ಕನ್ನಡಪ್ರಭ ವಾರ್ತೆ ವಿಜಯಪುರ: ಹೆಣ್ಣು ಮಗುವನ್ನು ಸಂರಕ್ಷಿಸಿ, ಪೋಷಣೆ ಮಾಡಿ ಸುಶಿಕ್ಷಿತರನ್ನಾಗಿ ಮಾಡಿದರೆ ಲಿಂಗಾಧಾರಿತ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಅಂಗನವಾಡಿ ಕೇಂದ್ರದ ಹಿರಿಯ ಮೇಲ್ವಿಚಾರಕಿ ಪ್ರಮೀಳಾ ಕುಂದಗೋಳ ಹೇಳಿದರು.
ಹಿರಿಯ ಮೇಲ್ವಿಚಾರಕಿ ಪವಿತ್ರಾ ಪತ್ತಾರ ಮಾತನಾಡಿ, ಗರ್ಭಿಣಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತಹೀನತೆ, ಕಡಿಮೆ ತೂಕದ ಶಿಶು ಸೇರಿದಂತೆ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವವರನ್ನು ಹೊರಕ್ಕೆ ತರಲು ಪೋಷಣ್ ಅಭಿಯಾನ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಗಂಡು, ಹೆಣ್ಣಿನ ಅನುಪಾತ ಅವಲೋಕಿಸಿ ನಾವು ಎಚ್ಚೆತ್ತುಕೊಳ್ಳಬೇಕಿದೆ. ತನಗೆ ಗಂಡು ಮಗು ಬೇಕು ಎಂಬ ಆಸೆ ಬಿಟ್ಟು, ಮನೆಯಲ್ಲಿ ಹೆಣ್ಣು-ಗಂಡು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು. ಹೆಣ್ಣು ಮಗುವಿಗೆ ಉನ್ನತ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಮೇಲ್ವಿಚಾರಕಿ ಜ್ಯೋತಿ ಕುಲಕರ್ಣಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಕೆರೂರ ಸ್ವಾಗತಿಸಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ವಿಜಯಲಕ್ಷ್ಮೀ ಹಂಡಿ, ಸಂಧ್ಯಾ ಜಹಾಗೀರದಾರ ಹಾಗೂ ಸಹಾಯಕಿಯರಾದ ರಾಜಶ್ರೀ ಸಮಗೊಂಡ, ರಾಜಶ್ರೀ ಮಕಣಿ ಸೇರಿ ಅನೇಕ ತಾಯಂದಿರು, ಪಾಲಕರು ಭಾಗವಹಿಸಿದ್ದರು.