ಮಕ್ಕಳಿಗೆ ಸಂಸ್ಕಾರ-ಸಂಸ್ಕೃತಿ ನೀಡಿ

KannadaprabhaNewsNetwork |  
Published : Sep 01, 2024, 01:47 AM IST
ಕಾರ್ಯಕ್ರಮವನ್ನು ಉದ್ದೇಶಿಸಿ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿದರು.  | Kannada Prabha

ಸಾರಾಂಶ

ಕಳೆದ 30 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ, ಮಹಾ ಅನ್ನಸಂತರ್ಪಣೆ ಬಹಳಷ್ಟು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ

ಗದಗ: ನವ ವಿವಾಹಿತ ದಂಪತಿಗಳು ಆದರ್ಶ ಜೀವನ ಸಾಗಿಸಲಿ, ಮಕ್ಕಳಿಗೆ ಒಳ್ಳೆ ಸಂಸ್ಕಾರ ಸಂಸ್ಕೃತಿ ನೀಡಿ ಧರ್ಮದ ಹಾದಿಯಲ್ಲಿ ಮುನ್ನಡೆಸಿ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.

ಅವರು ಶುಕ್ರವಾರ ಗದುಗಿನ ಕಾಶಿ ವಿಶ್ವನಾಥ ನಗರ (ಬುಳ್ಳಾ ಪ್ಲಾಟ್)ನ ಕಾಶಿ ವಿಶ್ವನಾಥ ರಥೋತ್ಸವ ಹಾಗೂ ಜಗನ್ಮಾತೆ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮಗಳ 11 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜೀವನದಲ್ಲಿ ಸುಖ-ದುಃಖ, ಏರು-ಇಳಿತ ಬರುವದು ಸಹಜ. ಸಮಸ್ಯೆಗಳನ್ನು ಮೆಟ್ಟಿ ನಿಂತು ಛಲದಿಂದ ಬಾಳಿ ಸಾಧಿಸಿ ತೋರಿಸಬೇಕು ಇದನ್ನು ನವವಿವಾಹಿತರು ಅರಿತುಕೊಳ್ಳಬೇಕು. ಬಾಸಿಂಗ ಬಲ, ಕಷ್ಟ ಬಂದರೂ ತಾಳ್ಮೆ ಬೇಕು ಎಂದು ಸೂಚಿಸುವ ತಾಳಿ,ಕುಂಕುಮ, ಕಾಲುಂಗರದ ಔಚಿತ್ಯದ ಹಿನ್ನೆಲೆ ವಿಶ್ಲೇಷಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ನಾಯಕ ವಿಜಯಕುಮಾರ ಗಡ್ಡಿ ಮಾತನಾಡಿ, ಕಾಶಿ ವಿಶ್ವನಾಥ ನಗರದ ಆದರ್ಶತೆಗೆ ಹೆಸರಾಗಿದೆ. ಕಳೆದ 30 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ, ಮಹಾ ಅನ್ನಸಂತರ್ಪಣೆ ಬಹಳಷ್ಟು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಕಾಶಿ ವಿಶ್ವನಾಥ ನಗರದ ಅಧ್ಯಕ್ಷ ದುಂಡಪ್ಪ ಆಸಂಗಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಉತ್ಸಾಹಿ ಯುವಕರು ಜಾತ್ರೆ, ಸಾಮೂಹಿಕ ವಿವಾಹ, ಇತರ ಅಭಿವೃದ್ಧಿ ಕಾರ್ಯಗಳನ್ನು ಚೆನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಒಗ್ಗಟ್ಟು ಇದ್ದರೆ ಒಳ್ಳೆಯದನ್ನು ಮಾಡಲು ಸಾಧ್ಯ ಎಂದರು.

ಅತಿಥಿಗಳಾಗಿ ಪರಪ್ಪ ಉಮಚಗಿ, ದುಂಡಪ್ಪ ಆಸಂಗಿ, ಲಲಿತಾ ಅಸೂಟಿ, ಶಾಂತಪ್ಪ ಮುಳವಾಡ, ವಿರುಪಾಕ್ಷಪ್ಪ ರಾಮಗಿರಿ, ಚನ್ನವೀರಪ್ಪ ಮಳಗಿ, ಕಳಕನಗೌಡ ಕಡಬಲಕಟ್ಟಿ, ಗಂಗಾಧರ ಬಳಿಗೇರ, ದೇವಪ್ಪ ಮಳಗಿ, ಶೇಖಣ್ಣ ಮುಳವಾಡ, ರಮೇಶ ಅಣ್ಣಿಗೇರಿ, ಮಹಾಲಿಂಗಪ್ಪ ಬರಬರಿ, ಅಶೋಕ ಗಡಾದ ಮುಂತಾದವರಿದ್ದರು.

ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ನಿಂಗಪ್ಪ ಹೈದ್ರಿ ವಹಿಸಿದ್ದರು. ಶಾಂತಪ್ಪ ಅಕ್ಕಿ ನಿರೂಪಿಸಿ ವಂದಿಸಿದರು. ನಂತರ ಜರುಗಿದ ಮಹಾ ಅನ್ನಸಂತರ್ಪಣೆಗೆ ಕಲ್ಲಯ್ಯಜ್ಜನವರು ಚಾಲನೆ ನೀಡಿದರು. ಸಂಜೆ ಕಾಶೀ ವಿಶ್ವನಾಥನ ಮಹಾರಥೋತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ, ಎಚ್‌ಡಿಕೆ ಜಾತಿವಾದಿಗಳಲ್ಲ, ಕುಟುಂಬವಾದಿಗಳು : ಸಿದ್ದರಾಮಯ್ಯ ತರಾಟೆ
₹5 ಅಕ್ರಮದಲ್ಲಿ ಪಾರಾಗಿದ್ದ ಲಮಾಣಿ ₹5 ಲಕ್ಷ ಕೇಸ್‌ನಲ್ಲಿ ಲೋಕಾ ಖೆಡ್ಡಾಕ್ಕೆ!