ಕನ್ನಡಪ್ರಭ ವಾರ್ತೆ ಮದ್ದೂರು
ರೈತರು ಮತ್ತು ಗ್ರಾಮಸ್ಥರು, ಜನಾಭಿಪ್ರಾಯಕ್ಕಿಂತ ಸರ್ಕಾರದ ತೀರ್ಮಾನವೇ ದೊಡ್ಡದೇ ಎಂದು ಪ್ರಶ್ನಿಸಿ, ಸಚಿವರ ಹೇಳಿಕೆ ಪ್ರತಿ ಹರಿದು ಕಸದ ಬುಟ್ಟಿಗೆ ಎಸೆದು ಪ್ರತಿಭಟಿಸಿದರು. ಸಚಿವ ರಹೀಮ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕದ್ವಯರಾದ ಕೆ.ಎಂ.ಉದಯ್, ದಿನೇಶ್ ಗೂಳಿಗೌಡ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ರೈತಪರ ಹೋರಾಟಗಾರ್ತಿ ಸುನಂದ ಜಯರಾಂ ಮಾತನಾಡಿ, ಗ್ರಾಪಂ ವ್ಯಾಪ್ತಿಗಳಲ್ಲಿ ಇರುವ ಜನರು ಬೇಸಾಯ ಬಿಟ್ಟು ಕೃಷಿಯೇತರ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಇಂದು ಕಾರಣ ಕೊಟ್ಟು ಗ್ರಾಮ ಪಂಚಾಯ್ತಿಗಳನ್ನು ನಗರಸಭೆ ವ್ಯಾಪ್ತಿಯಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿದರು.ಗೆಜ್ಜಲಗೆರೆ ಗ್ರಾಮ ಸುತ್ತಮುತ್ತ ಹಸಿರು ವಲಯ ಇಲ್ಲ ಎಂದು ಪೌರಾಡಳಿತ ಸಚಿವರು ಖುದ್ದು ಪರಿಶೀಲನೆ ಮಾಡಿದ್ದಾರಾ ಅಥವಾ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಯಾವುದೇ ಅಧಿಕಾರಿಗಳಿಂದ ವರದಿ ಪಡೆದುಕೊಂಡಿದ್ದಾರಾ. ಗೆಜ್ಜಲಗೆರೆ ಗ್ರಾಮವನ್ನು ಯಾವುದೋ ಆಮಿಷಕ್ಕೆ ಒಳಗಾಗಿ ನಾಶ ಮಾಡಿ ಗ್ರಾಮಸ್ಥರಿಗೆ ದ್ರೋಹ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.