ವಿಜಯಪುರ: ಸ್ಪರ್ಧಾತ್ಮಕ ಯುಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೇ ಮಕ್ಕಳಿಗೆ ವಿಜ್ಞಾನ ಶಿಕ್ಷಣದ ಬಗ್ಗೆ ಅಭಿರುಚಿ ಬೆಳೆಸುವುದು ಅವಶ್ಯಕ ಎಂದು ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ದಿನೇಶ್ ಹೇಳಿದರು.ಪಟ್ಟಣದ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಮೌಢ್ಯ ತೊಲಗಿಸಿ ವಿಜ್ಞಾನ, ಗಣಿತ ವಿಷಯಗಳತ್ತ ಆಕರ್ಷಿಸಿ, ಸಂಶೋಧನೆ ಕೈಗೊಳ್ಳಲು ಉತ್ತೇಜಿಸಬೇಕು. ಆ ನಿಟ್ಟಿನಲ್ಲಿ ವಿಜ್ಞಾನ ಮೇಳ ಮಕ್ಕಳ ಸಂಶೋಧನಾ ಅನಾವರಣಕ್ಕೊಂದು ಉತ್ತಮ ವೇದಿಕೆಯಾಗಿದೆ. ಮಕ್ಕಳು ಅಂಕಗಳಿಸುವ ಯಂತ್ರಗಳಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ ಇಂತಹ ಮೇಳಗಳು ಮಕ್ಕಳ ಬೆಳವಣಿಗೆಗೆ ಪೂರಕ. ಮಕ್ಕಳು ಕೇವಲ ಪುಸ್ತಕದ ಹುಳುಗಳಾದರೆ ಪ್ರಯೋಜನವಿಲ್ಲ. ವ್ಯಕ್ತಿತ್ವ ವಿಕಸನಗೊಳ್ಳಬೇಕು ಎಂದರು.
ಮುಖ್ಯಶಿಕ್ಷಕ ಮನೋಹರ್ ಮಾತನಾಡಿ, ವಿಜ್ಞಾನ ಹಾಗೂ ಗಣಿತ ವಿಷಯಗಳು ಕಠಿಣ ಎಂಬ ಭಾವನೆ ಹಲ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೇರೂರಿದೆ. ಈ ಭಾವನೆ ಹೋಗಲಾಡಿಸಲು ವಿಜ್ಞಾನ ಮೇಳ ಸಹಕಾರಿಯಾಗಲಿದೆ ಎಂದು ಹೇಳಿದರು.ಶಾಲೆಯ ಮಕ್ಕಳು, ಅಮಾವಾಸ್ಯೆ, ಹುಣ್ಣಿಮೆ, ಮಾನವನ ದೇಹದ ರಚನೆ, ಶ್ವಾಸಕೋಶದ ಕಾರ್ಯ, ಮಣ್ಣಿನ ಸವೆತ, ಮಳೆನೀರು ಕೊಯ್ಲು, ವಿಜ್ಞಾನ ಪ್ರಯೋಗ ಶಾಲೆ ಮಾದರಿಗಳು, ಉಲ್ಕಾಪಾತಗಳು, ಮೆದುಳಿನ ರಚನೆ, ಆಯಸ್ಕಾಂತಗಳು, ಪರಿಸರ ಸಂರಕ್ಷಣೆ, ಸೌರಮಂಡಲ ರಚನೆ ಸೇರಿದಂತೆ ೧೪೪ ಮಾದರಿಗಳನ್ನು ಪ್ರದರ್ಶನಕ್ಕಿಟ್ಟಿದ್ದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಶಿಲ್ಪಾ ಅಜಿತ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಸಂಚಾಲಕಿ ದೀಪರಮೇಶ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಾಧ, ಸದಸ್ಯರಾದ ಮಾಲಾ, ವೀಣಾ, ಸುಮಯ್ಯ ಸುಲ್ತಾನ, ರಮೇಶ್, ಶಿಕ್ಷಣ ಸಂಯೋಜಕರಾದ ನಾಗಪ್ಪ, ಸುವರ್ಣ, ಕೋಮಲ, ಬಿಆರ್ಪಿ ಸಮೀರಾ, ಚಂದ್ರಶೇಖರ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕ ರಾಜು ಹವಳೇಕರ್, ಗುಲ್ಜಾರ್ ಫಾತಿಮಾ, ಸುಭಾಷ್ ಬಿ ದಾಸರ್, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಮೋನಿಕಾ, ದಿನೇಶ್, ದೀಪಿಕಾ ಹಾಗೂ ಶಿಕ್ಷಕರು ಹಾಜರಿದ್ದರು.(ಫೋಟೋ ಕ್ಯಾಫ್ಷನ್)
ವಿಜಯಪುರ ಸರ್ಕಾರಿ ಮಾದರಿ ಬಾಲಕಿಯರ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳವನ್ನು ಉದ್ಘಾಟಿಸಲಾಯಿತು.