ಗ್ರಾಹರಿಕೆ ಅನ್ಯಾಯವಾದಾಗ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗ್ರಾಹಕರ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ತಾವು ಖರೀದಿ ಮಾಡಿದ ವಸ್ತುವಿನಿಂದ ನೀವು ಮೋಸ ಹೋದರೇ ಗ್ರಾಹಕರ ನ್ಯಾಯಾಲಯದ ಮೂಲಕ ನ್ಯಾಯ ಪಡೆದುಕೊಳ್ಳಬಹುದಾಗಿದೆ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಜನರು ಯಾವುದೇ ವಸ್ತುವನ್ನು ಖರೀದಿಸಿದಾಗ ಕಡ್ಡಾಯವಾಗಿ ಬಿಲ್ ಪಡೆಯಬೇಕು. ಒಂದು ತಾವು ಖರೀದಿಸಿದ ವಸ್ತು ಕಳಪೆಯಾಗಿದ್ದರೇ ಅಥವಾ ಆ ವಸ್ತುವಿಗೆ ಅಷ್ಟೊಂದು ಮೌಲ್ಯ ಇಲ್ಲದೇ ಇದ್ದಾಗ ತಾವು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಪಡೆದುಕೊಳ್ಳಬಹುದು ಎಂದು ಜೆ.ಎಂ.ಎಫ್.ಸಿ ನ್ಯಾಯಾಧೀಶ ಹರೀಶ್ ತಿಳಿಸಿದರು.
ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ಪಟ್ಟಣ ಪಂಚಾಯತಿ ರವರುಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಹಾಗೂ ವಿಶ್ವ ಜಲ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಕರಣ ದಾಖಲಿಸಲು ರಸೀದಿ ಕಡ್ಡಾಯ
ಗ್ರಾಹರಿಕೆ ಅನ್ಯಾಯವಾದಾಗ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗ್ರಾಹಕರ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ತಾವು ಖರೀದಿ ಮಾಡಿದ ವಸ್ತುವಿನಿಂದ ನೀವು ಮೋಸ ಹೋದರೇ ಗ್ರಾಹಕರ ನ್ಯಾಯಾಲಯದ ಮೂಲಕ ನ್ಯಾಯ ಪಡೆದುಕೊಳ್ಳಬಹುದಾಗಿದೆ. ಆದರೆ ತಾವು ಎಲ್ಲಿಯೇ ವಸ್ತು ಖರೀದಿಸಿದಾಗ ತಪ್ಪದೇ ರಸೀದಿಯನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ತಾವು ಪ್ರಕರಣ ದಾಖಲಿಸಲು ಸಾಧ್ಯವಾಗುತ್ತದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲೂ ಗ್ರಾಹಕರ ನ್ಯಾಯಾಲಯ ಇರುತ್ತದೆ. ಅದರ ಮೂಲಕ ತಾವು ನ್ಯಾಯ ಪಡೆದುಕೊಳ್ಳಬಹುದು ಎಂದರು.
ಬಳಿಕ ನೀರಿನ ಮಹತ್ವದ ಬಗ್ಗೆ ಮಾತನಾಡುತ್ತಾ, ಭೂಮಿಯ ಮೇಲೆ ವಾಸಿಸುವಂತಹ ಪ್ರತಿಯೊಂದು ಜೀವಿಗೂ ನೀರು ತುಂಬಾ ಮುಖ್ಯವಾಗಿ ಬೇಕಾಗಿದೆ. ನೀರು ಅಭಾವ ಸೃಷ್ಟಿಯಾದರೇ ಇಡೀ ಜೀವ ಸಂಕುಲ ನಾಶವಾಗಲಿದೆ. ನೀರನ್ನು ನಾವು ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ನೀರಿನ ಬಳಕೆ ಹಿತ, ಮುತವಾಗಿರಬೇಕು ಎಂದರು.
ಹನಿ ನೀರಾವರಿ ಅಳವಡಿಸಿ
ಕಳೆದೆರಡು ವರ್ಷಗಳ ಹಿಂದೆ ಒಳ್ಳೆಯ ಮಳೆಯಾಗಿತ್ತು. ಇದೀಗ ಮಳೆಯ ಕೊರತೆಯಾಗಿದೆ. ಕೆಲವು ಕಡೆ ಸಾವಿರಾರು ಅಡಿಗಳಷ್ಟು ಬೋರ್ ವೆಲ್ ಮೂಲಕ ಕೊರೆದರೂ ನೀರು ಸಿಗುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬರು ನೀರು ಪೋಲು ಮಾಡಬಾರದು. ನಲ್ಲಿಗಳ ಬಳಿ ನೀರು ಪೋಲಾಗುತ್ತಿದ್ದರೇ ಅದನ್ನು ತಡೆಯಬೇಕು. ರೈತರು ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಘಟಕಗಳನ್ನು ಹಾಕಿಕೊಂಡು ನೀರನ್ನು ಮಿತ ಬಳಕೆ ಮಾಡಬೇಕು ಎಂದರು.
ಇನ್ನೂ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಎನ್.ಬಾಬು ಗ್ರಾಹಕರ ಹಕ್ಕುಗಳ ಬಗ್ಗೆ ವಿವರಣೆ ನೀಡಿದರು. ಈ ಸಮಯದಲ್ಲಿ ವಕೀಲರಾದ ಬಾಬಾಜಾನ್, ಅಮರೇಶ, ಅಭಿಷೇಕ್, ಪಟ್ಟಣ ಪಂಚಾಯಿತಿ ರಾಜಸ್ವ ನಿರೀಕ್ಷಕ ಬಾಲಪ್ಪ ನ್ಯಾಯಾಲಯದ ಸಿಬ್ಬಂದಿ, ಕಕ್ಷಿದಾರರು, ಸಾರ್ವಜನಿಕರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.