವರ್ಷಕ್ಕೆ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮತ್ತಷ್ಟು ವಿಸ್ತಾರ ಮಾಡುವ ಕಾರ್ಯ ನಡೆದಿದೆ.
ನಾಲ್ಕು ಎಕರೆ ವಿಶಾಲವಾದ ಜಾಗದಲ್ಲಿ ಬೃಹದಾಕಾರದ ಅಡುಗೆ ಕೋಣೆ, ಆಹಾರ ಸಂರಕ್ಷಣೆ ಕೋಣೆ, ರೊಟ್ಟಿ ಸಂಗ್ರಹ ಕೋಣೆ, ಮಾದಲಿ ಕಟ್ಟೆ, ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳು ನಡೆಯುತ್ತಿವೆ. ಗವಿಸಿದ್ಧೇಶ್ವರ ಶ್ರೀಗಳು ಆಗಾಗ ಸಿದ್ಧತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಲಕ್ಷ ಲಕ್ಷ ಮೀರ್ಚಿ ಭಜ್ಜಿ ಹಾಕುವುದಕ್ಕೆ ಪ್ರತ್ಯೇಕ ಸ್ಥಳ, ಅನ್ನ, ಸಾಂಬರ್ ಮಾಡುವುದಕ್ಕೆ ಬೃಹತ್ ಅಡುಗೆ ಕೊಣೆ ಹಾಗೂ ಬರುವ ನೂರಾರು ಕ್ವಿಂಟಲ್ ಸಿಹಿ ತಿನಿಸು ಸಂಗ್ರಹಿಸುವುದಕ್ಕೆ ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲಾಗುತ್ತದೆ.ಭಕ್ತರಿಂದಲೇ ಬರುವ ಲಕ್ಷ ಲಕ್ಷ ರೊಟ್ಟಿಗಳನ್ನು ಸುಮಾರು ನಾಲ್ಕಾರು ಗೋದಾಮು ಮಾಡಿ ತುಂಬಲಾಗುತ್ತದೆ. ಸರಿಸುಮಾರು ಹದಿನೈದರಿಂದ 20 ಲಕ್ಷ ರೊಟ್ಟಿ ಬರುತ್ತವೆ ಎಂದು ಅಂದಾಜು ಮಾಡಲಾಗಿದೆ. ತರಕಾರಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಇದನ್ನು ಕಟಾವು ಮಾಡಲು ಲಾರಿಗಟ್ಟಲೇ ಭಕ್ತರು ಸ್ವಯಂ ಪ್ರೇರಿತವಾಗಿ ಆಗಮಿಸುವುದರಿಂದ ಅದೆಲ್ಲಕ್ಕೂ ಜಾಗ ಮತ್ತು ನೆರಳಿನ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಹೀಗೆ, ನಿತ್ಯವೂ ಸಹಸ್ರಾರು ಭಕ್ತರು ಪ್ರಸಾದವನ್ನು ಅಚ್ಚುಕಟ್ಟಾಗಿ ಮಾಡುವುದಕ್ಕೆ ತಿಂಗಳಗಟ್ಟಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.ಸಕಲ ಸಿದ್ಧತೆ:
ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲು ಸಾವಿರಾರು ಬಾಣಸಿಗರು ಆಗಮಿಸುತ್ತಾರೆ. ಅಡುಗೆ ಮಾಡಲು ಪೈಪೋಟಿ ಇರುವುದರಿಂದ ವರ್ಷ ಮೊದಲೇ ಅಡುಗೆ ಮಾಡುವವರು ತಮ್ಮ ಹೆಸರು ನೋಂದಾಯಿಸಿಕೊಂಡಿರುತ್ತಾರೆ. ಪ್ರತಿ ವರ್ಷವೂ ಬರುವವರ ಜೊತೆಗೆ ಮತ್ತೆ ಸೇರ್ಪಡೆಯಾಗುವವರ ದೊಡ್ಡ ಯಾದಿಯೇ ಇರುತ್ತದೆ. ಹೀಗಾಗಿ, ಇದೆಲ್ಲವೂ ಸುಸೂತ್ರವಾಗಿ ನಡೆಯಲು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ.ಮೊದಲೇ ದಿನಾಂಕ ನಿಗದಿ:ಮಹಾದಾಸೋಹಕ್ಕೆ ಭಕ್ತರು ಕ್ವಿಂಟಲ್ ಗಟ್ಟಲೇ ಸಿಹಿ ತಿನಿಸು ತಂದುಕೊಡುತ್ತಿರುತ್ತಾರೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ತರುವವರಿಗೆ ಮೊದಲೇ ದಿನಾಂಕ ನಿಗದಿ ಮಾಡಲಾಗುತ್ತದೆ. ಭಕ್ತರು ಬಂದು ಶ್ರೀ ಮಠದಲ್ಲಿ ಅಡುಗೆ ಉಸ್ತುವಾರಿಗಳೊಂದಿಗೆ ಚರ್ಚೆ ಮಾಡಿದ ಮೇಲೆ ತಮ್ಮ ಸಿಹಿ ತಿನಿಸುಗಳನ್ನು ತಯಾರಿ ಮಾಡಿಕೊಂಡು ತಂದು ಕೊಡುತ್ತಾರೆ. ಸಿಂಧನೂರಿನಿಂದ 100 ಕ್ವಿಂಟಲ್ ಸಿಹಿ ತಿನಿಸು ಪ್ರತಿ ವರ್ಷವೂ ಬರುತ್ತದೆ. ಹಾಗೆಯೇ ಕೊಪ್ಪಳ ವರ್ತಕರು ಸಹ ನೂರು ಕ್ವಿಂಟಲ್ ಮಾದಲಿ ಸಿದ್ಧ ಮಾಡಿಕೊಡುತ್ತಾರೆ. ಇಂಥವರೆಲ್ಲಾ ಮೊದಲೇ ತಮ್ಮ ದಿನಾಂಕವನ್ನು ಗೊತ್ತು ಮಾಡಿಕೊಂಡಿರುತ್ತಾರೆ.ಮಹಾದಾಸೋಹಕ್ಕೆ ಸಿದ್ಧತೆ ಕಾರ್ಯ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದು, ಜಾತ್ರೆಯ ವೇಳೆಗೆ ಪೂರ್ಣಗೊಳ್ಳಲಿದೆ. ಕಳೆದ ಬಾರಿ ಆಗಿರುವ ಸಮಸ್ಯೆ ಸರಿಪಡಿಸಿಕೊಂಡು ತಯಾರಿ ಮಾಡಲಾಗುತ್ತಿದೆ ಎನ್ನುತ್ತಾರೆ ದಾಸೋಹ ಉಸ್ತುವಾರಿ ರಾಮನಗೌಡ.